Breaking News

ಕರ್ನಾಟಕ ಸುಭಿಕ್ಷವಾಗಿರಲು ಕಾನ್‌ಸ್ಟೇಬಲ್‌ಗಳೇ ಕಾರಣ -ಕೆಎಸ್‌ಆರ್‌ಪಿ ಸಮುದಾಯ ಭವನ ಉದ್ಘಾಟನೆ-ಗೃಹ ಸಚಿವ ಪರಮೇಶ್ವರ ಹೇಳಿಕೆ

  

Constables are the reason why Karnataka is prosperous - KSRP Community Hall inauguration - Home Minister Parameshwara statement




ಬೆಂಗಳೂರು, ಜುಲೈ 17:- ರಾಜ್ಯದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ‌, ಸಾರ್ವಜನಿಕರ ಆಸ್ತಿ ರಕ್ಷಣೆ, ನಾವೆಲ್ಲ ಶಾಂತಿಯುತ ಬದುಕು ನಡೆಸಲು ಹಾಗೂ ಕರ್ನಾಟಕ ಸುಭಿಕ್ಷವಾಗಿ ಮತ್ತು ಶಾಂತಿಯಿಂದ ಇದೆ ಎಂದು ಹೇಳಲು ಪೊಲೀಸ್ ಕಾನ್‌ಸ್ಟೇಬಲ್‌ಗಳೇ ಕಾರಣ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.

ಕರ್ನಾಟಕ ರಾಜ್ಯ ಪೊಲೀಸ್ ಮತ್ತು ಬಿಎಂಆರ್‌ಸಿಎಲ್ ಸಹಯೋಗದೊಂದಿಗೆ ಬೆಂಗಳೂರಿನ ಕೋರಮಂಗಲದಲ್ಲಿ ನೂತನವಾಗಿ ನಿರ್ಮಿಸಿರುವ ‘ಕೆಎಸ್‌ಆರ್‌ಪಿ ಸಮುದಾಯ ಭವನ ಉದ್ಘಾಟನಾ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಪಾಲ್ಗೊಂಡು, ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಇಡೀ ದೇಶದಲ್ಲಿ ಮೊದಲ ಬಾರಿಗೆ ಕಾರಾಗೃಹ ಅಕಾಡೆಮಿಯ ಕಟ್ಟಡವನ್ನು ಉದ್ಘಾಟಿಸಲಾಗಿದೆ. ಅಲ್ಲದೇ, ಇಷ್ಟು ದೊಡ್ಡ ಕೆಎಸ್ಆರ್‌ಪಿ ಸಮುದಾಯ ಭವನವನ್ನು ನಿರ್ಮಿಸಿಲ್ಲ. ಇದರ ನಿರ್ಮಾಣಕ್ಕೆ ಬಿಎಂಆರ್‌ಸಿಎಲ್ 40 ಕೋಟಿ ರೂ. ನೀಡಿದ್ದಾರೆ. ಶೇಷಾದ್ರಿಪುರ ಪೊಲೀಸ್ ಠಾಣೆ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿದೆ. ನಮ್ಮ ಇಲಾಖೆ ಮಾನವ ಸಂಪನ್ಮೂಲಗಳ ಇಲಾಖೆ. ನಮ್ಮ ಇಲಾಖೆಯಲ್ಲಿ ದೊಡ್ಡ ಯೋಜನೆಗಳಿಲ್ಲ. ಆದರೆ, ಪೊಲೀಸರೆ ನಮ್ಮ ಇಲಾಖೆಯ ಸಂಪತ್ತು ಎಂದರು.

ರಾಜ್ಯದಲ್ಲಿ ಶಾಂತಿ, ಕಾನೂನು ಸುವ್ಯವ್ಥೆ, ಸಾರ್ವಜನಿಕರ ಆಸ್ತಿ ಕಾಪಾಡಲು, ನಾವೆಲ್ಲ ಶಾಂತಿಯುತ ಬದುಕು ನಡೆಸಲು, ಕರ್ನಾಟಕ ಸುಭಿಕ್ಷವಾಗಿ ಮತ್ತು ಶಾಂತಿಯಿಂದ ಇದೆ ಎಂದು ಹೇಳಲು ಕಾನ್ಸ್ಟೆಬಲ್ ಗಳು ಕಾರಣ. ಸರ್ಕಾರದ ವತಿಯಿಂದ ನಿಮಗೊಂದು ಸಲ್ಯೂಟ್ ಎಂದು ಹೇಳಿದರು.

ರಾಜ್ಯ ಪೊಲೀಸ್ ಇಲಾಖೆ ದೇಶದಲ್ಲೇ ಪ್ರಖ್ಯಾತಿ ಪಡೆದಿದೆ ಎಂಬುದನ್ನು ಸಂತೋಷವಾಗಿ ಹೇಳುತ್ತೇನೆ. ಮೂರು ದಿನದ ಹಿಂದೆ ಕೇಂದ್ರ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಆಗಮಿಸಿ ಪ್ರಗತಿ ಪರಿಶೀಲಿಸಿದ್ದರು. ಈ ವೇಳೆ, ರಾಜ್ಯ ಪೊಲೀಸ್ ಇಲಾಖೆಯ ಕಾರ್ಯವೈಖರಿ ಉತ್ತಮವಾಗಿದೆ ಎಂದು ಹೇಳಿ ಶ್ಲಾಘಿಸಿರುವುದು ನನಗೆ ಅತ್ಯಂತ ಹೆಮ್ಮೆ ಎನಿಸುತ್ತದೆ.

ನ್ಯಾಯ ಒದಗಿಸುವುದರಲ್ಲಿ ಕರ್ನಾಟಕ ಪೊಲೀಸ್ ನಂಬರ್ ಒನ್ ಇದೆ ಎಂದು ಹೈದ್ರಾಬಾದ್ ವಿಶ್ವವಿದ್ಯಾಲಯ ಹೇಳಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ನಮ್ಮ ಪೊಲೀಸರು ಪಾರಿತೋಷಕ ತಂದಿದ್ದಾರೆ ಎಂದು ಶ್ಲಾಘಿಸಿದರು.

ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್‌ನಲ್ಲಿ 10 ಲಕ್ಷ ಕೋಟಿ ರೂ. ಹೂಡಿಕೆ ಹರಿದು ಬಂದಿದೆ. ರಾಜ್ಯದಲ್ಲಿ ಕಾನೂನು ಸುವ್ಯವ್ಥೆ ಕೆಟ್ಟಿದ್ದರೆ ಇಷ್ಟೊಂದು ಹೂಡಿಕೆ ಬರುತ್ತಿರಲಿಲ್ಲ. ರಾಜ್ಯಕ್ಕೆ ಬಂಡಾವಾಳ ಹೂಡಿಕೆ ಬರುವಲ್ಲಿ, ನಿಮ್ಮ ಉತ್ತಮ ಕಾರ್ಯವೈಖರಿಯಿಂದ ಸಾಧ್ಯವಾಗಿದೆ ಎಂದರು.

ಸಿಎಂ ಅವರು ಬಜೆಟ್ ಸಿದ್ಧಪಡಿಸುವಾಗ, ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಅನೇಕ ಬೇಡಿಕೆಗಳನ್ನು ಅವರ ಮುಂದಿಟ್ಟು ಸಾವಿರಾರು ಕೋಟಿ ರೂ. ಕೇಳುತ್ತೇನೆ. ಪೊಲೀಸ್ ವಸತಿ ಗೃಹ ಯೋಜನೆ, ಹೊಸ ವಾಹನಗಳ ಖರೀದಿ ಸೇರಿದಂತೆ ವಿವಿಧ ಕಾರ್ಯಗಳಿಗೆ 900 ಕೋಟಿ ರೂ. ಹೆಚ್ಚು ಹಣ ಕೊಟ್ಟಿದ್ದಾರೆ. ಪೊಲೀಸ್ ಇಲಾಖೆಗೆ ಎಂದಿಗೂ ನಿರಾಸೆ ಮಾಡಿಲ್ಲ ಎಂದು ಹೇಳಿದರು.

ಹೊಸದಾಗಿ ಎರಡು ಪೊಲೀಸ್ ಬೆಟಾಲಿಯನ್ ಸ್ಥಾಪನೆ, 100 ಪೊಲೀಸ್ ಠಾಣೆಗಳ ಕಟ್ಟಡ ನಿರ್ಮಾಣಕ್ಕೆ ಹಣ ಒದಗಿಸಿದ್ದಾರೆ.
ಇಲಾಖೆಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲು ಮತ್ತು ಆಧುನಿಕ ಬದಲಾವಣೆ ತರಲು ಎಲ್ಲ‌ ರೀತಿಯ ಸಹಕಾರ ಕೊಟ್ಟಿದ್ದಾರೆ. ಇಡೀ ದೇಶದಲ್ಲಿ ಮೊದಲ ಬಾರಿಗೆ ಸೈಬರ್ ಕ್ರೈಂ ಪೊಲೀಸ್ ಠಾಣೆ ಸ್ಥಾಪಿಸಿದ್ದು ಕರ್ನಾಟಕ ಪೊಲೀಸ್. ಸೈಬರ್ ಅಪರಾಧಗಳನ್ನು ತಡೆಗಟ್ಟುವ ಶಕ್ತಿ ಕರ್ನಾಟಕ ಪೊಲೀಸರಿಗೆ ಇದೆ ಎಂದರು.

ರಾಜ್ಯದಲ್ಲಿ ಕೊಲೆ ಸೇರಿದಂತೆ ಎಲ್ಲ ರೀತಿಯ ಅಪರಾಧಗಳು ಕಡಿಮೆಯಾಗಿವೆ. ಪೊಲೀಸರು ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದರಿಂದ ಇದೆಲ್ಲ ಸಾಧ್ಯವಾಗಿದೆ. ಹಲವು ಬದಲಾವಣೆಗಳನ್ನು ತರಲು ಮುಂದಾಗಿದ್ದೇವೆ. ಸುಳ್ಳು ಸುದ್ದಿ, ಪ್ರಚೋಧನಾತ್ಮಕ ಭಾಷಣ ತಡೆಗಟ್ಟಲು ಕಾನೂನು ತರುತ್ತಿದ್ದೇವೆ ಎಂದು ತಿಳಿಸಿದರು.

ಅನೇಕ ಪೊಲೀಸ್ ಪೇದೆಗಳು ಕ್ಯಾಪ್ ಬದಲಾವಣೆ ಬಗ್ಗೆ ಮನವಿ ಬಂದಿತ್ತು. ಮಳೆ ಸಂದರ್ಭದಲ್ಲಿ ಸಮಸ್ಯೆಯಾಗುತ್ತಿತ್ತು. ಸಿಎಂ ಅವರು ಪೀಕ್ ಕ್ಯಾಪ್‌ಗಳನ್ನು ಆಯ್ಕೆ ಮಾಡಿದ್ದಾರೆ. ಸದ್ಯದಲ್ಲೆ ಪರಿಚಯಿಸುತ್ತೇವೆ. ಪೊಲೀಸ್ ಸಿಬ್ಬಂದಿಗಳ ಹಿತಾದೃಷ್ಡಿಯಿಂದ ಆರೋಗ್ಯ ತಪಾಸಣಾ ವೆಚ್ಚವನ್ನು 1500 ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದರು‌.

ಬೆಂಗಳೂರು ನಗರ ಪೊಲೀಸ್ ಕಮಾಂಡ್ ಸೆಂಟರ್ ವ್ಯವಸ್ಥೆ, ದೇಶದಲ್ಲಿ ಎಲ್ಲೂ ಇಲ್ಲ. ಲಂಡನ್ ಮೆಟ್ರೊ ಪೊಲೀಸ್‌ನವರು 7 ನಿಮಿಷಗಳಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಇದನ್ನು ಗಮನಿಸಿ ಹೊಯ್ಸಳ ಪೊಲೀಸ್ ಪರುಚಯಿಸಲಾಯಿತು. ಈ ಹಿಂದೆ ಜನರನ್ನು ಸ್ಪಂದಿಸಲು 25 ನಿಮಿಷ ಆಗುತ್ತಿತ್ತು. ಬೆಂಗಳೂರು ನಗರ ಪೊಲೀಸರು 9 ನಿಮಿಷಗಳಲ್ಲಿ ಪೊಲೀಸರು ಸ್ಥಳದಲ್ಲಿರುತ್ತಾರೆ. ಬೆಂಗಳೂರು ನಗರ ಪೊಲೀಸರು ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ಡ್ರಗ್ಸ್ ದೊಡ್ಡ ಪ್ರಮಾಣದಲ್ಲಿ ಸರಬರಾಜು ಆಗುತ್ತಿದೆ ಎಂದು ಬಿಜೆಪಿಯವರು ಬೊಬ್ಬೆ ಹೊಡೆಯುತ್ತಿದ್ದಾರೆ. ನಮ್ಮ ಸರ್ಕಾರವು ಡ್ರಗ್ಸ್ ವಿರುದ್ಧ ಸಮರ ಸಾರಿದೆ. ಸಾವಿರಾರು ಕೋಟಿ ರೂ.‌ ಮೌಲ್ಯದ ಡ್ರಗ್ಸ್ ಪತ್ತೆಹಚ್ಚಿ ನಾಶಪಡಿಸಲಾಗಿದೆ. ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತಡಹಚ್ಚುವ ಕಾರ್ಯ ರಾಜ್ಯ ಪೊಲೀಸರು ನಿರಂತರವಾಗಿ ನಡೆಸುತ್ತಿದ್ದಾರೆ.

ಕೆ‌ಎಸ್‌ಆರ್‌ಪಿ ಸಮುದಾಯ ಭವನಕ್ಕೆ ಇಲಾಖೆಯ ಸಿಬ್ಬಂದಿಗಳಿಂದ ಬಾಡಿಗೆ ತೆಗೆದುಕೊಳ್ಳುವುದು ಬೇಡ. ಪಿಎಸ್‌ಐಗಿಂತ ಮೇಲಿನ ಅಧಿಕಾರಿಗಳಿಗೆ ಕಡಿಮೆ ಪ್ರಮಾಣದಲ್ಲಿ ಬಾಡಿಗೆ ತೆಗೆದುಕೊಳ್ಳುವಂತೆ ಎಂದು ಅಧಿಕಾರಿಗಳಿಗೆ ಸೂಚಿಸಿದರು‌.

ಸಾರಿಗೆ ಸಚಿವರಾದ ಸಚಿವರಾದ ರಾಮಲಿಂಗ ರೆಡ್ಡಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಡಾ. ಎಂ.ಎ.ಸಲೀಂ, ಕರ್ನಾಟಕ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ, ಬಿಬಿಎಂಪಿ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಗೃಹ ಇಲಾಖೆಯ ಆಪ್ತಕಾರ್ಯದರ್ಶಿ ಕೆ.ವಿ.ಶರತ್‌ಚಂದ್ರ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ ಸಿಂಗ್, ಕೆಎಸ್‌ಆರ್‌ಪಿ ಎಡಿಜಿಪಿ ಉಮೇಶ್ ಅವರು ಉಪಸ್ಥಿತರಿದ್ದರು.

About Mallikarjun

Check Also

ವಿದ್ಯಾರ್ಥಿಗಳು ಪ್ರಜಾಪ್ರಭುತ್ವದ ರಾಯಭಾರಿಗಳು – ನಾಗರಾಜ್ ಎಸ್ ಗುತ್ತೇದಾರ್

Students are ambassadors of democracy – Nagaraj S. Guttedar ಗಂಗಾವತಿ:ನಗರದ ಪ್ರತಿಷ್ಠಿತ ಸಂಕಲ್ಪ ಪಿಯು ಕಾಲೇಜಿನಲ್ಲಿ ನಡೆದ …

Leave a Reply

Your email address will not be published. Required fields are marked *