AICCTU strike demanding withdrawal of anti-labour policies

ಗಂಗಾವತಿ: ರಾಜ್ಯದಲ್ಲಿ ದಿನ ದಿನಕ್ಕೂ ಕಾರ್ಮಿಕ ವರ್ಗದ ಮೇಲಿನ ದಾಳಿ, ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಕಾರ್ಮಿಕರ ಹೋರಾಟದ ಫಲವಾಗಿ ಅಸ್ತಿತ್ವಕ್ಕೆ ಬಂದ ಕಾರ್ಮಿಕ ಕಾನೂನುಗಳ ಬದಲಾವಣೆಗೆ ಕೇಂದ್ರ ಸರ್ಕಾರ ವಿಭಿನ್ನ ದಾರಿಯಲ್ಲಿ ಹೊರಟಿದೆ. ರಾಜ್ಯ ಸರ್ಕಾರಗಳೂ ಈ ಕಾನೂನು ಬದಲಾವಣೆಯಲ್ಲಿ ತೊಡಗಿವೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯದಲ್ಲಿ ಹಲವಾರು ಕಾನೂನುಗಳನ್ನು ಈಗಾಗಲೇ ಬದಲಾಯಿಸಲಾಗಿದೆ. ಉಳಿದ ರಾಜ್ಯಗಳು ಇದಕ್ಕೆ ಹೊರತಾಗಿಲ್ಲ. ಆತಂಕದ ಸಂಗತಿ ಎಂದರೆ, ಹಾಲಿ ಕಾರ್ಮಿಕ ಕಾನೂನುಗಳನ್ನು ನೇರವಾಗಿ ಉಲ್ಲಂಘಿಸಿ, ಕಾರ್ಪೊರೇಟ್ ಬಂಡವಾಳಕ್ಕೆ ಹಾಗೂ ಗುತ್ತಿಗೆ ಕಾರ್ಮಿಕ ಪದ್ದತಿಗೆ ಹೆಚ್ಚು ಉತ್ತೇಜನ ನೀಡಲಾಗುತ್ತಿದೆ. ದೇಶದಲ್ಲಿ ಶೇಕಡ ೯೦ ರಷ್ಟು ಕಾರ್ಮಿಕರು ಕನಿಷ್ಟ ವೇತನ ಹಾಗೂ ಉದ್ಯೋಗ ಭದ್ರತೆ ಮತ್ತು ಸಾಮಾಜಿಕ ಭದ್ರತೆಯಿಂದ ವಂಚಿತರಾಗಿದ್ದಾರೆ ಎಂದು ಎ.ಐ.ಸಿ.ಸಿ.ಟಿ.ಯು ಜಿಲ್ಲಾಧ್ಯಕ್ಷರಾದ ವಿಜಯ್ ದೊರೆರಾಜು ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಇಂದು ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಧರಣಿ ನಡೆಸಿ ತಹಶೀಲ್ಧಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದರು. ಕಾರ್ಮಿಕರು ಸಂಘ ಕಟ್ಟುವ, ದುಡಿಮೆಯ ಹಕ್ಕುಗಳ ರಕ್ಷಣೆಗಾಗಿ ಮುಷ್ಕರ ನಡೆಸುವ ಸ್ವಾತಂತ್ರö್ಯವನ್ನು ಕಳೆದುಕೊಂಡಿದ್ದಾರೆ. “ಹೆಚ್ಚು ಕೂಲಿ ಕೇಳಿದರೆ ಕೆಲಸಕ್ಕೆ ಬರಬೇಡಿ!” ಎಂಬ ಬೆದರಿಕೆ ದೇಶಾದ್ಯಂತ ಕೇಳಿಬರುತ್ತಿದೆ. ಸರಕಾರಿ, ಅರೆಸರಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲೂ ಕಾರ್ಮಿಕರ ಹಕ್ಕುಗಳ ಉಲ್ಲಂಘನೆ ಹೆಗ್ಗಿಲ್ಲದೆ ನಡೆಯುತ್ತಿದೆ. ಗುತ್ತಿಗೆ ಹಾಗೂ ಗುಲಾಮಗಿರಿ ಪದ್ಧತಿ ತೊಲಗಿಸದೆ ಕಾರ್ಮಿಕರಿಗೆ ಅನ್ಯದಾರಿ ಇಲ್ಲ. ಸ್ವತಂತ್ರ ಭಾರತದ ಸಂವಿಧಾನದಲ್ಲಿ ಕಾರ್ಮಿಕರ ಕಲ್ಯಾಣಕ್ಕಾಗಿ ಸಮಾನ ಕೆಲಸಕ್ಕೆ ಸಮಾನ ವೇತನ, ರಜಾದಿನದ ಪ್ರಯೋಜನಗಳು, ಹೆರಿಗೆ ರಜೆ ಮತ್ತು ವೇತನ, ಆರೋಗ್ಯ, ನೈರ್ಮಲ್ಯ ಮತ್ತು ಸಾಮಾಜಿಕ ಭದ್ರತೆಯನ್ನು ಒದಗಿಸಲಾಗಿದೆ. ಆದರೆ ತಮ್ಮ ಜೀವನದುದ್ದಕ್ಕೂ ಅಸಮಾನತೆ ಮತ್ತು ಅವಮಾನಗಳಿಂದ ಹೊರಬಂದು, ಸಾಮಾಜಿಕ-ಆರ್ಥಿಕ ಮತ್ತು ರಾಜಕೀಯವಾಗಿ ತಳಮಟ್ಟದಲ್ಲಿರುವ ದುಡಿಯುವ ವರ್ಗದ ಕಾರ್ಮಿಕರಿಗೆ ಮಾತ್ರ ತಮ್ಮ ಶಾಸನಬದ್ಧ ಹಕ್ಕುಗಳನ್ನು ದಕ್ಕಿಸಿಕೊಳ್ಳುವುದು ಇಂದಿಗೂ ಕಷ್ಟಕರವಾಗಿದೆ. ಸಾಮಾಜಿಕ ನ್ಯಾಯದ ಕಲ್ಪನೆಯು “ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ”ದ ತಳಹದಿಯ ಮೇಲೆ ನಿರ್ಮಿಸಲ್ಪಟ್ಟಿದೆ. ಆದರೆ ದುಡಿಯುವ ವರ್ಗದ ಕಾರ್ಮಿಕರನ್ನು ಕೀಳುಮಟ್ಟದಲ್ಲಿ ನೋಡುವುದರೊಂದಿಗೆ ಸಾಮಾಜಿಕ ನ್ಯಾಯವನ್ನು ನಿರಾಕರಿಸಲಾಗಿದೆ. ಸಾಮಾಜಿಕ ನ್ಯಾಯ ಮತ್ತು ಘನತೆಯ ಬದುಕಿಗಾಗಿ ಕಾರ್ಮಿಕರು ಸಂಘಟಿತರಾಗಿದ್ದಾರೆ ಮತ್ತು ಸ್ವಾಭಿಮಾನದ ಸಂಘರ್ಷಗಳನ್ನು ನಡೆಸುತ್ತಿದ್ದಾರೆ. ಸಂಘರ್ಷಗಳು ಮುಂದಿನ ಪೀಳಿಗೆಗೆ ಮಾರ್ಗವನ್ನು ರೂಪಿಸುತ್ತವೆ ಎಂಬುದನ್ನು ನಂಬಿದ್ದಾರೆ ಮತ್ತು ಗುಲಾಮಗಿರಿಯ ಬದುಕಿಗೆ ಅಂತ್ಯ ಹಾಡುತ್ತಿದ್ದಾರೆ. ಇಂತಹ ಕ್ರಾಂತಿಕಾರಿ ಹೋರಾಟಗಳಿಂದ ಮಾತ್ರ ದುಡಿಯುವ ಕಾರ್ಮಿಕರಿಗೆ ಘನತೆಯ ಬದುಕು ಸಿಗುತ್ತದೆ ಎಂಬುದನ್ನು ಹೋರಾಟಗಳು ಸಾಬೀತುಪಡಿಸಿದೆ. ಈ ಹಿನ್ನೆಲೆಯಲ್ಲಿ ದುಡಿಯುವ ವರ್ಗದ ಪ್ರಮುಖ ಹಕ್ಕೊತ್ತಾಯಗಳಾದ ರಾಜ್ಯದ ಎಲ್ಲ ನೇರ ಪಾವತಿ ಮತ್ತು ಗುತ್ತಿಗೆ ಪೌರ ಕಾರ್ಮಿಕರು. ಲೋಡರ್ಸ್, ಕಸದ ವಾಹನ ಚಾಲಕರು ಹಾಗೂ ಒಳಚರಂಡಿ ಸ್ವಚ್ಛತಾ ಕಾರ್ಮಿಕರನ್ನು ಏಕಕಾಲಕ್ಕೆ ಖಾಯಂಗೊಳಿಸಬೇಕು, ಗುತ್ತಿಗೆ ಪದ್ಧತಿ ರದ್ದುಗೊಳಿಸಿ, ಎಲ್ಲಾ ಕಾರ್ಮಿಕರಿಗೂ ರೂ. ೩೫ ಸಾವಿರ ಕನಿಷ್ಟ ವೇತನ ನಿಗದಿಗೊಳಿಸಬೇಕು, ಅಸಂಘಟಿತ ಕಾರ್ಮಿಕರಿಗೆ ಭವಿಷ್ಯನಿದಿ, ಇ.ಎಸ್.ಐ ಹಾಗೂ ವಸತಿ ಯೋಜನೆ ಜಾರಿಮಾಡಬೇಕು. ಎಲ್ಲಾ ಗಣಿ ಕಾರ್ಮಿಕರಿಗೆ ಪುನರ್ವಸತಿ ಮತ್ತು ಪುನರುಜ್ಜಿವನ ಯೋಜನೆಯಡಿ ಸಮಗ್ರ ಪುನರ್ವಸತಿ, ಉದ್ಯೋಗ ಕಲ್ಪಿಸಿ, ನಿವೇಶನ ಮುಂಜೂರು ಮಾಡಿ ಮನೆ ನಿರ್ಮಿಸಿಕೊಡಬೇಕು. ಗುತ್ತಿಗೆ ಕಾರ್ಮಿಕರ ಕಾಯಂಮಾತಿಗಾಗಿ ಶಾಸನ ರೂಪಿಸಲು ಅಂಗನವಾಡಿ, ಬಿಸಿಯೂಟ, ಆಶಾ ಮುಂತಾದ ಸ್ತಿçà ನೌಕರರಿಗೆ ಶಾಸನಬದ್ಧ ಕನಿಷ್ಟ ವೇತನ ಮತ್ತು ಸಾಮಾಜಿಕ ಭದ್ರತೆ ಜಾರಿಯಾಗಬೇಕು. ಎಲ್ಲಾ ಬೀದಿಬದಿ ವ್ಯಾಪಾರಿಗಳ ಬೀದಿ ವ್ಯಾಪಾರಕ್ಕೆ ತೊಂದರೆಯಾಗದAತೆ ಕಾಯ್ದೆಯನ್ವಯ ಜೀವನೋಪಾಯಕ್ಕೆ ಅನುಕೂಲ ಮಾಡಿ ಹಾಗೂ ಪೊಲೀಸ್ ಕಿರುಕುಳವನ್ನು ತಪ್ಪಿಸಬೇಕು. ಕಟ್ಟಡ ಮತ್ತು ಹಮಾಲಿ ಕಾರ್ಮಿಕರ ಮನೆ ನಿರ್ಮಾಣಕ್ಕೆ ೫ ಲಕ್ಷ ರೂಪಾಯಿಗಳು ಸಹಾಯಧನ ನೀಡಬೇಕು. ಸಾಫ್ಟ್ವೇರ್ ಬದಲಾವಣೆ ಹೆಸರಿನಲ್ಲಿ ನೋಂದಣಿ ಕಾರ್ಯಕ್ಕೆ ತಡೆಯೊಡ್ಡುವುದನ್ನು ನಿಲ್ಲಿಸಿ. ಕ್ಲೇಮ್ ಅರ್ಜಿಗಳ ವಿಲೇವಾರಿಯಲ್ಲಿ ಆಗುತ್ತಿರುವ ವಿಳಂಬವನ್ನು ತಪ್ಪಿಸಬೇಕು, ರಾಜ್ಯದ ಎಲ್ಲಾ ಸ್ಮಶಾನ ಕಾವಲುಗಾರರನ್ನು ನೇರಪಾವತಿಗೊಳಪಡಿಸಿ, ಅವರ ಜೀವನಕ್ಕೆ ಭದ್ರತೆ ಒದಗಿಸಬೇಕು ಈ ಎಲ್ಲಾ ಬೇಡಿಕೆಗಳನ್ನು ರಾಜ್ಯ ಸರ್ಕಾರ ಕೂಡಲೇ ಈಡೇರಿಸಬೇಕೆಂದು ಒತ್ತಾಯಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಹಿರಿಯ ಮುಖಂಡರಾದ ಭಾರಧ್ವಾಜ್ ಸಣ್ಣ ಹನುಮಂತಪ್ಪ ಹುಲಿಹೈದರ, ಬೀದಿ ವ್ಯಾಪಾರಿಗಳ ಸಂಘದ ಸೈಯ್ಯದ್ ಬರ್ಹಾನುದ್ದೀನ್, ಪೌರಕಾರ್ಮಿಕರ ಮುಖಂಡರಾದ ಪರಶುರಾಮ್, ಕೇಶವ ನಾಯಕ್, ಬಾಬರ್, ರಮೇಶ್ ಕೆ., ಕನಕಪ್ಪ ನಾಯಕ್, ಭೀಮಣ್ಣ, ಕಾರಟಗಿ ದುರುಗಪ್ಪ, ಹುಲ್ಲೇಶ, ಮಾಯಮ್ಮ, ಪಾರ್ವತಮ್ಮ, ಕೊಟ್ರೇಶ್ ಇತರರು ಇದ್ದರು.