The post-monsoon rains will not be delayed beyond July 14: Prediction by Terina Hanumappa

ಜು.೧೪ರ ನಂತರ ಹಿಂಗಾರು ಮೀರುವುದಿಲ್ಲ : ತೇರಿನ ಹನುಮಪ್ಪನ ಭವಿಷ್ಯ
ಕೊಪ್ಪಳ: ಪ್ರಸಕ್ತ ಶ್ರೀಪರಾಭವನಾಮ ಸಂವತ್ಸರದ ಮುಂಗಾರು ಈ ಬಾರಿ ಕೈಕೊಡುತ್ತದೆ. ಇದರಿಂದ ರೈತರಿಗೆ ಮತ್ತು ಜಾನುವಾರುಗಳಿಗೆ ಸುಖವಿಲ್ಲವೆಂದು ಐತಿಹಾಸಿಕ ಕೆರೆಹಳ್ಳಿ ಗ್ರಾಮದ ತಿರುಗಲ್ ತಿಮ್ಮಪ್ಪ ಬೆಟ್ಟದ ತೇರಿನ ಹನುಮಪ್ಪ ಭವಿಷ್ಯ ನುಡಿದಿದ್ದು, ಜುಲೈ ೧೪ರ ನಂತರ ಹಿಂಗಾರು ಬುವಿಗೆ ಕಾಲಿಡಲಿದೆ ಎಂದು ಮಳೆಯ ಕುರಿತಾದ ಭವಿಷ್ಯ ನುಡಿದಿದ್ದಾನೆ.

ಶಹಪುರ ಗ್ರಾಮದ ಪೂಜಾರ ಪರಿವಾರದ ಸಣ್ಣ ಕರಿಯಪ್ಪ ನೇತೃತ್ವದಲ್ಲಿ ರೈತರು, ದನಗಾಹಿಗಳು ಮತ್ತು ಕುರಿಗಾಹಿಗಳು ಗ್ರೀಷ್ಮ ಋತುವಿನ ನಿಜ ಜ್ಯೇಷ್ಠ ಮಾಸ ಕೃಷ್ಣ ಪಕ್ಷದ ಶನಿವಾರ ಚತುರ್ಥಿಯಂದು ಪ್ರಾತಃಕಾಲ `ತೇರಿನ ಹನುಮಪ್ಪನ ಪತ್ರಿ ಕೇಳುವ’ ಕಾರಣಿಕದ ವೇಳೆ ಈ ಭವಿಷ್ಯ ನುಡಿದಿದ್ದಾನೆ. ಅಮಾವಾಸ್ಯೆ ಕೃಷ್ಣ ಪಕ್ಷದ ಮಿಥುನ-ಪುನರ್ವಸು ಸಮಯದಲ್ಲಿ ಮಳೆ ಕೂಟ ನಿಧಾನಗತಿಯಲ್ಲಿ ಘನೀಕರಿಸಿ ಹಂತ ಹಂತವಾಗಿ ಮಳೆ ಸುರಿಯಲಿದೆ ಎಂದು ತೇರಿನ ಹನುಮಪ್ಪ ನುಡಿದಿದ್ದಾನೆ.
ಹಿನ್ನೆಲೆ:
ಶಹಪುರ ಗ್ರಾಮದ ಪೂಜಾರ ಪರಿವಾರದವರು ಶತಮಾನಗಳಿಂದಲೂ ಪ್ರತಿ ಮಳೆಗಾಲದ ಅವಧಿಯಲ್ಲಿ `ತೇರಿನ ಹನುಮಪ್ಪನ ಪತ್ರಿ ಕೇಳುವ’ ಸಂಪ್ರದಾಯವಿರಿಸಿಕೊAಡಿದ್ದಾರೆ. ಗ್ರಾಮದ ಶ್ರೀ ಆಂಜನೇಯ ಗರ್ಭಗುಡಿಯಿಂದ ತುಂಬಿದ ಕೊಡ, ಗಂಟೆ, ಜಾಗಟೆಯೊಂದಿಗೆ ರೈತರೊಂದಿಗೆ ಮುನ್ನಾದಿನ ಗುಡ್ಡಕ್ಕೆ ತೆರಳುತ್ತಾರೆ. ರಾತ್ರಿಯೆಲ್ಲ ಹನುಮಂತನ ಸ್ಮರಣೆ, ಭಜನೆ ಮಾಡುತ್ತ ಆರಾಧಿಸುತ್ತಾರೆ. ಬೆಳಗಿನ ಪ್ರಾತಃಕಾಲದ ಸಮಯದಲ್ಲಿ ಮಜ್ಜನ ಬಾವಿಯಿಂದ ಶ್ರೀ ತಿರುಗಲ್ ತಿಮ್ಮಪ್ಪ ಮತ್ತು ಲಕ್ಷಿö್ಮÃದೇವಿಗೆ ಅಭಿಷೇಕ, ಪೂಜೆ ನೆರವೇರಿಸುತ್ತಾರೆ. ಬಳಿಕ ತೇರಿನ ಹನುಮಪ್ಪನಿಗೆ ಅಭಿಷೇಕ, ಹೂವಿನ ಅಲಂಕಾರ ಮಾಡುತ್ತಾರೆ. ಹೂವಿನ ಅಲಂಕಾರದ ಬಳಿಕ `ಪತ್ರಿ ಕೇಳುವ ಸಂಪ್ರದಾಯ’ ಇರುತ್ತದೆ. ತೇರಿನ ಹನುಮಪ್ಪ ತನ್ನ ದೇಹದ ಯಾವ ಭಾಗದಿಂದ ಹೂವು ಉದುರಿಸುತ್ತಾನೋ ಅದರ ಹಿನ್ನೆಲೆಯಲ್ಲಿ ಮಳೆಯ ವರ್ತಮಾನ ಅರಿಯಲಾಗುತ್ತದೆ.
ಈ ಬಾರಿ ತುಂಬಾ ತಡವಾಗಿ ಬಾಲದ ಮೂಲಕ ಹೂ ಬೀಳಿಸಿದನಂತೆ. ಅಂದರೆ ಮುಂಗಾರು ಅಷ್ಟಕ್ಕಷ್ಟೇ ಅಂತ ಅರ್ಥ. ಹಿಂಗಾರು ಕುರಿತು ಬೇಡಿಕೊಂಡಾಗ ಬಲ ತೋಳಿನ ರಟ್ಟೆಯಿಂದ ಹೂವು ಉದುರಿತಂತೆ. ಅಂದರೆ ಬರಲಿರುವ ಅಮಾವಾಸ್ಯೆಯ ನಂತರ ಹಿಂಗಾರು ಮಳೆಯಾಗಲಿದೆ. ಮುಂಗಾರು ಈ ಬಾರಿ ಸಂಪೂರ್ಣ ಕೈಕೊಟ್ಟಿದ್ದರಿಂದ ಕೃಷಿಕರಿಗೆ ದೊಡ್ಡ ಮಟ್ಟದ ಹೊಡೆತ ಬೀಳಲಿದೆ. ದನ, ಕುರಿ ಸೇರಿದಂತೆ ಎಲ್ಲ ರೀತಿಯ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಲಿದೆ. ರೈತರು ಮತ್ತೆ ಸಂಕಷ್ಟಕ್ಕೆ ಈಡಾಗಬೇಕಾಗುತ್ತದೆ. ಹಿಂಗಾರು ಸುಧಾರಿಸಿದರೂ ರೈತರು ಮತ್ತು ಜನ-ಜಾನುವಾರುಗಳಿಗೆ ಈ ವರ್ಷ ಸಂಕಷ್ಟ ಎದುರಾಗಲಿದೆ ಎನ್ನುವುದು ಇದರಿಂದ ವೇದ್ಯವಾಗುತ್ತದೆ.
ಇದು ಕೇವಲ ಕೊಪ್ಪಳ ಭಾಗಕ್ಕೆ ಮಾತ್ರ ಸೀಮಿತವಲ್ಲ, ರಾಜ್ಯ ಮತ್ತು ರಾಷ್ಟç ಮಟ್ಟದಲ್ಲಿ ಸಂಭವಿಸಬಹುದಾದ ವರ್ತಮಾನ ಎನ್ನುವುದು ಇದರ ತಾತ್ಪರ್ಯವಾಗಿದೆ. ಪೂಜಾರ ಪರಿವಾರದ ಐದಾರು ತಲೆಮಾರಿನಿಂದ ಈ ಧಾರ್ಮಿಕ ಪ್ರಕ್ರಿಯೆ ಮುನ್ನಡೆಸಿಕೊಂಡು ಬರಲಾಗುತ್ತಿದೆ. ರಂಗಪ್ಪ ಪೂಜಾರ ಮತ್ತು ನಿಂಗಪ್ಪ ಪೂಜಾರ ಇವರ ಅವಧಿಯಿಂದಲೂ ಈ ಆಚರಣೆ ಮುಂದುವರಿದಿದೆ. ತೇರಿನ ಹನುಮಪ್ಪನ ಮಳೆ ಕುರಿತ ಭವಿಷ್ಯವಾಣಿ ನಿಜವಾಗಲಿದೆ ಎಂದು ಭಕ್ತರು ತಿಳಿಸಿದ್ದಾರೆ.
ಈ ಬಾರಿಯ `ತೇರಿನ ಹನುಮಪ್ಪನ ಪತ್ರಿ ಕೇಳುವ’ ಕಾರಣಿಕದ ಆಚರಣೆಯಲ್ಲಿ ಪೂಜಾರ ಮನೆತನದ ಸಣ್ಣ ಕರಿಯಪ್ಪ ಪೂಜಾರ, ಗ್ರಾಮದ ಹಿರಿಯರಾದ ಭರಮಪ್ಪ ಕುರಿ, ಸಮಾಜ ಸೇವಕರಾದ ವಸಂತ್ ಕೆರೆಹಳ್ಳಿ ಮತ್ತು ವೀರಣ್ಣ ಕೋಮಲಾಪುರ ಇನ್ನಿತರರು ಇದ್ದರು. ಇದೇವೇಳೆ ಅಡುಗೆ ತಯಾರಿಸಿ, ದೇವರಿಗೆ ನೈವೇದ್ಯ ಅರ್ಪಿಸಿ, ಸಾಮೂಹಿಕ ಬಂಡೆಯೂಟ ಸವಿಯಲಾಯಿತು.
—–


