
Visit to Chikkabenkal Gram Panchayat, water test inspection
ಗಂಗಾವತಿ : ತಾಲೂಕಿನ ಚಿಕ್ಕಬೆಣಕಲ್ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಡೆಯುತ್ತಿರುವ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮರೆಡ್ಡಿ ಪಾಟೀಲ್ ಅವರು ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.
ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡುವ ಕೂಲಿಕಾರರು ಮೆಜರ್ ಮೆಂಟ್ ಪ್ರಕಾರ ಕೂಲಿ ಕೆಲಸ ಮಾಡಬೇಕು. ನರೇಗಾ ಇಂಜಿನಿಯರ್ ಹಾಗೂ ಗ್ರಾ.ಪಂ. ಸಿಬ್ಬಂದಿಗಳು ಕೂಲಿಕಾರರ ಗುಂಪುಗಳಿಗೆ ಕೆಲಸ ಮಾಡಲು ಸರಿಯಾಗಿ ಮಾರ್ಕೌಟ್ ಮಾಡಿಕೊಡಬೇಕು. ನರೇಗಾದಡಿ ದಿನಕ್ಕೆ 370 ರೂ. ಕೂಲಿ ಇದ್ದು, ಕೆಲಸಕ್ಕೆ ತಕ್ಕಂತೆ ಕೂಲಿ ಪಾವತಿಯಾಗಲಿದೆ.ಎನ್ ಎಂಎಂಎಸ್ ಹಾಜರಾತಿಯನ್ನು ಗ್ರಾಪಂ ಸಿಬ್ಬಂದಿಗಳೆ ಹಾಕಬೇಕು. ದಿನಕ್ಕೆ 2 ಬಾರಿ NMMS ಹಾಜರಾತಿ ಹಾಕಬೇಕು. ಪಾರದರ್ಶಕವಾಗಿ ಹಾಜರಾತಿ ಹಾಕಬೇಕು ಎಂದು ಸೂಚಿಸಿದರು.
ನಾಲಾ ಹೂಳೆತ್ತುವುದರಿಂದ ಅಂತರ್ಜಲ ವೃದ್ಧಿಗೆ ನೆರವಾಗಲಿದೆ. ಸರಿಯಾಗಿ ಹೂಳೆತ್ತಿದರೆ ನಾಲಾದಲ್ಲಿ ಮಳೆಗಾಲದಲ್ಲಿ ನೀರು ಇಂಗಿಸಲು ಹಾಗೂ ಸಂಗ್ರಹಿಸಲು ಸಹಕಾರಿ ಆಗಲಿದೆ ಎಂದರು.
ವಾಟರ್ ಟೆಸ್ಟ್ ಪರಿಶೀಲನೆ : ಗ್ರಾಪಂ ನೀರಗಂಟಿಗಳು ಮಾಡುವ ಕುಡಿವ ನೀರಿನ ಪರೀಕ್ಷೆ ಕಾರ್ಯವನ್ನು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮರೆಡ್ಡಿ ಪಾಟೀಲ್ ಅವರು ಪರಿಶೀಲಿಸಿದರು. ‘ಪ್ರತಿ ತಿಂಗಳು ನೀರಿನ ಪರೀಕ್ಷೆ ಮಾಡಿ ಗ್ರಾಪಂ ರಜಿಸ್ಟರ್ ನಲ್ಲಿ ಮಾಹಿತಿ ಭರ್ತಿ ಮಾಡಬೇಕು. ಪರೀಕ್ಷೆ ಮಾಡಿದ ನೀರನ್ನು ಆರ್ ಡಬ್ಲ್ಯು ಎಸ್ ಅವರಿಗೆ ಕಳುಹಿಸಬೇಕು ಎಂದು ಸೂಚಿಸಿದರು. ಗ್ರಾಪಂ ಬೋರ್ ವೆಲ್ ಗಳ ಮಾಹಿತಿ ಹಾಗೂ ನೀರಿನ ಸಮಸ್ಯೆ ಕುರಿತು ಗ್ರಾಪಂ ಪಿಡಿಓ ಅವರಿಂದ ಮಾಹಿತಿ ಪಡೆದರು.
ಈ ವೇಳೆ ಗ್ರಾಪಂ ಅಧ್ಯಕ್ಷರಾದ ಶಿವಮೂರ್ತಿ ಯಾದವ, ಸದಸ್ಯರಾದ ಸಂತೋಷ ಕುಮಾರ್, ಗ್ರಾಪಂ ಪಿಡಿಓ ಇಂದಿರಾ ಸಿ., ತಾಲೂಕು ಐಇಸಿ ಸಂಯೋಜಕರಾದ ಬಾಳಪ್ಪ ತಾಳಕೇರಿ, ಗ್ರಾಪಂ ಸಿಬ್ಬಂದಿಗಳು, ಗ್ರಾಮ ಕಾಯಕ ಮಿತ್ರರು ಇದ್ದರು.