Breaking News

ಭಾವೈಕ್ಯತೆಯ ಗುರು ಲಿಂಗೈಕ್ಯ ತೋಂಟದ ಸಿದ್ದಲಿಂಗ ಸ್ವಾಮಿಗಳು

Siddalinga Swami of Lingaikya Tonta is the Guru of Bhavaikya

ಇದೊಂದು ದುರಂತದ ಕಾಲಘಟ್ಟ . ಈಗ ಪ್ರತಿಯೊಂದು ಪದಕ್ಕೂ ಸೀಮಿತವಾದ ಅರ್ಥ ಹುಡುಕು ಪ್ರಯತ್ನ ಎಲ್ಲಾ ಕ್ಷೇತ್ರಗಳಲ್ಲಿ ನಡೆಯುತ್ತಿದೆ . ಅದರಂತೆ ಧಾರ್ಮಿಕ ಕ್ಷೇತ್ರವೂ ಅಂತಹದೊಂದು ಘಟನೆಗೆ ಸಾಕ್ಷಿಯಾಯಿತು. ಗದುಗಿನ ತೋಂಟದಾರ್ಯ ಮಠದ ಹಿಂದಿನ ಪೂಜ್ಯರಾದ ಲಿಂಗೈಕ್ಯ ತೋಂಟದ ಸಿದ್ದಲಿಂಗ ಸ್ವಾಮಿಗಳ ಹುಟ್ಟು ಹಬ್ಬವನ್ನು ಭಾವೈಕ್ಯತೆಯ ದಿನಾಚರಣೆಯೆಂದು ಆಚರಣೆ ಮಾಡುವ ಸಂಧರ್ಭದಲ್ಲಿ , ಭಾವೈಕ್ಯತೆಯ ಎನ್ನುವುದು ಕೇವಲ ನಮ್ಮ ಮಠಕ್ಕೆ ಸೀಮಿತವಾದದ್ದು , ವಿರಕ್ತ ಮಠಗಳು ಭಾವೈಕ್ಯತೆಯ ದಿನಾಚರಣೆ ಮಾಡಿದರೆ ನಾವು ಆ ದಿನವನ್ನು ಕರಾಳ ದಿನಾಚರಣೆ ಮಾಡುವುದಾಗಿ ಹೇಳಿಕೆ ನೀಡಿದ ಇನ್ನೊಬ್ಬ ಸ್ವಾಮಿಗಳು ಹೇಳಿಕೆ ನಿಜಕ್ಕೂ ಸಂಕುಚಿತವಾದದ್ದು ಅನಿಸಿತು. ವಿಶಾಲ ಪ್ರಜ್ಞೆಯನ್ನು ಹೊಂದಿದ ಭಾವೈಕ್ಯತೆ ಎನ್ನುವುದು ಇಂದು ಕೆಲವೊಂದು ಮಠಗಳಿಗೆ , ಕೇಲವೊಂದು ದರ್ಗಾ ಮಸೀದಿಗಳಿಗೆ ಮತ್ತು ಚರ್ಚ್ ಗಳಿಗೆ ಸೀಮಿತ ಮಾಡಿ ನೋಡುವುದು ಎಷ್ಟು ಸರಿ?.

ಕರ್ನಾಟಕದ ಎಲ್ಲಾ ವಿರಕ್ತ ಮಠಗಳು ಭಾವೈಕ್ಯತೆಯನ್ನು ಆಚರಿಸುತ್ತಾ ಬಂದಿವೆ. ಬಸವಣ್ಣನ ಪರಂಪರೆಯ ಮಠಗಳು ಅತ್ಯಂತ ಗಟ್ಟಿಯಾಗಿ ಭಾವೈಕ್ಯತೆಯ ಮನೋಭಾವ ಹೊಂದಿವೆ. ಬಸವಣ್ಣನ ಮೂಲ ಆಸೆಯೇ ಭಾವೈಕ್ಯತೆ.

ಇವನಾರವ ಇವನಾರವ ಇವನಾರವ ಎಂದೆನಿಸದಿರಯ್ಯಾ
ಇವನಮ್ಮವ ಇವನಮ್ಮವ ಇವನಮ್ಮವ ಎಂದೆನಿಸಯ್ಯಾ
ಕೂಡಲಸಂಗಮ ದೇವಾ ನಿಮ್ಮ ಮಹಾಮನೆಯ
ಮಗನೆಂದೆನಿಸಯ್ಯಾ “

ಎನ್ನುವ ವಚನವೆ ಇಂದಿನ ಬಸವ ಪರಂಪರೆಯ ಮಠಗಳ ಜೀವಾಳವಾಗಿರುವಾಗ ಭಾವೈಕ್ಯತೆಯ ಎನ್ನುವುದು ಕೇಲವೊಂದು ಮಠಗಳಿಗೆ ಮಾತ್ರ ಹೇಗೆ ಸೀಮಿತವಾಗುತ್ತದೆ ? . ಕೂಡಲ ಸಂಗಮದೇವನ ಮಹಾಮನೆಯ ಮಗನೆಂದು ಎಲ್ಲರೂ ಒಳಗೊಳ್ಳುವ, ಎಲ್ಲರನ್ನೂ ಅಪ್ಪಿಕೊಳ್ಳುವ ಬಸವ ಪರಂಪರೆಯ ಮಠಗಳು ಈ ನೆಲದಲ್ಲಿ ಯಾವಾಗಲೂ ಭಾವೈಕ್ಯತೆಯ ಬೀಜವನ್ನು ಬಿತ್ತುತ್ತಾ ಬಂದಿವೆ.

ಈ ಸಂಧರ್ಭದಲ್ಲಿ ಇಳಕಲ್ಲಿನ ಲಿಂಗೈಕ್ಯ ಮಹಾಂತಪ್ಪಗಳ ಮಾತು ನಿಜಕ್ಕೂ ಪ್ರಸ್ತುತಾ ಎನಿಸುತ್ತದೆ .
” ಲಿಂಗವಿಲ್ಲದವರು ಎಂದು ದೂರಿರುವುದು ನಮ್ಮಿಂದಾಗುವುದಿಲ್ಲ . ಅವರ ಹತ್ತಿರ ಹೋಗಿ , ಲಿಂಗದ ಮಹತಿ ತಿಳಿಸಿ , ಅವರನ್ನು ಲಿಂಗಾಂಗಿಯನ್ನಾಗಿ ಮಾಡುವಲ್ಲಿ ನಮ್ಮ ಕರ್ತವ್ಯ ಪವಿತ್ರಗೊಳ್ಳುತ್ತದೆ ಎಂದು ನಾವು ಸದಾ ಭಾವಿಸುತ್ತೆವೆ.ಹಾಗೆ ಬಯಸುತ್ತೆವೆ,ಹಾಗೂ ಬದುಕುತ್ತೆವೆ.” ಲಿಂಗವಂತ ಧರ್ಮಾನುಯಾಯಿಗಳು ನಮ್ಮ ಮನೆಯವರು ; ಲಿಂಗಾಯತೇತರ ಸರ್ವ ಧರ್ಮದವರು ನಮ್ಮ ಮನದವರು ” ಎನ್ನುವ ಅವರ ಬದುಕು, ನಡೆ ನುಡಿ ಎಲ್ಲವೂ ವಿಶ್ವಮಾನವ ಪ್ರಜ್ಞೆಯ ಅಂತಃಕರಣದ ನುಡಿಗಳು ಭಾವೈಕ್ಯತೆಯಲ್ಲವೇ?. ಅವರು ಈ ಮಾತುಗಳು ನೆಲದ ಭಾವೈಕ್ಯತೆಯ ಎತ್ತಿ ಹಿಡಿದ ಮನುಷ್ಯ ಪ್ರಜ್ಞೆಯ ನುಡಿಗಳು .

” ನಾ ನೀನೆಂಬ ಭಾವವಾರಿಂದಾಯಿತ್ತು ಹೇಳಾ
ನೀನೆಂಬುದು ಅಜ್ಞಾನ ನಾನೆಂಬುದು ಮಾಯಾಧೀನ
ನೀನೆನ್ನದೆ ನಾನೆನ್ನದೆ ಇಪ್ಪಸುಖವ ಭಿನ್ನವಿಲ್ಲದೆ ಅರಿಯಬಲ್ಲಡೆ
ಆ ಸುಖ ನಿಮಗರ್ಪಿತ ಕಾಣಾ ಗುಹೇಶ್ವರಾ ” ಎನ್ನುವ ಅಲ್ಲಮರ ವಚನ ನೆನಪಾಗುತ್ತದೆ. ಬಸವಾದಿ ಶರಣರ ಪ್ರತಿಯೊಂದು ವಚನಗಳು ಭಾವೈಕ್ಯತೆಯ ಬೀತ್ತಿ ಮನುಷ್ಯ ಮನುಷ್ಯನ ಮಧ್ಯೆ ಪ್ರೀತಿ ಹುಟ್ಟಿಸುವಂತವು ಅವರ ಆ ಎಲ್ಲಾ ವಚನಗಳು ಭಾವೈಕ್ಯತೆಯ ಅಮೃತವನ್ನು ಸಮಾಜಕ್ಕೆ ಊಣಬಡಿಸಿವೆ.

ಇನ್ನೂ ಗದುಗಿನ ಮಠ ವಿಶಿಷ್ಟವಾದ ಮಠ ಭಾವೈಕ್ಯತೆಯ ಸನಾಜದಲ್ಲಿ ಆಳವಾಗಿ ಬಿತ್ತಿದ ಮಠ. ಇಂದಿಗೂ ವೀರನಾರಾಯಣ , ತ್ರಿಕೊಟೇಶ್ವರ , ಜುಮ್ಮಾ ಮಸೀದಿ ಈ ಮೂರು ಧಾರ್ಮಿಕ ಕೇಂದ್ರಕ್ಕೆ ಒಂದಘ ಟ್ರಸ್ಟ್ ಇದೆ. ಇದರಲ್ಲಿ ಎಲ್ಲಾ ಮತ ಧರ್ಮದವರು ಸದಸ್ಯರಿದ್ದಾರೆ.ಇನ್ನೂ ಗದುಗಿನ ಮಠಕ್ಕೆ ಮುಸ್ಲಿಂ ಭಕ್ತರೂ ಇದ್ದಾರೆ , ಮಠದಲ್ಲಿ ಕ್ರಿಶ್ಚಿಯನ್ , ಮುಸಲ್ಮಾನ್. ಜೈನ,ಬೌದ್ದ ಮೊದಲಾದ ಎಲ್ಲಾ ಧರ್ಮಗಳ ಹಬ್ಬವನ್ನು ಆಚರಿಸುತ್ತಾರೆ.ಒಮ್ಮೆ ಜಾತ್ರಾ ಮಹೋತ್ಸವದ ಅಧ್ಯಕ್ಷರನ್ನಾಗಿ ಮುಸಲ್ಮಾನ್ ಬಂಧುಗಳನ್ನು ಆಯ್ಕೆ ಮಾಡಲಾಗಿತ್ತು. ಇಷ್ಟೆ ಅಲ್ಲದೆ ಲಿಂಗೈಕ್ಯ ಸಿದ್ದಲಿಂಗ ಮಹಾಸ್ವಾಮಿಗಳು ನಾಡಿನ ಎಲ್ಲಾ ಸಮುದಾಯದ ಜನಸಾಮಾನ್ಯರೊಂದಿಗೆ ಸಾಮರಸ್ಯ ಸಂಭಂದ ಹೊಂದಿದವರಾಗಿದ್ದರು , ಎಲ್ಲಾ ಸಮುದಾಯಗಳಿಗೆ ನೆಚ್ಚಿನ ಗುರುಗಳು ಆಗಿದ್ದರು.ಹಾಗಾಗಿ ಅವರ ಜನ್ಮದಿನೋತ್ಸವದಂದು ಭಾವೈಕ್ಯತೆ ದಿನಾಚರಣೆಯನ್ನಾಗಿ ಆಚರಿಸಿದರೆ ತಪ್ಪೇನೂ!!?.

ಇಷ್ಟೆ ಅಲ್ಲಾ ಬಸವಣ್ಣನನ್ನು ಅಪ್ಪಿದಂತ ಈ ನೆಲದ ಬಹುತೇಕ ಮಠಗಳು ಯಾವುದೇ ಜಾತಿ ತಾರತಮ್ಯವಿಲ್ಲದೆ ಮಕ್ಕಳಿಗೆ ಶಿಕ್ಷಣ ನೀಡಿವೆ. ಹಸಿದು ಬಂದವರಿಗೆ ದಾಸೋಹ ಮಾಡಿವೆ ಹಾಗಾಗಿ ಬಸವಣ್ಣನ್ನನ್ನು ಒಪ್ಪಿದಂತ ಈ ನೆಲದ ಬಹುತೇಕ ಮಠಗಳು ಭಾವೈಕ್ಯತೆಯ ಮಠಗಳು ಎಂದರೆ ತಪ್ಪೇನು?. ಹಾಗಾಗಿ ಲಿಂಗೈಕ್ಯ ತೋಂಟದ ಸಿದ್ದಲಿಂಗ ಸ್ವಾಮಿಗಳ ಹುಟ್ಟು ಹಬ್ಬವನ್ನು ಭಾವೈಕ್ಯತೆ ದಿನಾಚರಣೆಯಾಗಿ ಆಚರಿಸಿದರೆ ತಪ್ಪೇನೂ? . ಆದರೆ ನೋಡುವ ನೋಟ ಬದಲಾಗಿ ನೋಡಿದರೆ ಈ ಜಗವೆಲ್ಲಾ ಸುಂದರ.

” ನೋಡುವುದ ನೋಡಲರಿಯದೆ ಕೆಟ್ಟಿತ್ತೀ ಲೋಕವೆಲ್ಲ
ನೋಡೋದ ನೋಡಬಲ್ಲಡೆ ಕೂಡಲಿಲ್ಲ ಅಗಲಲಿಲ್ಲ
ನೋಟದ ಮಾಟದ ಅಗಲದ ಸುಖವನು
ಗುಹೇಶ್ವರಾ ನಿಮ್ಮ ಶರಣ ಬಲ್ಲ.”

ಡಾ.ರಾಜಶೇಖರ ನಾರನಾಳ
ವೈದ್ಯರು ಗಂಗಾವತಿ
.

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.