Educational institutions are responsible for providing skillful moral education: Justice Indresh

ಬೆಂಗಳೂರು, ಮೇ, 10; ಭವ್ಯ ಭಾರತ ನಿರ್ಮಾಣದಲ್ಲಿ ಕೌಶಲ್ಯಯುತ ಶಿಕ್ಷಣದ ಜೊತೆಗೆ ನೈತಿಕ ಶಿಕ್ಷಣ ನೀಡುವುದು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ಎಂದು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಇಂದ್ರೇಶ್ ಹೇಳಿದ್ದಾರೆ.
ಎಪಿಎಸ್ ಇಂಜಿನಿಯರಿಂಗ್ ಕಾಲೇಜಿನ ಜ್ಞಾನ ಗಂಗೋತ್ರಿ ಕ್ಯಾಂಪಸ್ ನಲ್ಲಿ ಎಪಿಎಸ್ ಪ್ರವೇಶ ದ್ವಾರ, ಎಪಿಎಸ್ ಫಿಟ್ನೆಸ್ ಸೆಂಟರ್, ಮತ್ತು ಎಪಿಎಸ್ ಓಪನ್ ಆಡಿಯೊಟೋರಿಯಂ ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತು ಇಂದು ವ್ಯಾಪಕವಾಗಿ ಬೆಳವಣಿಗೆಯಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ತಂತ್ರಜ್ಞಾನದ ಕೌಶಲ್ಯಗಳನ್ನು ಕಲಿಸಿಕೊಡುವ ಜೊತೆಗೆ ನೈತಿಕ ಶಿಕ್ಷಣ ನೀಡುವುದು ಶಿಕ್ಷಣ ಸಂಸ್ಥೆಗಳ ಪರಮ ಗುರಿಯಾಗಬೇಕು. ಎಪಿಎಸ್ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಸಾಧನೆಗಳ ಮೂಲಕ ಶ್ರೇಷ್ಠತೆಗೆ ತಲುಪುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಎಪಿಎಸ್ಸಿಇ ಹಳೆಯ ವಿದ್ಯಾರ್ಥಿ ಹಾಗೂ ಒರಾಕಲ್ ಸಂಸ್ಥೆಯ ಪ್ರಧಾನ ಕ್ಯೂಎ ಎಂಜೆನಿಯರ್ ಶ್ರೀಧರ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಸಂತಸದ ಕಲಿಕೆ ಅತ್ಯಂತ ಮುಖ್ಯವಾಗಿದೆ. ವಿದ್ಯಾರ್ಥಿಗಳು ಹೊಸ ಹೊಸ ತಂತ್ರಜ್ಞಾನತ್ತ ಆಸಕ್ತಿ ಬೆಳೆಸಿಕೊಳ್ಳಲು ಆದ್ಯತೆ ನೀಡಬೇಕು ಎಂದರು.
ಎಪಿಎಸ್ ಕುಟುಂಬದ ಎಲ್ಲಾ ಸದಸ್ಯರು – ಟ್ರಸ್ಟಿಗಳು, ಟ್ರಸ್ಟ್ ಸದಸ್ಯರು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ 7000ಕ್ಕೂ ಅಧಿಕ ಹಳೆಯ ವಿದ್ಯಾರ್ಥಿಗಳು ಈ ಶ್ರೇಷ್ಠ ಹಬ್ಬದಲ್ಲಿ ಪಾಲ್ಗೊಂಡರು.
ಎಪಿಎಸ್ ಟ್ರಸ್ಟ್ ಅಧ್ಯಕ್ಷ ಡಾ. ವಿಷ್ಣು ಭರತ್ ಅಲಂಪಳ್ಳಿ, ಸಂಸ್ಥೆಯ 90 ವರ್ಷಗಳ ಶ್ರೇಷ್ಠ ಪರಂಪರೆಯ ಬಗ್ಗೆ ಬೆಳಕು ಚೆಲ್ಲಿದರು. ಎಪಿಎಸ್ ಸಂಸ್ಥೆಗೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಡಿ.ಆರ್.ಡಿ.ಒ ದಿಂದ ಯುದ್ಧಭೂಮಿಯಲ್ಲಿ ಯೋಧರನ್ನು ಬದಲಾಯಿಸಬಹುದಾದ ಹ್ಯೂಮನಾಯ್ಡ್ ರೋಬೊಟ್ ಅಭಿವೃದ್ಧಿಗೆ ಮಹತ್ವದ ಯೋಜನೆಯೊಂದನ್ನು ಜಾರಿಗೊಳಿಸಲಾಗಿದೆ ಎಂದರು.
ಎಪಿಎಸ್ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿ ಪ್ರೊ. ಎ. ಪ್ರಕಾಶ್ ಮಾತನಾಡಿ, ಸಂಸ್ಥೆ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣದ ಅವಕಾಶ ಒದಗಿಸುತ್ತಿವೆ ಎಂದರು.