Breaking News

ಶ್ರೀ ಕುಮಾರಸ್ವಾಮಿ, ಪಾರ್ವತಿದೇವಿ ದೇವಸ್ಥಾನದ ಪರಿಸರ ಸಂರಕ್ಷಣೆಮತ್ತುಯುನೆಸ್ಕೋ(UNESCO) ಪಟ್ಟಿಯಲ್ಲಿ ಸೇರ್ಪಡೆಗೆ ಒತ್ತಾಯಿಸಿ ಸಹಿ ಸಂಗ್ರಹಅಭಿಯಾನ.

Mr. Kumaraswamy, Signature collection campaign demanding environmental protection and inclusion of Parvathi Devi temple in the UNESCO list.

ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಶ್ರೀ ಕುಮಾರಸ್ವಾಮಿ ಮತ್ತು ಪಾರ್ವತಿದೇವಿಯ ದೇಗುಲಗಳು 6 ಮತ್ತು 7ನೇ ಶತಮಾನದ ಬಾದಾಮಿ ಚಾಲುಕ್ಯರು ಮತ್ತು ರಾಷ್ಟ್ರಕೂಟರಿ ‘ಆಳ್ವಿಕೆಯಲ್ಲಿ ನಿರ್ಮಾಣಗೊಂಡಿವೆ. ಸಮುದ್ರ ಮಟ್ಟದಿಂದ ಸುಮಾರು 3500 ಅಡಿಎತ್ತರದಲ್ಲಿರುವ ಈ ದೇವಸ್ಥಾನ ಸ್ವಾಮಿಮಲೈ ಅರಣ್ಯ ಪ್ರದೇಶದಗಿರಿಯಲ್ಲಿದ್ದು ಐತಿಹಾಸಿಕ, ಪ್ರಾಚೀನ, ಧಾರ್ಮಿಕ ಹಿನ್ನೆಲೆ ಹೊಂದಿದೆ.ವಿಶಿಷ್ಟವಾದ ಶಿಲೆಗಳನ್ನು ಬಳಸಿ ವಿಶಿಷ್ಟವಾಸ್ತುವಿನ್ಯಾಸ, ಶಿಲ್ಪಕಲೆಗಳಿಂದ ನಿರ್ಮಿಸಲ್ಪಟ್ಟ ಈ ಪುರಾತನದೇಗುಲ, ಇಡೀದೇಶದಲ್ಲಿ ವಿಶಿಷ್ಟವಾಗಿ ನಿರ್ಮಿಸಲಾಗಿರುವ 3 ದೇವಸ್ಥಾನಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಹೊಂದಿದೆ.ಪೌರಾಣಿಕ ಹಿನ್ನೆಲೆಯಲ್ಲಿ ದಾಖಲಾಗಿರುವಂತೆ ಶ್ರೀ ಕುಮಾರಸ್ವಾಮಿಯು ಮೂಲತಃ ಕುಪ್ಪಟ್ಟಸ್ವಾಮಿ ಅರ್ಥಾತ್ ಕಪ್ಪಟಸ್ವಾಮಿ (ಅಂಕಮ್ಮನಹಾಳ್ ನಿಂದ ಸುಮಾರು 1.5 ಕಿಮೀ ದೂರದಲ್ಲಿದೆ) ಗುಹೆಯಲ್ಲಿ ವಾಸವಾಗಿದ್ದನು ಎಂದು ಉಲ್ಲೇಖಿಸಲಾಗಿದೆ.

ಈ ಬೆಟ್ಟವು ಧಾರ್ಮಿಕಕ್ಷೇತ್ರವಾಗಿದ್ದು ಶಬರಿಮಲೈಯ ಆಯ್ಯಪ್ಪಸ್ವಾಮಿ ದೇವಸ್ಥಾನದಷ್ಟೇ ಪವಿತ್ರ ಕ್ಷೇತ್ರವಾಗಿರುತ್ತದೆ. ಸ್ವಾಮಿಮಲೈ ಬೆಟ್ಟದಲ್ಲಿ ಐದು ವರ್ಷಕ್ಕೆರಡು ಬಾರಿ ಅಧಿಕ ಮಾಸದಲ್ಲಿ ವಿಜೃಂಭಣೆಯಿಂದ ಜರುಗುವ ಜಾತ್ರಾಮಹೋತ್ಸವಕ್ಕೆ ಲಕ್ಷಾಂತರ ಭಕ್ತಾದಿಗಳು ದೇಶದ ವಿವಿಧ ರಾಜ್ಯಗಳಿಂದ ಆಗಮಿಸುತ್ತಾರೆ.ಈ ಸಂದರ್ಭದಲ್ಲಿ ಶ್ರೀ ಕುಮಾರಸ್ವಾಮಿಯ ವಿಭೂತಿ ಕಣಿಯನ್ನು ಶಾಸ್ತೋಕ್ತವಾಗಿ ಹೊರತೆಗೆಯಲಾಗುತ್ತದೆ. ಔಷಧೀಯ ಗುಣವುಳ್ಳ ಈ ವಿಭೂತಿಯನ್ನು ಭಕ್ತರು ತಮ್ಮ ಮನೆಗಳಿಗೆ ಕೊಂಡೊಯ್ದು ಜಠರ ಸಂಬಂಧಿತ ಅನಾರೋಗ್ಯದ ಸಮಯದಲ್ಲಿ ಈ ವಿಭೂತಿಯನ್ನು ಸೇವನೆಮಾಡುತ್ತಾರೆ. ಪ್ರತಿ ವರ್ಷ ಶ್ರಾವಣಮಾಸದಲ್ಲಿ ವಿಶೇಷವಾದ ಧಾರ್ಮಿಕ ಪೂಜೆಗಳು ನಡೆಯುತ್ತವೆ. ಶ್ರೀ ಕುಮಾರಸ್ವಾಮಿ ಮಾಲೆಯನ್ನು ಧರಿಸಿ ವ್ರತವನ್ನು ಆಚರಿಸಿ ಸಾವಿರಾರು ಸಂಖ್ಯೆಯ ಭಕ್ತಾದಿಗಳು/ ಮಾಲಾಧಾರಿಗಳುಕಾಲ್ನಡಿಗೆಯ ಮೂಲಕ ಈ ಬೆಟ್ಟವನ್ನು ಹತ್ತಿಕೊಂಡು ಕಾರ್ತಿಕೇಯ-ಪಾರ್ವತಿ ದೇವಿಯ ದರುಶನ ಪಡೆಯುತ್ತಾರೆ. ಸಂಡೂರು ರಾಜಮನೆತನದ ಪರಿಸರಪ್ರೇಮಿ ಹಾಗೂ ವನ್ಯಜೀವಿ ಛಾಯಾಗ್ರಾಹಕರಾದ ಶ್ರೀ ಎಂ.ವೈ.ಘೋರ್ಪಡೆಯವರ ವಿಶೇಷ ಕಾಳಜಿಯಿಂದ ಈ ದೇಗುಲಗಳೆರೆಡು ಭಾರತೀಯ ಪ್ರಾಚೀನ ಮರಾತತ್ವ ಇಲಾಖೆಯಿಂದ ಸಂರಕ್ಷಿತ ಸ್ಮಾರಕದ ಪಟ್ಟಿಗೆ ಸೇರಿವೆ.

ಇದೇ ಬೆಟ್ಟದ ತಪ್ಪಲಲ್ಲಿ ಬರುವ ನವಿಲುಸ್ವಾಮಿ ದೇವಸ್ಥಾನಕ್ಕೂ ಭೇಟಿ ನೀಡಿ ನವಿಲುಸ್ವಾಮಿಯ ಕೃಪೆಗೆ ಪಾತ್ರರಾಗುತ್ತಾರೆ. ಇಲ್ಲಿ ಬೆಟ್ಟದ ಮರಗಳ ಬೇರಿನ ಮೂಲಕ ನೀರು365 ದಿನಗಳೂ ಹರಿಯುತ್ತದೆ. ಈ ಈ ನೀರಿನ ಕೊಳದಲ್ಲಿ ಸ್ನಾನ ಮಾಡುವುದರಿಂದ ಚರ್ಮರೋಗದಿಂದ ಗುಣಮುಖರಾಗುತ್ತಾರೆ ಎಂಬ ನಂಬಿಕೆಯಿದೆ.ಇನ್ನು, ಹರಿಶಂಕರ ದೇವಾಲಯದ ಬಳಿ ಕೂಡ ವರ್ಷವಿಡೀ ಹರಿಯುವ ಜಲಧಾರೆಯಿದೆ.ಈ ನೀರಿನಲ್ಲಿ ಔಷಧೀಯ ಗುಣವಿದೆಯೆಂದು ನಂಬುವ ಪ್ರವಾಸಿಗರು ಈ ನೀರನ್ನು ಸೇವಿಸುವುದರ ಜೊತೆಗೆ ಮನೆಗಳಿಗೂ ಕೊಂಡೊಯ್ಯುತ್ತಾರೆ.

ಕುಮಾರಸ್ವಾಮಿ ಬೆಟ್ಟ ಕೇವಲ ಧಾರ್ಮಿಕ ಹಿನ್ನೆಲೆಯನ್ನಷ್ಟೇ ಹೊಂದಿಲ್ಲ; ಪರಿಸರಿ ‘ಪ್ರೇಮಿಗಳಿಗೆ, ಚಾರಣಿಗರಿಗೆ, ವನ್ಯಜೀವಿ ಪ್ರೇಮಿಗಳಿಗೆ, ವನ್ಯಜೀವಿ ಛಾಯಾಚಿತ್ರಕಾರರಿಗೆ ನೆಚ್ಚಿನತಾಣವೂ ಹೌದು!ಕಮತೂರು ಗ್ರಾಮದ ಹತ್ತಿರ ಬರುವ ಕಟಾಸಿನಕೊಳ್ಳವಂತು ಮಲೆನಾಡನ್ನು ನಾಚಿಸುವಂತಹ ಅತೀ ಕಡಿಮೆ ಉಷ್ಣಾಂಶವನ್ನು ಹೊಂದಿರುವ ಪ್ರದೇಶ. ಪಶ್ಚಿಮ ಘಟ್ಟದಲ್ಲಿ 12 ವರ್ಷಕ್ಕೊಮ್ಮೆ ಅರಳುವ ನೀಲಕುರಂಜಿ ಹೂವು ಈ ಬೆಟ್ಟದ(ಕೆಂಪಿಂಡಿ) ಪ್ರದೇಶದಲ್ಲಿ ಅರಳುತ್ತದೆ. ಅಪರೂಪದ ಪ್ರಾಣಿ, ಪಕ್ಷಿಗಳು, ಶ್ರೀಗಂಧ, ರಕ್ತಚಂದನ, ಬೀಟೆ, ಹೊನ್ನೆಯಂತಹ ನಾನಾ ರೀತಿಯ ಮರಗಳು ನಾನಾ ಪ್ರಬೇಧದ ಔಷಧೀಯ ಗಿಡಮೂಲಿಕೆಗಳನ್ನು ಹೊಂದಿರುವ ಈ ಬೆಟ್ಟವು ಉತ್ತರ ಕರ್ನಾಟಕದ ಆಮ್ಲಜನಕ ಉತ್ಪಾದನೆಯ ತಾಣ ಎಂದೇ ಪ್ರಸಿದ್ದಿಯಾಗಿದೆ.

ಈ ದೇಗುಲದ ವಾಸ್ತುಶಿಲ್ಪಕಲೆ, ಕಟ್ಟಡದ ರಚನೆಯ ಬಗ್ಗೆ ದೇಶವಿದೇಶದ ಹಲವಾರು ವಿಶ್ವವಿದ್ಯಾಲಯಗಳು ಅಧ್ಯಯನವನ್ನು ನಡೆಸಿವೆ. ಶ್ರೀಸ್ಕಂದ ಕ್ಷೇತ್ರ ಮಹತ್ಯಂ (ಜಗದ್ಗುರು ಶ್ರೀ ಶಂಕರಾಚಾರ್ಯ ಪಾಠಶಾಲ ಧಾರವಾಡ (1877), ಸಂಡೂರು ಪರಿಸರದ ಕಾರ್ತಿಕೇಯನತಪೋವನ (ಹಂಪಿ ವಿಶ್ವವಿದ್ಯಾಲಯ) (1997), ಸೊಂಡೂರ ಶ್ರೀ ಕುಮಾರಸ್ವಾಮಿ ಚರಿತ್ರೆ (1984) ಸೊಂಡೂರು ಶ್ರೀ ಕುಮಾರಸ್ವಾಮಿಯ ಜಾನಪದ ಹಾಡುಗಳು (1988) ಸೇರಿದಂತೆ ಹಲವು ಪುಸ್ತಕಗಳು ಈ ದೇಗುಲದ ಇತಿಹಾಸ,ಧಾರ್ಮಿಕ,ಕಲೆ, ಸಾಹಿತ್ಯ ಪರಂಪರೆಯನ್ನು ದಾಖಲಿಸಿವೆ.

ಭಾರತೀಯ ಪ್ರಾಚೀನ ಪುರಾತತ್ವ ಇಲಾಖೆಯ ಬೆಂಗಳೂರು ಶಾಖೆಯು ದೇವಸ್ಥಾನ/ಸ್ಮಾರಕದ ಸುತ್ತಲಿನ 2 ಕಿ.ಮೀ

ವ್ಯಾಪ್ತಿಯಲ್ಲಿ ಗಣಿಚಟುವಟಿಕೆಗೆ ಅವಕಾಶ ನೀಡದಂತೆ ದಿನಾಂಕ 07-02-2005 ರಂದು ರಾಜ್ಯ ಸರ್ಕಾರಕ್ಕೆ ಪತ್ರಬರೆದು

ಮನವಿಯನ್ನು ಮಾಡಿಕೊಂಡಿದೆ.ಅದೇರೀತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ದಿನಾಂಕ12.3.2001 ಮತ್ತು 2005ರ ಸುತ್ತೋಲೆ ಮೂಲಕ ಕುಮಾರಸ್ವಾಮಿ ಬೆಟ್ಟದ 5 ಕಿ.ಮೀ ವ್ಯಾಪ್ತಿಯಲ್ಲಿ ಗಣಿಚಟುವಟಿಕೆಗೆ ಅವಕಾಶ ನೀಡಬಾರದೆಂದು ದಾಖಲಿಸಿದ್ದಾರೆ.ಕನ್ನಡ ನಾಡಿನ ನೆಲ,ಜಲ,ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ‘ರಾಷ್ಟ್ರೀಯ ಪಾರಂಪಾರಿಕತಾಣ’ ಎಂದು ಘೋಷಿಸಿಕೊಳ್ಳಲು ಈ ಬೆಟ್ಟ ಪ್ರದೇಶ ಸಕಲ ಅರ್ಹತೆ ಹೊಂದಿದೆ.ಅದರಂತೆ” ಯುನೆಸ್ಕೊ’ ಪಟ್ಟಿಯಲ್ಲಿ ಸೇರಲು ಇರಬೇಕಾದ ಮಾನದಂಡಗಳಲ್ಲಿನ ಹಲವಾರು ಅಂಶಗಳನ್ನು ಕೂಡ ಕುಮಾರಸ್ವಾಮಿ ಬೆಟ್ಟವು ಹೊಂದಿದೆ.

ವಿಷಾದದ ಸಂಗತಿಯೆಂದರೆ ಇಷ್ಟೆಲ್ಲಾ ಪ್ರಮುಖ್ಯ ಹೊಂದಿರುವ ದೇವಸ್ಥಾನದ ಕಟ್ಟಡ ಮತ್ತು ಸುತ್ತಲಿನ ಪರಿಸರ ಅವೈಜ್ಞಾನಿಕ ಗಣಿಗಾರಿಕೆಯಿಂದ ಅಪಾಯಕ್ಕೆ ಸಿಲುಕಿದೆ. ಹಾಗಾಗಿ ಶಿಥಿಲಾವಸ್ಥೆಯೆಡೆಗೆ ಸಾಗುತ್ತಿರುವ ಈ ದೇಗುಲಗಳನ್ನು ಸಂರಕ್ಷಿಸಲು ಕಾನೂನಿನ ಹೋರಾಟ ಅನಿವಾರ್ಯವಾಗಿದೆ. ದೇವಸ್ಥಾನದ ಸಂರಕ್ಷಣೆಯ ವಿಷಯದಲ್ಲಿ ಜನಸಂಗ್ರಾಮ ಪರಿಷತ್-ಸಮಾಜ ಪರಿವರ್ತನಾ ಸಮುದಾಯ ಮತ್ತು ಸಮಾಜಮುಖಿ ಗೆಳೆಯರ ಬಳಗವು ಈಗಾಗಲೇ ಕಾನೂನು ಹೋರಾಟವನ್ನು ಆರಂಭಿಸಿದ್ದು ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಡಬ್ಲ್ಯು.ಪಿ. 25173/2022) ಹಾಕಿದ್ದು, ಆಶಾದಾಯಕ ತೀರ್ಪಿನ್ನು ನಿರೀಕ್ಷಿಸಲಾಗಿದೆ.

ಶ್ರೀ ಕುಮಾರಸ್ವಾಮಿ ಮತ್ತು ಪಾರ್ವತಿ, ಹರಿಶಂಕರ, ನವಿಲುಸ್ವಾಮಿ ದೇವಸ್ಥಾನಗಳು ಸೇರಿದಂತೆ ಕಪ್ಪಟಸ್ವಾಮಿ ಗುಹೆ, ಕಟಾಸಿನಕೊಳ್ಳ, ನೀಲಕುರಿಂಜಿ ಪ್ರದೇಶ ಸೇರಿದಂತೆ ಸ್ವಾಮಿಮಲೈ ಬೆಟ್ಟಪ್ರದೇಶವನ್ನು UNESCO’ವಿಶ್ವ ಪಾರಂಪಾರಿಕತಾಣ’ ಎಂದು ಘೋಷಿಸಲು ಒತ್ತಾಯಿಸಿ ಈ ಜಾತ್ರಾಮಹೋತ್ಸವದಲ್ಲಿ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿದೆ. ದಯವಿಟ್ಟು ಕೈಜೋಡಿಸಲು ನಿಮ್ಮಲ್ಲಿ ಕಳಕಳಿಯ ಮನವಿ.

ಜನಸಂಗ್ರಾಮ ಪರಿಷತ್, ಶ್ರೀ ಕುಮಾರಸ್ವಾಮಿ ಭಕ್ತ ವೃಂದ, ಶ್ರೀ ಕುಮಾರಸ್ವಾಮಿ ಸೇವಾಸಮಿತಿ ಕಮತೂರು ಹಾಗೂ ಸಮಾಜಮುಖಿ ಬಳಗ.

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.