Shatasthala-Shivayoga
ಅಂಗೇಂದ್ರಿಯ ಕರಣ ಹರಣದಲ್ಲಿ ಲಿಂಗವ ಧರಿಸಿ
ಲಿಂಗಾಂಗಿಯಾದನಯ್ಯ ನಿಮ್ಮ ಶರಣ.
ಅದೆಂತೆಂದಡೆ:
ಘ್ರಾಣದಲ್ಲಿ ಲಿಂಗವ ಧರಿಸಿದನಾಗಿ,
ಘ್ರಾಣ ಲಿಂಗದ ಘ್ರಾಣವಾಯಿತ್ತು.
ಜಿಹ್ವೆಯಲ್ಲಿ ಲಿಂಗವ ಧರಿಸಿದನಾಗಿ,
ಜಿಹ್ವೆ ಲಿಂಗದ ಜಿಹ್ವೆಯಾಯಿತ್ತು.
ನೇತ್ರದಲ್ಲಿ ಲಿಂಗವ ಧರಿಸಿದನಾಗಿ,
ನೇತ್ರ ಲಿಂಗದ ನೇತ್ರವಾಯಿತ್ತು.
ತ್ವಕ್ಕಿನಲ್ಲಿ ಲಿಂಗವ ಧರಿಸಿದನಾಗಿ,
ತ್ವಕ್ಕು ಲಿಂಗದ ತ್ವಕ್ಕಾಯಿತ್ತು.
ಶ್ರೋತ್ರದಲ್ಲಿ ಲಿಂಗವ ಧರಿಸಿದನಾಗಿ,
ಶ್ರೋತ್ರ ಲಿಂಗದ ಶ್ರೋತ್ರವಾಯಿತ್ತು.
ಮನದಲ್ಲಿ ಲಿಂಗವ ಧರಿಸಿದನಾಗಿ,
ಮನ ಲಿಂಗದ ಮನವಾಯಿತ್ತು.
ಸರ್ವಾಂಗದಲ್ಲಿ ಲಿಂಗವ ಧರಿಸಿದನಾಗಿ,
ಸರ್ವಾಂಗಲಿಂಗವಾಯಿತ್ತು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನಿಮ್ಮ ಶರಣಂಗೆ.
ಇದು ಷಟಸ್ಥಲ ಸಿದ್ಧಾಂತವನ್ನ ನಿರೂಪಿಸುವ ವಚನ. ಷಟಸ್ಥಲವೆಂದರೆ ಮನುಷ್ಯನಾದವನು ಶರಣನಾಗಲು ಹಂತವಾಗಿ ಆಂತರಿಕ ವಿಕಸನ ಹೊಂದಬೇಕಾಗುತ್ತದೆ. ಶರಣರ ಸಿದ್ಧಾಂತದಲ್ಲಿ ಆ ಆರು ಹಂತಗಳು, ಸ್ಥಲಗಳು ಎಂದರೆ-
ಭಕ್ತ ಸ್ಥಲ, ಮಹೇಶ ಸ್ಥಲ, ಪ್ರಸಾದಿ ಸ್ಥಲ, ಪ್ರಾಣಲಿಂಗಿ ಸ್ಥಲ, ಶರಣ ಸ್ಥಲ ಮತ್ತು ಐಕ್ಯ ಸ್ಥಲ.
ಭಕ್ತನಿಗೆ ಶ್ರದ್ಧಾ ಭಕ್ತಿ,
ಮಹೇಶನಿಗೆ ನಿಷ್ಠಾ ಭಕ್ತಿ,
ಪ್ರಸಾದಿಗೆ ಅವಧಾನ ಭಕ್ತಿ,
ಪ್ರಾಣಲಿಂಗಿಗೆ ಅನುಭವ ಭಕ್ತಿ,
ಶರಣನಿಗೆ ಆನಂದ ಭಕ್ತಿ ಮತ್ತು
ಐಕ್ಯನಿಗೆ ಸಮರಸ ಭಕ್ತಿ
ಹೀಗೆ ಒಂದೊಂದು ಸ್ಥಲಕ್ಕೂ ಒಂದೊಂದು ಭಕ್ತಿ ಎಂಬ ವಾಹನದ ಮೂಲಕ ತನ್ನ ಆಂತರಿಕ ವಿಕಸನದ ಮಾರ್ಗ ಕ್ರಮಿಸುತ್ತಾನೆ.
ಮೊದಲೆರಡು ಸ್ಥಲಗಳಾದ ಭಕ್ತ ಮತ್ತು ಮಹೇಶ ಸ್ಥಲಗಳಿಗೆ ಇಷ್ಟಲಿಂಗವೆ ಚಾಲಕ,
ಪ್ರಸಾದಿ, ಪ್ರಾಣಲಿಂಗಿ ಸ್ಥಲಗಳಿಗೆ ಪ್ರಾಣಲಿಂಗವೆ ಚಾಲಕ ಅದರಂತೆ
ಶರಣ ಮತ್ತು ಐಕ್ಯ ಸ್ಥಲಗಳಿಗೆ ಭಾವಲಿಂಗವೆ ಚಾಲಕ.
ಈ ಮೂರು ಲಿಂಗಗಳು ಕ್ರಮವಾಗಿ ನಮ್ಮ ಸ್ತೂಲ, ಸೂಕ್ಷ್ಮ ಮತ್ತು ಕಾರಣಿಕ ಶರೀರಗಳಿಗೆ ಅನ್ವಯಿಸುತ್ತವೆ. ಆ ಶರೀರಗಳೇ ಕ್ರಮವಾಗಿ ತ್ಯಾಗಾ0ಗ, ಭೋಗಾ0ಗ ಹಾಗೂ ಯೋಗಾ0ಗ ಎನಿಸುತ್ತವೆ.
ಒಬ್ಬ ಮನುಷ್ಯ ಹುಟ್ಟಿನಿಂದಲೇ 25 ತತ್ವಗಳನ್ನ ಒಳಗೊಂಡಿರುತ್ತಾನೆ. ಅವುಗಳು ಯಾವುವೆಂದರೆ-
ಪಂಚ ಜ್ಞಾನೆ0ದ್ರೀಯಗಳು (ಕಿವಿ, ಕಣ್ಣು, ಮೂಗು, ನಾಲಿಗೆ ಮತ್ತು ಚರ್ಮ),
ಪಂಚ ಕರ್ಮೆಂದ್ರೀಯಗಳು (ಬಾಯಿ, ಕೈ, ಕಾಲು, ಗುದ ಮತ್ತು ಗುಹ್ಯ),
ಪಂಚ ವಾಯುಗಳು (ಪ್ರಾಣ, ಅಪಾನ, ವ್ಯಾನ, ಉದಾನ ಮತ್ತು ಸಮಾನ),
ಪಂಚ ವಿಷಯಗಳು (ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧ) ಹಾಗೂ ಪಂಚ ಅಂತಃಕರಣಗಳು (ಮನಸ್ಸು, ಬುದ್ಧಿ, ಚಿತ್ತ, ಅಹಂಕಾರ ಮತ್ತು ಆತ್ಮ).
ಮನುಷ್ಯ ಜ್ಞಾನೇ0ದ್ರಿಯಗಳ ಮೂಲಕ ವಿಷಯಗಳನ್ನು ಅನುಭವಿಸುತ್ತಾನೆ. ಜ್ಞಾನೇ0ದ್ರಿಯಗಳನ್ನ ಒಂದು ಯಂತ್ರಕ್ಕೆ ಹೋಲಿಸಿದರೆ ವಿಷಯಗಳೇ ಆ ಯಂತ್ರದ ಇಂಧನ, ಅಂತಃಕರಣಗಳ ಪೋಷಣೆಯೇ (ನೋವು, ನಲಿವು) ಆ ಯಂತ್ರದ ಉತ್ಪನ್ನ, ಕರ್ಮೆಂದ್ರೀಯಗಳು ಹಾಗೂ ವಾಯುಗಳು ಯಂತ್ರದ ಪರಿಚಾರಕರು. ಆದ್ದರಿಂದ ಶರಣರು ಪಂಚೆ0ದ್ರೀಯಗಳನ್ನೇ ಲಿಂಗವಾಗಿ ಪರಿವರ್ತಿಸಿ ಆಂತರಿಕ ವಿಕಸನದ ಆರೋಹಣಗೈದರು.
ಆದ್ದರಿಂದ,
ಮೂಗು ಆಚಾರ ಲಿಂಗವಾಯಿತು,
ನಾಲಿಗೆ ಗುರುಲಿಂಗವಾಯಿತು,
ಕಣ್ಣು ಶಿವಲಿಂಗವಾಯಿತು,
ಚರ್ಮ ಜಂಗಮಲಿಂಗವಾಯಿತು,
ಕಿವಿ ಪ್ರಸಾದಲಿಂಗವಾಯಿತು ಮತ್ತು ಅಂಗಾಂಗವೆಲ್ಲ ಲಿಂಗಮಯವಾದಾಗ ಬಂದ ತೃಪ್ತಿ ಮಹಾಲಿಂಗವಾಯಿತು.
ಇದುವೇ ನಾನು ಕಂಡಕೊಂಡ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ಶರಣರ ವಚನದ ಭಾವಾರ್ಥ.
ನಾವುಗಳು ನಮ್ಮ ಪಂಚೆ0ದ್ರೀಯಗಳೆoಬ ಯಂತ್ರಕ್ಕೆ ಶರಣರ ವಚನಗಳನ್ನೇ ಸಾಫ್ಟವೇರ, ಅಲ್ಗರಿದೆಮ್ಸ್ ಗಳನ್ನಾಗಿಸಿದರೆ ನಾವು ಶರಣರಾಗಬಹುದು ಎಂದು ನನ್ನ ಅನಿಸಿಕೆ. ಇಲ್ಲಿ ನಾನು ಉಲ್ಲೇಖಸಿ ಷಟಸ್ಥಳದ ಕುರಿತು ಬರೆದದ್ದು ನನ್ನ ಸೀಮಿತ ಅರಿವಿಗೆ ಸಿಕ್ಕಿದ್ದು ಮಾತ್ರ ಅಂದರೆ ಸಾಗರದ ಒಂದು ಹನಿಗೂ ಸಮಬಾರದಷ್ಟು.
ಶರಣ ತತ್ವದ ಮುಕುಟದಂತಿರುವ ಷಟಸ್ಥಲದ ಬಗ್ಗೆ ಆಲೋಚಿಸಲು ಪ್ರೆರೇಪಿಸಿದ ಈ ವಚನಕ್ಕೊಮ್ಮೆ ನನ್ನ ಭಕ್ತಿಯ ಶರಣು ಶರಣಾರ್ಥಿ ಗಳು