Statement of Shri Mahant Gowda, Grade 2 Tehsildar to register name in voter list by December 9
ಗಂಗಾವತಿ : ಸಮೀಪದ ಎಸ್ ಕೆಎನ್ ಜಿ ಕಾಲೇಜಿನಲ್ಲಿ ಜಿಲ್ಲಾಡಳಿತ ಕೊಪ್ಪಳ, ಜಿಲ್ಲಾ ಪಂಚಾಯತ್ ಕೊಪ್ಪಳ, ತಾಲೂಕು ಆಡಳಿತ ಗಂಗಾವತಿ, ತಾಲೂಕು ಸ್ವೀಪ್ ಸಮಿತಿ ವತಿಯಿಂದ ಹೊಸ ಮತದಾರರ ನೋಂದಣಿ ಹಾಗೂ ಪರಿಷ್ಕರಣೆ ಕುರಿತು ಗ್ರೇಡ್ 2 ತಹಸೀಲ್ದಾರರಾದ ಮಹಾಂತಗೌಡರ ಅಧ್ಯಕ್ಷತೆಯಲ್ಲಿ ವಿದ್ಯಾರ್ಥಿಗಳಿಗೆ ಗುರುವಾರ ಮಾಹಿತಿ ನೀಡಲಾಯಿತು.
ಗ್ರೇಡ್ 2 ತಹಸೀಲ್ದಾರರಾದ ಮಹಾಂತಗೌಡರ ಅವರು ಮಾತನಾಡಿ, ಸುಭದ್ರ ದೇಶಕ್ಕೆ ಶೇ.100 ರಷ್ಟು ಮತದಾನ ಆಗಬೇಕು. ಈ ಹಿನ್ನೆಲೆಯಲ್ಲಿ ಪ್ರತಿ ಮತಕ್ಕೂ ಮೌಲ್ಯವಿದೆ. 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ ಮತದಾನದ ಹಕ್ಕು ಪಡೆದುಕೊಳ್ಳಬೇಕು. ಪ್ರತಿ ಚುನಾವಣೆಗೂ ಮುನ್ನ ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಎಲ್ಲರೂ ಪರಿಶೀಲಿಸಿಕೊಳ್ಳಬೇಕು. ಗುರುತಿನ ಚೀಟಿಯಲ್ಲಿ ಏನಾದರೂ ತಿದ್ದುಪಡಿ ಇದ್ದರೆ ಸರಿಪಡಿಸಿಕೊಳ್ಳುವಂತೆ ಮಾಹಿತಿ ನೀಡಿದರು.
ಡಿ.9 ರವರೆಗೆ ಮತದಾರರ ನೋಂದಣಿ ಹಾಗೂ ಪರಿಷ್ಕರಣೆಗೆ ಅವಕಾಶ ಇದೆ. 18 ವರ್ಷ ಮೇಲ್ಪಟ್ಟ ಎಲ್ಲರೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ನಮೂನೆ 6 ಅರ್ಜಿಯನ್ನು ಭರ್ತಿ ಮಾಡಿ ತಮ್ಮ ವಾರ್ಡ್ ಬಿಎಲ್ ಓ ಅವರಿಗೆ ಸಲ್ಲಿಸಬೇಕು. ವೋಟರ್ ಹೆಲ್ಪ್ ಲೈನ್ ಮೊಬೈಲ್ ಆಪ್ ನಲ್ಲಿ ಕೂಡ ತುರ್ತು ನೋದಣಿಗೆ ಅವಕಾಶ ಇದೆ. ಯಾರೂ ಕೂಡ ನೋಂದಣಿ ಪ್ರಕ್ರಿಯೆಯಿಂದ ಹೊರಗುಳಿಯಬಾರದು ಎಂದರು.
ಚುನಾವಣಾ ವಿಭಾಗದ ಶಿರಸ್ತೇದಾರ್ ಶ್ರೀ ರವಿಕುಮಾರ ನಾಯಕವಾಡಿ ಅವರು ಮಾತನಾಡಿ, ವೋಟರ್ ಹೆಲ್ಪ್ ಲೈನ್ ಮೊಬೈಲ್ ಮುಖಾಂತರ ನೋಂದಣಿ ಕುರಿತಂತೆ ಮಾಹಿತಿ ನೀಡಿದರು. ಜೊತೆಗೆ ಈಶಾನ್ಯ ಕರ್ನಾಟಕ ಪದವೀಧರರ ಚುನಾವಣೆಗೂ ಕೂಡ ಹೆಸರು ನೋಂದಾಯಿಸಿಕೊಳ್ಳಲು ಡಿ.9 ರ ವೆರೆಗೆ ಅವಕಾಶ ಇದೆ. 2020 ರ ನವೆಂಬರ್ 1ಕ್ಕಿಂತ ಮುಂಚೆ ಪದವಿ ಪೂರ್ಣಗೊಳಿಸಿದವರು ಮತದಾನದ ಹಕ್ಕು ಪಡೆಯಲು ಅಗತ್ಯ ದಾಖಲೆಗಳೊಂದಿಗೆ ತಹಸೀಲ್ ಕಚೇರಿಗೆ ಅರ್ಜಿ ಸಲ್ಲಿಸಬೇಕು ಎಂದರು. ಇದೇ ವೇಳೆ ಗಂಗಾವತಿ ಎಸ್ ಕೆಎನ್ ಜಿ ಕಾಲೇಜಿನ ವಿದ್ಯಾರ್ಥಿಗಳಿಗೆ ನಮೂನೆ 6 ಅರ್ಜಿಗಳನ್ನು ವಿತರಿಸಲಾಯಿತು.
ಎಸ್ ಕೆಎನ್ ಜಿ ಕಾಲೇಜು ಪ್ರಾಚಾರ್ಯರಾದ ಜಾಜಿ ದೇವೇಂದ್ರಪ್ಪ, ಕನ್ನಡ ವಿಭಾಗ ಮುಖ್ಯಸ್ಥರಾದ ಜಗದೇವಿ ಕಲಶೆಟ್ಟಿ, ಎನ್ ಎಸ್ ಎಸ್ ಘಟಕದ ಸಂಯೋಜಕರಾದ ಡಾ.ರವಿಕಿರಣ್ , ಉಪತಹಸೀಲ್ದಾರರಾದ ಅಬ್ದುಲ್ ರಹೆಮಾನ್ , ಉಪ ಆಸ್ಪತ್ರೆ ಆಪ್ತ ಸಮಾಲೋಚಕರಾದ ಶಿವಾನಂದ ನಾಯಕರ್ , ತಾಪಂ ಐಇಸಿ ಸಂಯೋಜಕರಾದ ಬಾಳಪ್ಪ ತಾಳಕೇರಿ, ತಹಸಿಲ್ ಕಚೇರಿ ಸಿಬ್ಬಂದಿಗಳಾದ ಶ್ರೀಕಾಂತ, ದುರಗೇಶ ಇದ್ದರು.