Give majority to BSP for plural India: Shankar Siddapur
ಗಂಗಾವತಿ.ಏ.28: ಬಹುಜನ ಸಮಾಜ ಪಾರ್ಟಿಯ ಕೊಪ್ಪಳ ಲೋಕಸಭಾ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಶಂಕರ್ ಸಿದ್ದಾಪುರ ಮಸ್ಕಿ ವಿಧಾನಸಭಾ ಕ್ಷೇತ್ರ, ಸಿಂಧನೂರು ವಿಧಾನಸಭಾ ಕ್ಷೇತ್ರ, ಸಿರುಗುಪ್ಪ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶನಿವಾರದಂದು ಭರ್ಜರಿ ಪ್ರಚಾರ ನಡೆಸಿ ಮತಯಾಚಿಸಿದರು.
ಈ ವೇಳೆ ಮಾತನಾಡಿದ ಶಂಕರ್ ಸಿದ್ದಾಪುರ ಅವರು, ರಾಷ್ಟ್ರೀಯ ಅಧ್ಯಕ್ಷೆ, ಭಾರತದ ಭಾಗ್ಯವಿಧಾತೆ, ಬಹುಜನ ಸಮಾಜ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷೆ ಅಕ್ಕ ಮಾಯಾವತಿ ಜೀಯವರ ಆಶೀರ್ವಾದದಿಂದ ಹಾಗೂ ರಾಷ್ಟ್ರೀಯ ಮತ್ತು ಕರ್ನಾಟಕ ರಾಜ್ಯ ಸಮಿತಿಯ ಎಲ್ಲಾ ಹಿರಿಯ ನಾಯಕರ ಆಶೀರ್ವಾದದಿಂದ ನನಗೆ ಬಹುಜನ ಸಮಾಜ ಪಾರ್ಟಿ 08-ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ದೊರೆತಿದೆ. ನಮ್ಮ ಪಾರ್ಟಿಯಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನಿಗೂ ಉನ್ನತ ಸ್ಥಾನ ಮಾನ ಸಿಗುತ್ತದೆ ಎಂಬುದಕ್ಕೆ ನಾನೇ ಸಾಕ್ಷಿ. ಶೋಷಿತ, ದಮನಿತ, ಬಡವರ ಪರ ನಮ್ಮ ಪಾರ್ಟಿ ಹೋರಾಟ ನಡೆಸುತ್ತಿದ್ದು, ಸಾಮಾಜಿಕ ನ್ಯಾಯ, ಸಮಾನತೆಯ ಪರಿಕಲ್ಪನೆಯೊಂದಿಗೆ ನ್ಯಾಯಯುತ ಹೋರಾಟ ನಡೆಸುತ್ತಿದೆ. ಯಾವೊಬ್ಬ ಬಡವನ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಬಾರದು. ಹಗಲಿರುಳು ಬಿಸಲಲ್ಲಿ ದುಡಿಯುವ ರೈತರ ಉತ್ಪನ್ನಗಳಿಗೆ ಒಳ್ಳೆಯ ಬೆಲೆ ದೊರೆಯಬೇಕು. ಶೋಷಿತರಿಗೆ ಉನ್ನತ ಹುದ್ದೆ ದೊರೆಯಬೇಕು. ಗ್ರಾಮೀಣ ಭಾಗಗಳಲ್ಲಿ ಶುದ್ಧ ಕುಡಿಯುವ ನೀರು, ವಿದ್ಯುತ್ ಹಾಗೂ ರಸ್ತೆಗಳ ಸೌಲಭ್ಯ ಕಲ್ಪಿಸಬೇಕು ಎಂಬುವುದು ಬಿಎಸ್ಪಿಯ ಆಶಯವಾಗಿದೆ. ಸ್ವಾತಂತ್ರ ಪೂರ್ವದ ನಂತರ ಕಾಂಗ್ರೆಸ್ ಹಾಗೂ ಬಿಜೆಪಿ ಆಡಳಿತದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ದೇಶದ ಜನರಿಗೆ ಅಗತ್ಯ ಸೌಲಭ್ಯಗಳನ್ನು ನೀಡುವಲ್ಲಿ ಎರಡೂ ಪಕ್ಷಗಳು ಸೋತಿವೆ. ಈ ಬಾರಿ ಬಹುಜನ ಸಮಾಜ ಪಕ್ಷಕ್ಕೆ ಬೆಂಬಲ ನೀಡಿ ಅತ್ಯಮೂಲ್ಯವಾದ ಮತ ನೀಡುವ ಮೂಲಕ ವಿಕಸಿತ ಭಾರತಕ್ಕೆ ಮುನ್ನುಡಿ ಬರೆಯಬೇಕಿದೆ. ಬಹುತ್ವ ಭಾರತಕ್ಕಾಗಿ ಬಿಎಸ್ಪಿಗೆ ಬೆಂಬಲಿಸಿ ಮತ ನೀಡಿ ಎಂದು ಮನವಿ ಮಾಡಿದರು.
ಈ ಪ್ರಚಾರ ಸಭೆಯಲ್ಲಿ ಕೊಪ್ಪಳ ಜಿಲ್ಲೆಯ ಬಿಎಸ್ಪಿ ಹಿರಿಯ ನಾಯಕರಾದ ಎಮ್.ಕೆ. ಜಗ್ಗೇಶ್ ಮೌರ್ಯ, ಶಿವಪುತ್ರಪ್ಪ ಗುಮಗೇರಿ, ಜಿಲ್ಲಾ ಉಸ್ತುವಾರಿ ಹುಲಿಗೇಶ ದೇವರಮನಿ, ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಎಸ್.ಮೈಲಾರಪ್ಪ ವಕೀಲರು, ಸಂಜೀವ್ ಮೂರ್ತಿ ಬೇವಿನಗಿಡದ, ಅಕ್ಬರ್ ಸಾಬ್, ದುರ್ಗೇಶ್ ಸಂಗಾಪುರ, ಹುಲ್ಲೇಶ್ ಹೊಸಪೇಟೆ, ನಿಂಗಪ್ಪ ನಾಯಕ್, ಶಿವಣ್ಣ ಈಳಿಗನೂರ್, ಅಂಜಿನಪ್ಪ ಈಳಿಗನೂರ್, ದೊಡ್ಡಬಸಪ್ಪ ಸಾಯಿನಗರ, ಹನುಮಂತಪ್ಪ ಇನ್ನಿತರರು ಪಾಲ್ಗೊಂಡಿದ್ದರು.