Breaking News

ನವಲಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಸರ್ಕಾರ ಬದ್ಧ: ಡಿಸಿಎಂ ಡಿ.ಕೆ. ಶಿವಕುಮಾರ್

Government committed to construction of Navali parallel reservoir: DCM D.K. Shivakumar

ಕೊಪ್ಪಳ, ಜ. 27: ತುಂಗಾಭದ್ರಾ ನದಿಗೆ ನವಲಿ ಸಮಾನಾಂತರ ಜಲಾಶಯ ಸ್ಥಾಪಿಸಲು ನಮ್ಮ ಸರ್ಕಾರ ಬದ್ಧವಾಗಿದ್ದು, ಈ ಬಗ್ಗೆ ಚರ್ಚೆ ಮಾಡಲು ಸಮಯ ಕೇಳಿ ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಕೊಪ್ಪಳದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು ಹೇಳಿದ್ದಿಷ್ಟು;

“ಜಿಲ್ಲಾ ಮಂತ್ರಿಗಳು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯ ಶಾಸಕರು ನನ್ನ ಬಳಿ ಬಂದು ನವಲಿ ಸಮಾನಾಂತರ ಜಲಾಶಯ ಸ್ಥಾಪಿಸಲು ಒತ್ತಾಯಿಸಿದ್ದಾರೆ. ಈ ಬಗ್ಗೆ ಮೂರು ರಾಜ್ಯಗಳ ಸಚಿವರು ಚರ್ಚೆ ಮಾಡಬೇಕು ಎಂದು ಪತ್ರ ಬರೆದಿದ್ದೇನೆ. ಆಂಧ್ರ ಪ್ರದೇಶದವರು ಚುನಾವಣೆಯಲ್ಲಿ ನಿರತರಾಗಿರಬೇಕು. ಹೀಗಾಗಿ ಚರ್ಚೆ ಮಾಡಲು ಅವರು ಸಮಯ ನೀಡಿಲ್ಲ.

ಮೂರು ರಾಜ್ಯಗಳ ಸಚಿವರು ಕೂತು ಚರ್ಚೆ ಮಾಡಿ, ಪೋಲಾಗುತ್ತಿರುವ 30 ಟಿಎಂಸಿ ನೀರನ್ನು ಬಳಸಿಕೊಳ್ಳಲು ಮುಂದಾಗುತ್ತೇವೆ. ಇದರಿಂದ ಮೂರು ರಾಜ್ಯಗಳಿಗೆ ಅನುಕೂಲವಾಗಲಿದೆ. ಹೂಳು ತೆಗೆಯುವುದಕ್ಕಿಂತ ಹೊಸ ಸಮತೋಲಿತ ಜಲಾಶಯ ನಿರ್ಮಾಣ ಉತ್ತಮ ಆಯ್ಕೆಯಾಗಿದೆ. ಈ ಭಾಗದ ಜನರ ಅನುಕೂಲಕ್ಕಾಗಿ ನಾವು ಜಲಾಶಯ ನಿರ್ಮಾಣಕ್ಕೆ ಬದ್ಧವಾಗಿದ್ದೇವೆ. ಮುಖ್ಯಮಂತ್ರಿಗಳು ಈ ವಿಚಾರವನ್ನು ಸದನದಲ್ಲಿ ಪ್ರಸ್ತಾಪ ಮಾಡಿದ್ದಾರೆ. ನಾನು ಈ ಹಿಂದೆ ಜಲಸಂಪನ್ಮೂಲ ಸಚಿವನಾಗಿದ್ದಾಗ ಈ ಬಗ್ಗೆ ಚರ್ಚೆ ಆಗಿತ್ತು. ಈಗ ಅದನ್ನು ಮುಂದುವರಿಸಿಕೊಂಡು ಹೋಗುತ್ತೇವೆ.”

ಮಠದ ಸಾಮಾಜಿಕ ಕ್ರಾಂತಿಗೆ ಸರ್ಕಾರದಿಂದ ಸಹಕಾರ

“ಬಹಳ ವರ್ಷಗಳಿಂದ ಗವಿಸಿದ್ದೇಶ್ವರ ಮಠದ ಇತಿಹಾಸ ಕೇಳಿದ್ದೇನೆ. ಎರಡು ಮೂರು ಬಾರಿ ಭೇಟಿ ನೀಡಿದ್ದೆ. ಈ ವರ್ಷ ಈ ದೊಡ್ಡ ಜಾತ್ರೆಯಲ್ಲಿ ಭಾಗವಹಿಸಲು ಸಂತೋಷದಿಂದ ಇಲ್ಲಿಗೆ ಬಂದಿದ್ದೇನೆ.

ಈ ಮಠದಿಂದ ಸಾಮಾಜಿಕ ಕ್ರಾಂತಿ ನಡೆಯುತ್ತಿರುವ ಬಗ್ಗೆಯೂ ನನಗೆ ಮಾಹಿತಿ ಇದೆ. ಶ್ರೀಗಳು ಜವಾಬ್ದಾರಿ ತೆಗೆದುಕೊಂಡ ನಂತರ ಹೊಸ ಆಚಾರ ವಿಚಾರಗಳತ್ತ ಹೆಜ್ಜೆ ಹಾಕಿ ಸಾಮಾಜಿಕ ಬದಲಾವಣೆ ತರುತ್ತಿದ್ದಾರೆ. ಈ ಕಾರ್ಯಕ್ಕೆ ಸಹಕಾರ, ಪ್ರೋತ್ಸಾಹ ನೀಡಲು ಸರ್ಕಾರದ ಪ್ರತಿನಿಧಿಯಾಗಿ ಬಂದಿದ್ದೇನೆ. ಈ ಭಾಗದ ಧಾರ್ಮಿಕ ಹಾಗೂ ಚಾರಿತ್ರಿಕ ಜಾತ್ರೆಯಲ್ಲಿ ಭಾಗವಹಿಸಿ, ಈ ಭಾಗದ ಜನರ ಜೊತೆ ನಾವು ಇದ್ದೇವೆ ಎಂದು ಹೇಳಲು ಬಯಸುತ್ತೇನೆ.”

ಪ್ರಶ್ನೋತ್ತರ:

ಶಾಮನೂರು ಶಿವಶಂಕರಪ್ಪ ಅವರಿಗೆ ಕಾಂಗ್ರೆಸ್ ಗಿಂತ ಬಿಜೆಪಿ ಮೇಲೆ ಒಲವು ಹೆಚ್ಚುತ್ತಿದೆ ಎಂದು ಕೇಳಿದಾಗ, “ಅವರು ಹಿರಿಯ ಶಾಸಕರಾಗಿದ್ದು, ಅವರ ಹೇಳಿಕೆಯನ್ನು ನಾನು ಗಮನಿಸಿಲ್ಲ. ಅದನ್ನು ನೋಡಿ ಮುಂದೆ ಮಾತನಾಡುತ್ತೇನೆ” ಎಂದು ತಿಳಿಸಿದರು.

ಬಿಜೆಪಿ ಹಾಗೂ ಅದರ ನಾಯಕರ ಬಗ್ಗೆ ಶೆಟ್ಟರ್ ಆಡಿದ ಮಾತಿಗೆ ಅವರೇ ಉತ್ತರಿಸಲಿ:

ಶೆಟ್ಟರ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಬಿಜೆಪಿ ತಮಗೆ ಅನ್ಯಾಯ ಮಾಡಿದೆ ಎಂದು ಹೇಳಿ ಶೆಟ್ಟರ್ ಅವರು ನಮ್ಮ ಪಕ್ಷಕ್ಕೆ ಸೇರಿಕೊಂಡರು. ನಾವು ಅವರನ್ನು ಗೌರವಯುತವಾಗಿ ನಡೆಸಿಕೊಂಡು ಟಿಕೆಟ್ ನೀಡಿದೆವು. ಅವರನ್ನು ಜನ ದೊಡ್ಡ ಅಂತರದಲ್ಲಿ ಮಣಿಸಿದರು. ಆದರೆ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಪಕ್ಷಕ್ಕೆ ಬಂದಿದ್ದಾರೆ ಎಂದು ಅವರನ್ನು ಪರಿಷತ್ ಸ್ಥಾನಕ್ಕೆ ನಾಮನಿರ್ದೇಶನ ಮಾಡಿದೆವು. ಬಿಜೆಪಿ ನಾಯಕರ ವಿರುದ್ಧ ಅವರು ಆಡಿದ ನುಡಿಮುತ್ತುಗಳನ್ನು ಕೇಳಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡೆವು. ನನ್ನನ್ನು ಸಿಎಂ ಹಾಗೂ ಡಿ.ಕೆ. ಶಿವಕುಮಾರ್ ಅವರು ಗೌರವಯುತವಾಗಿ ನಡೆಸಿಕೊಂಡಿದ್ದಾರೆ. ನಾನು ನನ್ನ ಮನೆಗೆ ಮರಳಿದ್ದೇನೆ ಎಂದು ಹೇಳಿದ್ದಾರೆ. ಅವರು ನಮ್ಮ ಪಕ್ಷದ ನಾಯಕತ್ವ, ಸಿದ್ಧಾಂತ ಒಪ್ಪಿ ಬಂದ ಕಾರಣ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡೆವು. ಅವರು ಈ ಹಿಂದೆ ಬಿಜೆಪಿ ವಿರುದ್ಧ ಕೊಟ್ಟ ಹೇಳಿಕೆಗಳಿಗೆ ಈಗ ಅವರೇ ಉತ್ತರ ನೀಡಲಿ” ಎಂದು ತಿಳಿಸಿದರು.

ರಾಜಕಾರಣದಲ್ಲಿ ಪಕ್ಷ ಬಿಡುವುದು, ಮತ್ತೆ ಸೇರುವುದು ಸಹಜ ಎಂದು ಶೆಟ್ಟರ್ ಹೇಳಿರುವ ಬಗ್ಗೆ ಕೇಳಿದಾಗ, “ನಾವು ಸಹಜ ಅಂತಾ ಹೇಳುತ್ತಿದ್ದೇವೆ. ರಾಜಕಾರಣ ನಿಂತ ನೀರಲ್ಲ, ಸಮುದ್ರ ಇದ್ದಂತೆ. ಎಷ್ಟೋ ಜನ ಬರುತ್ತಾರೆ, ಹೋಗುತ್ತಾರೆ” ಎಂದು ತಿಳಿಸಿದರು.

ಪಕ್ಷಕ್ಕೆ ಬರುವವರ ತತ್ವ ಸಿದ್ಧಾಂತ ನೋಡಿ ಪಕ್ಷಕ್ಕೆ ಸೇರಿಸಿಕೊಳ್ಳಿ ಎಂಬ ಖರ್ಗೆ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಅವರು ಕಿವಿ ಮಾತು ಹೇಳಿದ್ದಾರೆ. ಹಿರಿಯರ ಮಾತನ್ನು ಗಮನದಲ್ಲಿ ಇಟ್ಟುಕೊಳ್ಳುತ್ತೇವೆ” ಎಂದು ತಿಳಿಸಿದರು.

ನಾವು ಕೊಟ್ಟ ಮಾತಿನಂತೆ ನಡೆಯುತ್ತೇವೆ:

ಕಳೆದ ಬಿಜೆಪಿ ಸರ್ಕಾರ ಗವಿ ಮಠಕ್ಕೆ 10 ಕೋಟಿ ರೂ. ಅನುದಾನ ಘೋಷಣೆ ಮಾಡಿತ್ತು. ಈಗ ಅದರ ಬಗ್ಗೆ ನಿಮ್ಮ ಸರ್ಕಾರ ಆಲೋಚನೆ ಮಾಡಿದೆಯೇ ಎಂದು ಕೇಳಿದಾಗ, “ಕೇವಲ ಮಾತಾಡಿದರೆ ಸಾಲದು. ನಿಮ್ಮ ಜೇಬಿಗೆ ಹಣ ಬಂದಾಗಷ್ಟೆ ಅದು ಬಂತು ಎಂದು ಹೇಳಬಹುದು. ನಾವು ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಇದಕ್ಕಾಗಿ 60 ಸಾವಿರ ಕೋಟಿ ಅನುದಾನ ಮೀಸಲಿಟ್ಟಿದ್ದೇವೆ. ಆ ಸರ್ಕಾರ ಕೇವಲ ಘೋಷಣೆ ಮಾಡಿತ್ತು, ಹಣ ನೀಡಿರಲಿಲ್ಲ. ಈ ವಿಚಾರವಾಗಿ ನೀವು ಗಮನ ಸೇಳೆದಿದ್ದೀರಿ. ಈ ಬಗ್ಗೆ ಚರ್ಚೆ ಮಾಡುತ್ತೇವೆ” ಎಂದು ತಿಳಿಸಿದರು.

ಲೋಕಸಭೆ ನಂತರ ಗ್ಯಾರಂಟಿ ಯೋಜನೆಗಳು ಬಂದ್ ಆಗುತ್ತವೆ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, “ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಇದನ್ನು ಬಂದ್ ಮಾಡುತ್ತಾರೆ. ಕಾಂಗ್ರೆಸ್ ಸರ್ಕಾರ ಇದನ್ನು ಬಂದ್ ಮಾಡುವುದಿಲ್ಲ. ಬದಲಿಗೆ ಇದಕ್ಕೆ ಶಕ್ತಿ ತುಂಬುತ್ತೇವೆ. ಅವರು ಭಾವನೆ ಮೇಲೆ ರಾಜಕಾರಣ ಮಾಡಿದರೆ, ನಾವು ಜನರ ಬದುಕಿನ ಮೇಲೆ ರಾಜಕಾರಣ ಮಾಡುತ್ತಿದ್ದೇವೆ” ಎಂದು ತಿಳಿಸಿದರು.

ಸುಬ್ಬಾರೆಡ್ಡಿ ಅವರು ನಿಗಮ ಮಂಡಳಿ ಸ್ಥಾನ ಬೇಡ ಎಂದು ಹೇಳಿರುವ ಬಗ್ಗೆ ಕೇಳಿದಾಗ, “ಅವರೊಬ್ಬರೇ ಅಲ್ಲ ಬಹಳ ಜನ ಬೇಡ ಎಂದಿದ್ದಾರೆ. ತುಕಾರಾಮ್, ತನ್ವೀರ್ ಸೇಠ್, ರಾಘವೇಂದ್ರ, ರಿಜ್ವಾನ್ ಅರ್ಷದ್ ಅವರು ಬೇಡ ಎಂದು ಹೇಳಿದ್ದಾರೆ” ಎಂದು ತಿಳಿಸಿದರು.

ಹೈಕಮಾಂಡ್ ಪಟ್ಟಿ ಬದಲಿಸಿದ್ದಾರೆ ಎಂದು ಕೇಳಿದಾಗ, “ಯಾವ ಪಟ್ಟಿಯನ್ನು ಬದಲಿಸಿಲ್ಲ. ನಾವು ಹೇಳಿದಂತೆ ಪಟ್ಟಿ ಮಾಡಿದ್ದು, ಅದಕ್ಕೆ ಅನುಮೋದನೆ ನೀಡಲಾಗಿದೆ” ಎಂದು ತಿಳಿಸಿದರು.

ಯತ್ನಾಳ್ ಅವರ ಕಾರ್ಖಾನೆ ಬಂದ್ ಮಾಡುತ್ತಿರುವುದರ ಬಗ್ಗೆ ಕೇಳಿದಾಗ, “ಮಾಲಿನ್ಯ ನಿಯಂತ್ರಣ ಮಂಡಳಿ ಮಾನದಂಡ ಹಾಗೂ ಕ್ರಮಗಳ ಬಗ್ಗೆ ನನಗೆ ಗೊತ್ತಿಲ್ಲ. ನಾವು ಅವರ ವಿರುದ್ಧ ಯಾಕೆ ದ್ವೇಷ ಮಾಡೋಣ” ಎಂದು ತಿಳಿಸಿದರು.

ಮುಖ್ಯಮಂತ್ರಿ ಐದು ವರ್ಷ ಅಧಿಕಾರದಲ್ಲಿ ಇರುತ್ತಾರ ಎಂದು ಕೇಳಿದಾಗ, “ಈಗ ಅವರೇ ಮುಖ್ಯಮಂತ್ರಿ ಆಗಿದ್ದಾರಲ್ಲ. ನಿಮಗೆ ಯಾಕೆ ಅದರ ಬಗ್ಗೆ ಚಿಂತೆ” ಎಂದು ಪ್ರಶ್ನಿಸಿದರು.

About Mallikarjun

Check Also

ಹನೂರು ವಿದಾನಸಭಾ ಕ್ಷೇತ್ರದಲ್ಲಿ ಮೂಲಭೂತ ಸೌಲಭ್ಯಗಳಿಗೆ ಆಗ್ರಹಿಸಿ ಮತದಾನ ಬಹಿಷ್ಕಾರ ಮತಗಟ್ಟೆ ಧ್ವಂಸ

ವರದಿ : ಬಂಗಾರಪ್ಪ ಸಿ .ಹನೂರು : ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರದ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.