ಜಿಲ್ಲಾಧಿಕಾರಿಗಳು, ಜಿಪಂ ಸಿಇಓ ಅವರಿಂದ ವಸತಿ ನಿಲಯದ ವ್ಯವಸ್ಥೆ ಪರಿಶೀಲನೆ

Mallikarjun
1 Min Read

Inspection of hostel arrangement by District Collector, GPAM CEO

ಕೊಪ್ಪಳ ಅಕ್ಟೋಬರ್ 08 (ಕ.ವಾ.) : ಉಪ ಲೋಕಾಯುಕ್ತರು ಅಕ್ಟೋಬರ್ 08ರಂದು ವಸತಿ ನಿಲಯಗಳಿಗೆ
ಅನಿರೀಕ್ಷಿತ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರು ಕಿನ್ನಾಳ ರಸ್ತೆಯಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಆಗಮಿಸಿ ವಸತಿ ನಿಲಯದ ಸ್ಥಿತಿಗತಿ ಪರಿಶೀಲಿಸಿದರು.
ನಿಲಯದ ವಿದ್ಯಾರ್ಥಿಗಳೊಂದಿಗೆ ಮಾತನಾಡಿ ಅಲ್ಲಿನ ಊಟದ ವ್ಯವಸ್ಥೆ, ಕುಡಿಯುವ ನೀರು, ಕಟ್ಟಡದ ವ್ಯವಸ್ಥೆ ಸೇರಿದಂತೆ ನಾನಾ ಮಾಹಿತಿ ಪಡೆದರು. ಊಟ ಸರಿಯಾಗಿರುವುದಿಲ್ಲ. ಕಟ್ಟಡವು ಇಕ್ಕಟ್ಟಾಗಿದೆ. ಅಧಿಕಾರಿಗಳು ಭೇಟಿ ನೀಡಿಲ್ಲ. ಬೆಡ್ ಇಲ್ಲ. ಬಿಸಿ ನೀರು ಬರುತ್ತಿಲ್ಲ ಎಂದು ವಿದ್ಯಾರ್ಥಿಗಳು ತಿಳಿಸಿದರು.
ವಾರದೊಳಗೆ ಎಲ್ಲ ವ್ಯವಸ್ಥೆಯನ್ನು ಸರಿಪಡಿಸಲು ಕ್ರಮ ವಹಿಸುವುದಾಗಿ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಸಿಇಓ ಅವರು ತಿಳಿಸಿದರು.
ಊಟ ಮಾಡಿದರು: ಗಂಟೆಗೂ ಹೆಚ್ಚು ಕಾಲ ವಸತಿ ನಿಲಯದಲ್ಲಿದ್ದು ವಸತಿ ನಿಲಯದ ವ್ಯವಸ್ಥೆಯ ಬಗ್ಗೆ ಸಮಗ್ರ ಮಾಹಿತಿ ಪಡೆದ ಬಳಿಕ ಜಿಲ್ಲಾಧಿಕಾರಿಗಳು, ಜಿಪಂ ಸಿಇಓ ಮತ್ತು ಅಪರ ಜಿಲ್ಲಾಧಿಕಾರಿಗಳು ವಸತಿ ನಿಲಯದ ವಿದ್ಯಾರ್ಥಿಗಳೊಂದಿಗೆ ವಸತಿ ನಿಲಯದಲ್ಲಿ ಊಟ ಮಾಡಿ ಆಹಾರದ ಗುಣಮಟ್ಟ‌‌ ಪರೀಕ್ಷಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತರಾದ ಗಣಪತಿ ಪಾಟೀಲ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ರಾಜು ಹಾಗೂ ಇನ್ನೀತರರು ಇದ್ದರು.

Share This Article
Leave a Comment