Breaking News

ಮಾಜಿ ದೇವದಾಸಿ ಮಹಿಳೆಯರಿಗೆ ಪುನರ್ವಸತಿ ಕಲ್ಪಿಸಿ: ಪಿ.ಎಂ.ನರೇಂದ್ರಸ್ವಾಮಿ ಸಲಹೆ

Rehabilitate ex-devadasi women: PM Narendraswamy advises

IMG 20240926 WA0447

ಕೊಪ್ಪಳ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ

ಕೊಪ್ಪಳ ಸೆ.26 (ಕ.ವಾ.) : ಸಾಮಾಜಿಕ ಪಿಡುಗಿನ ವ್ಯವಸ್ಥೆಯಲ್ಲಿ ಸಿಕ್ಕು ನಲುಗುತ್ತಿರುವ ಕೊಪ್ಪಳ ಜಿಲ್ಲೆಯಲ್ಲಿನ ಮಾಜಿ ದೇವದಾಸಿಯರ ಪುನರ್ವಸತಿಗೆ ಎಲ್ಲಾ ರೀತಿಯ ಅಗತ್ಯ ಕ್ರಮ ವಹಿಸಬೇಕು ಎಂದು ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಪಿ.ಎಂ. ನರೇಂದ್ರಸ್ವಾಮಿ
ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ರಾಯಚೂರು ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಸೆ.26ರಂದು ನಡೆದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಕೊಪ್ಪಳ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮಗೆ ಇದುವರೆಗೆ ಮನೆ ಇಲ್ಲ; ಸರಿಯಾದ ರೀತಿಯಲ್ಲಿ ಬದುಕು ನಡೆಸುತ್ತಿಲ್ಲ ; ತಂದೆ ತಾಯಿ ಯಾರೆಂದು ಗೊತ್ತಿಲ್ಲ ಎಂದು ಎಷ್ಟೋ ಜನ ಮಾಜಿ ದೇವದಾಸಿಯರು ತಮ್ಮ ನೋವನ್ನು ತೋಡಿಕೊಳ್ಳುತ್ತಾರೆ. ಈ ಬಗ್ಗೆ ಸಂಬAಧಿಸಿದ ಇಲಾಖೆಯ ಅಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಬೇಕು ಎಂದು ಸೂಚನೆ ನೀಡಿದರು.
ದೇವದಾಸಿಯರ ಏಳ್ಗೆಗಾಗಿ ರೂಪಿಸಿದ ಕಾರ್ಯಯೋಜನೆಗಳ ಬಗ್ಗೆ ಅಧ್ಯಕ್ಷರು ಅಧಿಕಾರಿಗಳಿಗೆ ಕೇಳಿದರು. 1993-94 ಮತ್ತು 2007-08ರಲ್ಲಿ ಮಾಡಲಾದ ಗಣತಿ ಪ್ರಕಾರ ಕೊಪ್ಪಳ ಜಿಲ್ಲೆಯಲ್ಲಿ 6018 ಜನರು ಮಾಜಿ ದೇವದಾಸಿಯರೆಂದ ಗುರುತಿಸಿಕೊಂಡಿದ್ದು ರಾಜ್ಯದಲ್ಲಿ ಕೊಪ್ಪಳ ಜಿಲ್ಲೆ 3ನೇ ಸ್ಥಾನದಲ್ಲಿದೆ. 45 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಮಾಹೆಯಾನ 1500 ರೂ. ಮಾಸಾಶನ ನೀಡಲಾಗುತ್ತದೆ. 2023-24ನೇ ಸಾಲಿನಲ್ಲಿ 2557 ಮಹಿಳೆಯರು ಈ ಸೌಕರ್ಯ ಪಡೆದಿದ್ಧಾರೆ. ಆದಾಯೋತ್ಪನ್ನ ಚಟುವಟಿಕೆ ನಡೆಸಲು 2023-24ನೇ ಸಾಲಿನಲ್ಲಿ 30 ಮಹಿಳೆಯರಿಗೆ 30,000 ರೂ ಆರ್ಥಿಕ ಸೌಲಭ್ಯ ಒದಗಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಮಕ್ಕಳ ಸಾಗಾಣಿಕೆಗೆ ಕಡಿವಾಣ ಹಾಕಿ : ಮಾನವ ಕಳ್ಳ ಸಾಗಣೆಯು ಅತ್ಯಂತ ಅಮಾನವೀಯವಾದ ಕೃತ್ಯವಾಗಿದೆ. ಈ ಬಗ್ಗೆ ಪೊಲೀಸ್ ಇಲಾಖೆಯು ವಿಶೇಷ ನಿಗಾವಹಿಸಬೇಕು ಎಂದು ಅಧ್ಯಕ್ಷರು ಸೂಚನೆ ನೀಡಿದರು. ಜಿಲ್ಲೆಯಲ್ಲಿ ಅಪೌಷ್ಠಿಕತೆಗೆ ಸಹ ಕಡಿವಾಣ ಹಾಕಬೇಕು ಎಂದು ಅಧ್ಯಕ್ಷರು ಸಲಹೆ ಮಾಡಿದರು. ತೀವ್ರ ಅಪೌಷ್ಠಿಕ ಮಕ್ಕಳಿಗೆ ಹೆಚ್ಚುವರಿಯಾಗಿ ವಾರದಲ್ಲಿ 3 ದಿನ ಮೊಟ್ಟೆ ಹಾಗೂ 3 ದಿನ ಹಾಲನ್ನು ಪೂರಕ ಪೌಷ್ಠಿಕ ಆಹಾರದಡಿ ವಿತರಿಸಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಸಮುದಾಯವರಿಗೆ ರುದ್ರಭೂಮಿ ಒದಗಿಸುವುದರ ಬಗ್ಗೆ ವಿಳಂಬವಾಗದAತೆ ಕ್ರಮ ವಹಿಸಬೇಕು ಎಂದು ಅಧ್ಯಕ್ಷರು ಸೂಚನೆ ನೀಡಿದರು. ಕೊಪ್ಪಳ ಜಿಲ್ಲೆಯಲ್ಲಿನ ಒಟ್ಟು 595 ಜನವಸತಿ ಗ್ರಾಮಗಳಲ್ಲಿ ಸರ್ಕಾರಿ ಜಮೀನನ್ನು ಸಾರ್ವಜನಿಕ ರುದ್ರಭೂಮಿಯಾಗಿ ಕಾಯ್ದಿರಿಸಲಾಗಿರುತ್ತದೆ ಎಂದು ಕಂದಾಯ ಅಧಿಕಾರಿಗಳು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿಗಳ ನ್ಯಾಯಾಲಯ, ಉಪ ವಿಭಾಗಾಧಿಕಾರಿಗಳ ನ್ಯಾಯಾಲಯ ಮತ್ತು ತಹಸೀಲ್ದಾರ ನ್ಯಾಯಾಲಯಗಳಲ್ಲಿ ಇರುವ ಪ್ರಕರಣಗಳ ಬಗ್ಗೆ ಅಧ್ಯಕ್ಷರು ಕೇಳಿದರು. 2021-22ರಿಂದ 2023-24ನೇ ಸಾಲಿನವರೆಗೆ ದಾಖಲಾಗಿದ್ದ ಒಟ್ಟು 37 ಪಿಟಿಸಿಎಸ್ ಪ್ರಕರಣಗಳ ಪೈಕಿ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ 34 ಪ್ರಕರಣಗಳನ್ನು ವಿಲೇ ಮಾಡಲಾಗಿದೆ. 8 ಪ್ರಕರಣಗಳು ಬಾಕಿ ಇವೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.
ಕಳೆದ ಮೂರು ವರ್ಷಗಳಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಪರಿಶಿಷ್ಟ ವರ್ಗಗಳ ಉಪಯೋಜನೆಯಡಿ ಅಭಿವೃದ್ಧಿಗಾಗಿ ಅನುಷ್ಠಾನ ಮಾಡಿದ ವಿವಿಧ ಕಾರ್ಯಕ್ರಮಗಳ ಬಗ್ಗೆ ಅಧ್ಯಕ್ಷರು ಕೇಳಿದರು. ಜಿಲ್ಲಾಡಳಿತದಿಂದ ಕಾಲಕಾಲಕ್ಕೆ ಸಭೆಗಳನ್ನು ನಡೆಸಬೇಕು. ಈ ಸಮುದಾಯದ ಜನರು ಎದುರಿಸುತ್ತಿರುವ ದೌರ್ಜನ್ಯ ಸೇರಿದಂತೆ ನಾನಾ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಣಯ ತೆಗೆದುಕೊಳ್ಳಬೇಕು ಎಂದು ಅಧ್ಯಕ್ಷರು ಸೂಚನೆ ನೀಡಿದರು.
ಕೊಪ್ಪಳ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಜನರಿಗೆ ಯಾರಿಂದಾದರು ತೊಂದೆರೆಯಾದಾಗ ಅಗತ್ಯ ಕಾನೂನುಗಳಡಿ ತಕ್ಷಣ ಪ್ರಕರಣ ದಾಖಲಿಸುತ್ತ ಗುಣಮಟ್ಟದ ತನಿಖೆ ನಡೆಸಿ ಆಪಾದಿತರ ವಿರುದ್ಧ ನಿಗದಿತ ಅವಧಿಯೊಳಗೆ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸುವ ಕಾರ್ಯವನ್ನು ಪೊಲೀಸ್ ಇಲಾಖೆಯಿಂದ ಅಚ್ಚುಕಟ್ಟಾಗಿ ಮಾಡಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ರಾಮ್ ಎಲ್ ಅರಸಿದ್ಧಿ ಅವರು ತಿಳಿಸಿದರು.
2011ರ ಜನಗಣತಿ ಪ್ರಕಾರ ಕೊಪ್ಪಳ ಜಿಲ್ಲೆಯಲ್ಲಿನ ಒಟ್ಟು 13,89,920 ಜನಸಂಖ್ಯೆ ಪೈಕಿ ಪರಿಶಿಷ್ಟ ಜಾತಿಯಲ್ಲಿ 1,29,341 ಪುರುಷರು ಮತ್ತು 1,29,267 ಮಹಿಳೆಯರು ಇದ್ದಾರೆ. ಪರಿಶಿಷ್ಟ ಪಂಗಡದಲ್ಲಿ 82,761 ಪುರುಷರು ಮತ್ತು 81,510 ಮಹಿಳೆಯರು ಇದ್ದಾರೆ.2021 ರಿಂದ 2023ನೇ ಸಾಲಿನವರೆಗೆ ಪ್ರತಿ ವರ್ಷ 4 ರಂತೆ ಒಟ್ಟು 12 ಸಭೆಗಳು ನಡೆದಿವೆ. ಕೊಪ್ಪಳ ಜಿಲ್ಲೆಯಲ್ಲಿ 2021ರಲ್ಲಿ 155 ಸಂತ್ರಸ್ತರಿಗೆ, 2022ರಲ್ಲಿ 227 ಮತ್ತು 2023ರಲ್ಲಿ 122 ಸಂತ್ರಸ್ತರಿಗೆ ಪರಿಹಾರ ಕಲ್ಪಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಜೆಜೆಎಂ ಕಾಮಗಾರಿ ಅಚ್ಚುಕಟ್ಟಾಗಿ ನಡೆಯಲಿ: ಉತ್ತಮ ಉದ್ದೇಶದ ಜಲಜೀವನ ಮಿಷನ್ ಕಾಮಗಾರಿಯು ಕೊಪ್ಪಳ ಜಿಲ್ಲೆಯಲ್ಲಿ ಸಮರ್ಪಕವಾಗಿ ನಡೆಯುತ್ತಿಲ್ಲ. ಅದರಲ್ಲು ಎಸ್ಸಿ ಮತ್ತು ಎಸ್ಟಿ ಕಾಲೊನಿಗಳಲ್ಲಿ ಕಳಪೆ ಮಟ್ಟದಲ್ಲಿ ಕಾಮಗಾರಿ ನಡೆದಿವೆ ಎನ್ನುವ ದೂರುಗಳಿದ್ದು ಈ ಬಗ್ಗೆ ಗಮನ ಹರಿಸಬೇಕು ಎಂದು ಅಧ್ಯಕ್ಷರು ತಿಳಿಸಿದರು. ಜೆಜೆಎಂ ಕಾಮಗಾರಿ ಕಳಪೆ ಎನ್ನುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ತಪ್ಪಿತಸ್ಥ ಅಭಿಯಂತರರನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ. ಗುತ್ತಿಗೆದಾರರನ್ನು ಬ್ಲಾಕ್ ಲೀಸ್ಟಗೆ ಸೇರಿಸಲಾಗಿದೆ. ಜೆಜೆಎಂ ಕಾಮಗಾರಿಗಳು ಸರಿಯಾಗಿ ನಡೆಯುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಸಿಇಓ ರಾಹುಲ್ ರತ್ನಂ ಪಾಂಡೆಯ ಅವರು ತಿಳಿಸಿದರು.
ಉತ್ತಮ ಅನುಷ್ಠಾನ: ಎಸ್ಸಿ ಮತ್ತು ಎಸ್ಟಿ ಜನರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು ಇರುವ ಗೃಹಲಕ್ಷಿö್ಮ ಯೋಜನೆಯ ಜಾರಿಗೆ ಕಾಳಜಿ ವಹಿಸಬೇಕು ಎಂದು ಅಧ್ಯಕ್ಷರು ಸೂಚಿಸಿದರು. ಕೊಪ್ಪಳ ಜಿಲ್ಲೆಗೆ ನಿಗದಿಪಡಿಸಿದ ಗುರಿಯನ್ನು ತಲುಪಿ ಗೃಹಲಕ್ಷಿö್ಮ ಯೋಜನೆಯ ಅನುಷ್ಠಾನ ವಿಷಯದಲ್ಲಿ ಉತ್ತಮವಾದ ಸಾಧನೆ ತೋರಿದ್ದೇವೆ ಎಂದು ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ವಿಧಾನಸಭಾ ಸದಸ್ಯರು ಹಾಗೂ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಸದಸ್ಯರಾದ ಐಹೊಳೆ ದುರ್ಯೋಧನ, ಬಸನಗೌಡ ದದ್ದಲ, ಬಸವರಾಜ್ ಮತ್ತಿಮೂಡ್, ಶ್ರೀಮತಿ ಕರೆಮ್ಮ, ಶಾಂತರಾಮ್ ಬುಡ್ನ ಸಿದ್ದಿ, ಜಗದೇವ್ ಗುತ್ತೇದಾರ್ ಮತ್ತು ಕೃಷ್ಣ ನಾಯಕ, ಕರ್ನಾಟಕ ವಿಧಾನಸಭೆ ಸಚಿವಾಲಯದ ಅಧೀನ ಕಾರ್ಯದರ್ಶಿ ಪಿ.ಸೀನ, ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾವ್ಯ ಚತುರ್ವೇದಿ, ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ರೇಷ್ಮಾ ಹಾನಗಲ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

About Mallikarjun

Check Also

screenshot 2025 12 13 08 43 24 46 6012fa4d4ddec268fc5c7112cbb265e7.jpg

ಆತ್ಮವಿಶ್ವಾಸ ವಿದ್ದಲ್ಲಿ ಪ್ರತಿಭೆ ಅನಾವರಣ—ಡಾ! ಮಂಜುನಾಥ ಕುಕನೂರ

ಆತ್ಮವಿಶ್ವಾಸ ವಿದ್ದಲ್ಲಿ ಪ್ರತಿಭೆ ಅನಾವರಣ—ಡಾ! ಮಂಜುನಾಥ ಕುಕನೂರ Unveiling talent in self-confidence—Dr. Manjunatha Kukanoor ಯಲಬುರ್ಗಾ—ಪ್ರತಿಭೆಗೆ ಬಡತನ ಹಾಗೂ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.