Forget caste, discrimination and live in harmony: Panditaradhya Swamiji
ವರದಿ : ಪಂಚಯ್ಯ ಹಿರೇಮಠ,
ಕೊಪ್ಪಳ : ಈ ನೆಲದಲ್ಲಿ ಬಸವಾದಿ ಶರಣರು ಆಳಿದ ಇತಿಹಾಸವಿದ್ದು ಎಲ್ಲ ವರ್ಗದ ಜನರು ಜಾತಿ, ಭೇದ ಮರೆತು ಸಾಮರಸ್ಯದಿಂದ ಜೀವನ ನಡೆಸಬೇಕು ಎಂದು ಸಾಣೆಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.
ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ಜಿಲ್ಲಾ ದಲಿತ ದಮನಿತರ ದೌರ್ಜನ್ಯಗಳ ವಿರೋಧಿ ಒಕ್ಕೂಟದ ವತಿಯಿಂದ ನಡೆದ ಬಹಿರಂಗ ಸೌಹಾರ್ದ ಸಮಾವೇಶದ ಸಾನಿಧ್ಯ ವಹಿಸಿ ಮಾತನಾಡಿದರು.
ಎಲ್ಲರಲ್ಲೂ ಹರಿಯುವ ರಕ್ತ ಒಂದೇ ಆಗಿದ್ದು ತುರ್ತು ಸಂದರ್ಭಗಳಲ್ಲಿ ಜಾತಿಯಿಂದ ಜೀವ ಉಳಿಯದು, ಅದು ಕೇವಲ ರಕ್ತದಿಂದ ಎನ್ನುವುದು ಅರಿತು ನಡೆಯಬೇಕು, ಜಾತಿ ಎನ್ನುವ ಕೀಳು ಮನೋಭಾವನೆಯನ್ನು ತೊಡೆದು ಹಾಕಿ ಸೌರ್ಹಾದತೆಯಿಂದ ಬದುಕು ಸಾಗಿಸಬೇಕಿದೆ.
ಇಂತಹ ವ್ಯವಸ್ಥೆಯಲ್ಲಿ ಕ್ಷುಲಕ ಕಾರಣಕ್ಕೆ ಕೊಲೆ ಮಾಡುವಂತಹ ವಿಕೃತ ಮನಸ್ಥಿತಿ ಹೊಂದಿರುವ ವ್ಯಕ್ತಿಗಳು ಬದಲಾಗಬೇಕು.
ರಾಜ್ಯವನ್ನು ಆಳುವ ಸರ್ಕಾರಗಳು ದಲಿತರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದರು.
ಬಸವರಾಜ ಸೂಳಿಭಾವಿ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಜಿಲ್ಲೆಯನ್ನು ದೌರ್ಜನ್ಯ ಮುಕ್ತವನ್ನಾಗಿ ಮಾಡಬೇಕಾಗಿದೆ. ಡಾ. ಅಂಬೇಡ್ಕರ್ ರಚಿಸಿದ ಸಂವಿಧಾನ ಎಲ್ಲರಿಗೂ ಸಮಾನತೆ ಕಲ್ಪಿಸಿಕೊಟ್ಟಿದೆ. ಜಾತಿ, ಭೇದದ ವ್ಯವಸ್ಥೆ ದೂರಾಗಬೇಕಿದೆ. ದಲಿತರನ್ನು ಕೀಳು ಮನೋಭಾವದಿಂದ ಕಾಣುವ ನೋಟ ಬದಲಾಗಿ ಎಲ್ಲರೂ ಸಹೋದರತ್ವದ ಹಾದಿಯಲ್ಲಿ ಸಾಗುವ ಕಾಲದಲ್ಲಿ ಕೊಲೆ ಮಾಡುವ ಮಟ್ಟಕ್ಕೆ ಇಳಿಯುವುದು ನಾಗರಿಕ ಸಮಾಜ ಲೆ ತಗ್ಗಿಸುವಂತಾಗಿದೆ ಎಂದರು.
ಜಿಲ್ಲೆಯನ್ನು ದಲಿತರ ಹಾಗೂ ಅಲ್ಪಸಂಖ್ಯಾತರ ದೌರ್ಜನ್ಯ ಪೀಡಿತವೆಂದು ಘೋಷಿಸಬೇಕು. ಸರ್ಕಾರ ಜಿಲ್ಲೆಯ ಈ ಸಮುದಾಯಗಳಿಗೆ ಸೂಕ್ತ ರಕ್ಷಣೆ ಒದಗಿ ಸುವ ವ್ಯವಸ್ಥೆ ಮಾಡಿ ಸ್ವತಂತ್ರವಾಗಿ ಬದುಕಲು ಉದ್ಯೋಗ ಅವಕಾಶ ಸೃಷ್ಟಿಸುವ ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಹಕ್ಕೋತ್ತಾಯಗಳನ್ನು ಮಂಡಿಸಲಾಯಿತು.
ನಂತರದಲ್ಲಿ ಮುಖಂಡರಾದ ಇಂದಿರಾ ಕೃಷ್ಣಪ್ಪ, ಅಲ್ಲಮಪ್ರಭು ಬೆಟದೂರ, ಬಸವರಾಜ ಶೀಲವಂತರ, ಎ.ಬಿ. ರಾಮಚಂದ್ರಪ್ಪ, ಮಿಥುನ ಕುಮಾರ ಮಾತನಾಡಿ, ಸಂವಿಧಾನ ಎಲ್ಲ ವರ್ಗಕ್ಕೆ ಸಮಾನತೆ ನೀಡಿದ್ದು, ಆದರೂ ದೇಶದಲ್ಲಿ ದಲಿತರ ಮೇಲೆ ನಿರಂತರ ದೌರ್ಜನ್ಯ ಹಲ್ಲೆ ನಡೆಯುತ್ತಿದ್ದು, ಸರ್ಕಾರ ದಲಿತರ ರಕ್ಷಣೆ ಮುಂದಾಗಬೇಕಿದೆ. ಈ ನಿಟ್ಟಿನಲ್ಲಿ ನಾವು ಹೋರಾಟದ ಮೂಲಕ ಡಿಸಿಗೆ ಮನವಿ ಮಾಡಲಾಗಿದೆ ಎಂದರು.
ಈ ಸಂದರ್ಭ ಬಿ.ಪೀರ್ಭಾಷಾ, ಈಶಪ್ಪ ಕೋಳೂರು, ಬಿ.ಶ್ರೀಪಾದ ಭಟ್ಟ, ಟಿ. ರತ್ನಾಕರ, ಬಂಗವಾದಿ ನಾರಾಯಣಪ್ಪ, ಹೊರಳವಾಡಿ ನಂಜುಂಡಸ್ವಾಮಿ, ಅನಿಲ ಹೊಸಮನಿ, ಆನಂದ, ಸಿದ್ದಾರ್ಥ ಮಾಲೂರ, ತೇಜಸ್ವಿ ವಿ.ಪಟೇಲ್, ಕಾರಿಗನೂರು ಷಣ್ಮಖಪ್ಪ, ಶರಣಪ್ಪ ಬಂಡಿಹಾಳ, ಪರಶುರಾಮ ಸಕ್ರಣ್ಣವರ್, ಮೃತನ ತಾಯಿ ಯಲ್ಲಮ್ಮ ಬಂಡಿಹಾಳ ಹಾಗೂ ದಲಿತ ಸಂಘಟನೆಗಳ ಪದಾಧಿಕಾರಿಗಳು, ಮಹಿಳೆಯರು, ಮುಖಂಡರು, ಯುವಕರು ಇದ್ದರು.