Govt committed to fulfill demand of guest lecturers: Thandagi
ಕೊಪ್ಪಳ: ಅತಿಥಿ ಉಪನ್ಯಾಸಕರ ಕಾಯಮಾತಿ ಬೇಡಿಕೆ ಇವತ್ತಿನದ್ದೇನಲ್ಲ. ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಅವರ ಬೇಡಿಕೆ ಈಡೇರಿಕೆಗೆ ಸರಕಾರ ಬದ್ಧವಾಗಿದೆ ಎಂದು ಕನ್ಬಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಭರವಸೆ ನೀಡಿದರು.
ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಅನುರ್ದಿಷ್ಟಾವಧಿ ಧರಣಿನಿರತ ಅತಿಥಿ ಉಪನ್ಯಾಸಕರನ್ನು ಶುಕ್ರವಾರ ಭೇಟಿ ಮಾಡಿ, ಅವರ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಸರಕಾರಕ್ಕೆ ಅತಿಥಿ ಉಪನ್ಯಾಸಕರ ಕುರಿತು ಅಪಾರ ಗೌರವವಿದೆ ಎಂದರು.
ಹಿಂದಿನ ಸರಕಾರದಲ್ಲೂ ಅತಿಥಿ ಉಪನ್ಯಾಸಕರು ಹೋರಾಟ ನಡೆಸಿದ್ದು, ಗೌರವಧನ ಹೆಚ್ಚಳವಾಗಿರುವುದು ಗೊತ್ತಿದೆ. ಈಗ ಸೇವಾ ಕಾಯಂ ಬೇಡಿಕೆಯ ಆಗ್ರಹವನ್ನು ಸರಕಾರ ಗಮನಿಸುತ್ತಿದೆ. ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಗುತ್ತಿದೆ. ಸರಕಾರ ನಿಮ್ಮ ಪರವಾಗಿದ್ದು ಧರಣಿ ಹಿಂಪಡೆಯುವಂತೆ ಮನವಿ ಮಾಡಿದರು.
ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆಯಾದರೆ ಬಹುಶಃ ಬೇಡಿಕೆ ಈಡೇರಿಕೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸುತ್ತದೆ. ಆದರೆ ನಾನು ಬೇರೆ ಇಲಾಖೆಯ ಸಚಿವವಾಗಿ ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಯ ಈ ಧರಣಿ ಕುರಿತು ಪ್ರಸ್ತಾಪಿಸುವುದು ಸಮಂಜಸವಲ್ಲ. ವಿವಿಧ ಶಾಸಕರು ಈ ಬಗ್ಗೆ ಧ್ವನಿ ಎತ್ತಿದರೆ ಅಧಿವೇಶನದಲ್ಲಿ ಖಂಡಿತವಾಗಿ ಅತಿಥಿ ಉಪನ್ಯಾಸಕರ ಪರ ಮಾತನಾಡುವುದಾಗಿ ಆಶ್ವಾಸನೆ ನೀಡಿದರು.
ಅತಿಥಿ ಉಪನ್ಯಾಸಕರಾದ ಪ್ರಕಾಶ್ ಬಳ್ಳಾರಿ ನಿರೂಪಿಸಿದರು. ಸಣ್ಣದೇವೇಂದ್ರಸ್ವಾಮಿ ಸ್ವಾಗತಿಸಿದರು. ಬಸವರಾಜ ಕರುಗಲ್ ವಂದಿಸಿದರು. ಡಾ.ವೀರಣ್ಣ ಸಜ್ಜನರ್, ಜ್ಞಾನೇಶ್ವರ ಪತ್ತಾರ, ಗೀತಾ ಬನ್ನಿಕೊಪ್ಪ, ಶಿವಬಸಪ್ಪ ಮಸ್ಕಿ, ವಿಜಯಕುಮಾರ್ ಕುಲಕರ್ಣಿ, ಡಾ.ಗಿರಿಜಾ ತುರುಮುರಿ ಸಚಿವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಹಾಂತೇಶ ನೆಲಾಗಣಿ, ಕಲ್ಲಯ್ಯ ಅಬ್ಬಿಗೇರಿ, ವಿಜಯ ತೋಟದ, ಪ್ರಕಾಶ್ ಜಡಿಯವರ, ಡಾ.ತುಕಾರಾಂ ನಾಯಕ, ಸಂತೋಷಿ ಬೆಲ್ಲದ್, ಪ್ರದೀಪ್ ಪಲ್ಲೇದ್, ಮಹೇಶ, ಮಹಾಂತೇಶ, ತಾಯಪ್ಪ, ರಾಘವೇಂದ್ರ, ಮಂಜುನಾಥ, ಮಲ್ಲಿಕಾರ್ಜುನ, ಬಸವರಾಜ, ಶಿವರಾಜ, ಕಲ್ಲಯ್ಯಸ್ವಾಮಿ, ಡಾ.ಗೀತಾ, ಸರಸ್ವತಿ, ಉಷಾ, ಆಶಾ, ಗೋಣಿಬಸಪ್ಪ, ಶಿವಪ್ರಸಾದ್ ಮತ್ತಿತರರು ಇದ್ದರು.
.
“
“