Unveiling of the picture of World’s First Parliament’ Experience Hall at Suvarna Soudha, Belgaum

ಬೆಳಗಾವಿ:. ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣನವರು ಸ್ಥಾಪಿಸಿದ ‘ವಿಶ್ವದ ಮೊದಲ ಸಂಸತ್ತು’ ಅನುಭವ ಮಂಟಪದ ಬೃಹತ್ ತೈಲವರ್ಣ ಚಿತ್ರ ಬೆಳಗಾವಿಯ ಸುವರ್ಣ ಸೌಧದಲ್ಲಿ ಸೋಮವಾರ ಬೆಳಗ್ಗೆ 10.30ಕ್ಕೆ ಅನಾವರಣಗೊಳ್ಳಲಿದೆ.

20 ಅಡಿ ಉದ್ದ ಮತ್ತು 10 ಅಡಿ ಅಗಲದ ಈ ವಿಶೇಷ ಚಿತ್ರವನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನಾವರಣಗೊಳಿಸಲಿದ್ದಾರೆ. ಯು.ಟಿ.ಖಾದರ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖ್ಯ ಅತಿಥಿಯಾಗಿರುವರು.
ಒಂದು ಪ್ರಖ್ಯಾತ ಕಲಾವಿದರ ತಂಡ ಚಿತ್ರವನ್ನು ಕ್ಯಾನ್ವಾಸ್ ಮೇಲೆ ತೈಲ ಮಾಧ್ಯಮದ ಮೂಲಕ ರಚಿಸಿದ್ದಾರೆ. ಇದು ಬೆಂಗಳೂರು ಚಿತ್ರಕಲಾ ಪರಿಷತ್ತಿನ ಶ್ರೀ ಸತೀಶರಾವ ಶಿವಮೊಗ್ಗ, ಶ್ರೀಕಾಂತ ಹೆಗಡೆ ಸಿದ್ಧಾಪುರ, ಶೇಷಾದ್ರಿಪುರಂ ಕೆನ್ ಸ್ಕೂಲ್ ಕಲಾಶಾಲೆಯ ಶ್ರೀ ಅಶೋಕ ಯು. ಜಗಳೂರು, ರಾಜಾ ರವಿವರ್ಮ ಕಲಾ ಶಾಲೆಯ ಶ್ರೀಮತಿ ರೂಪಾ ಎಂ.ಆರ್. ಶ್ರೀ ವೀರಣ್ಣ ಮಡಿವಾಳಪ್ಪ ಬಬ್ಲಿ, ಬೈಲಹೊಂಗಲ ಮತ್ತು ಶ್ರೀ ಮಹೇಶ ನಿಂಗಪ್ಪ ದಫಲಾಪುರ, ಜಮಖಂಡಿ ಅವರ ಪರಿಶ್ರಮದ ಫಲ.
ವಿಶ್ವದ ಮೊದಲ ಸಂಸತ್ತು ಅನುಭವ ಮಂಟಪವನ್ನು ಜನಮಾನಸದಲ್ಲಿ ಉಳಿಸುವ ಈ ಪ್ರಯತ್ನ ಬಿ.ಎಲ್.ಶಂಕರ ನೇತೃತ್ವದಲ್ಲಿ ನಡೆದಿದೆ ಎಂದು ಹೇಳಲಾಗಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಲು ಶಾಸಕರಿಗೆ ಪತ್ರ ಬರೆದಿರುವ ಸಭಾಧ್ಯಕ್ಷ ಯು.ಟಿ. ಖಾದರ್ ಅನುಭವ ಮಂಟಪ ಸಾಂಸ್ಕೃತಿಕ ನಾಯಕ ಬಸವಣ್ಣನವರ ನೇತೃತ್ವದಲ್ಲಿ ಸ್ಥಾಪಿಸಲಾಗಿದ್ದ ಪ್ರಪಂಚದ ಮೊದಲ ಸಂಸತ್ತಾಗಿತ್ತು ಎಂದು ಸ್ಮರಿಸಿಕೊಂಡಿದ್ದಾರೆ.
ಅನುಭವ ಮಂಟಪವು ಸರ್ವಜನಾಂಗದ ಶರಣರಾದ ಅಕ್ಕಮಹಾದೇವಿ, ಮಾದಾರ ಚೆನ್ನಯ್ಯ, ಅಂಬಿಗರ ಚೌಡಯ್ಯ, ಸಿದ್ದರಾಮೇಶ್ವರ, ಮಡಿವಾಳ ಮಾಚಿದೇವ, ಡೋಹರ ಕಕ್ಕಯ್ಯ, ಮೇದಾರ ಕೇತಯ್ಯ, ಬಹುರೂಪಿ ಚೌಡಯ್ಯ, ಕೇತಲದೇವಿ, ದುಗ್ಗಳೆ, ಕಾಳವ್ವ ಹೀಗೆ ಸಮಾಜದ ಎಲ್ಲಾ ವರ್ಗಗಳ ಜನರ ಆಚಾರ-ವಿಚಾರಗಳ ಚಿಂತನ-ಮಂಥನದ ಕೇಂದ್ರವಾಗಿತ್ತು, ಅಲ್ಲಮಪ್ರಭು ಅದರ ಮೊದಲ ಸಭಾಧ್ಯಕ್ಷರಾಗಿದ್ದರು, ಎಂದು ಪತ್ರದಲ್ಲಿ ಹೇಳಿದ್ದಾರೆ.