ಮೂಗು ಸುರೇಶರ ‘ಕ್ಷಮೆಯಿರಲಿ ತಂದೆ’ ಜೂನ್ ೧೨ ಕ್ಕೆ ಬಿಡುಗಡೆ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು

Mugu Suresh's 'Kshmeiirali Paat' is releasing on June 12

ಮೂಗು ಸುರೇಶರ ‘ಕ್ಷಮೆಯಿರಲಿ ತಂದೆ’ ಜೂನ್ ೧೨ ಕ್ಕೆ ಬಿಡುಗಡೆ

ಜಾಹೀರಾತು


ಬೆಂಗಳೂರು : ಶ್ರೀದೇವಿರಮ್ಮ ಮಲ್ಲಿಕಾರ್ಜುನ ಸ್ವಾಮಿ ಫಿಲಂಸ್ ಅವರ ಶ್ರೀಮತಿ ಅಹಲ್ಯಾ ಸುರೇಶ ಅರ್ಪಿಸುವ ಸ.ಹರೀಶ್‌ರ ಕಥೆ ‘ಡೆತ್ ಸರ್ಟಿಫಿಕೆಟ್’ ಆಧಾರಿತ ‘ಕ್ಷಮೆಯಿರಲಿ ತಂದೆ’ ಇದೆ ಜೂನ್ ೧೨ ಕ್ಕೆ ರಾಜ್ಯಾದ್ಯಂತ ತೆರೆ ಕಾಣಲಿದೆ.
ರಂಗಭೂಮಿ, ಕಿರುತೆರೆ, ಹಿರಿತೆರೆ ಕಲಾವಿದರಾಗಿ ಹಾಸ್ಯ ಕಲಾವಿದರಾಗಿ ಮೂರು ದಶಕಗಳಿಂದ ೪೦೦ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಎಂ.ಎನ್.ಸುರೇಶ್ (ಮೂಗು ಸುರೇಶ್) ಈಗ ನಿರ್ಮಾಪಕ, ನಿರ್ದೇಶಕರಾಗಿ ‘ಕ್ಷಮೆಯಿರಲಿ ತಂದೆ’ ಚಿತ್ರ ನಿರ್ಮಿಸಿದ್ದು, ಈ ಚಿತ್ರದ ಮೋಷನ್ ಪೋಸ್ಟರ್, ಟ್ರೇಲರ್ ಹಾಗೂ ಲಿರಿಕಲ್ ವಿಡಿಯೋ ಬಿಡುಗಡೆ ಸಮಾರಂಭ ಬೆಂಗಳೂರಲ್ಲಿ ಜರುಗಿತು. ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕರಾದ ಟಿ.ಎಸ್ ನಾಗಾಭರಣ, ನಾಗತಿಹಳ್ಳಿ ಚಂದ್ರಶೇಖರ್, ನಿರ್ಮಾಪಕ ಉಮೇಶ್ ಬಣಕಾರ್ ಹಾಗೂ ರಾಮಕೃಷ್ಣ (ಮೇಕಪ್)ಮುಖ್ಯ ಅತಿಥಿಗಳಾಗಿ ಆಗಮಿಸಿ ಬಿಡುಗಡೆ ಮಾಡಿ, ಚಿತ್ರದ ಟ್ರೇಲರ್ ಚೆನ್ನಾಗಿದೆ. ಚಿತ್ರ ಯಶಸ್ವಿಯಾಗಲಿ, ಎಂ ಎನ್ ಸುರೇಶ್ ನಿರ್ಮಾಪಕ ಹಾಗೂ ನಿರ್ದೇಶಕರಾಗಿಯೂ ಗೆಲ್ಲಲಿ ಎಂದು ಶುಭ ಹಾರೈಸಿದರು. ಚಿತ್ರದ ಕುರಿತು ನಿರ್ಮಾಪಕ ಹಾಗೂ ನಿರ್ದೇಶಕ ಎನ್, ಎಂ.ಸುರೇಶ್ ಮಾತನಾಡಿ ನಾನು ಕೆಲವು ಚಿತ್ರಗಳಿಗೂ ಸಹ ನಿರ್ಮಾಪಕನಾಗಿದ್ದೆ. ಪೂರ್ಣಪ್ರಮಾಣದ ನಿರ್ಮಾಪಕನಾಗಿರುವುದು ಈ ಚಿತ್ರದಿಂದ. ನಿರ್ದೇಶನ ನಾನು ಮಾಡಬೇಕೆಂದುಕೊಂಡಿರಲಿಲ್ಲ, ನನ್ನ ಕಾರ್ಯವೈಖರಿ ಹತ್ತಿರದಿಂದ ಬಲ್ಲ ಸ್ನೇಹಿತರು ನೀವೇ ನಿರ್ದೇಶನ ಮಾಡಿ ಎಂದರು. ಮೊದಲ ನಿರ್ದೇಶನದ ಚಿತ್ರ, ಬೇರೆಯವರು ದುಡ್ಡು ಹಾಕುವುದು ಬೇಡ ಅಂತ ನಾನು ಕೂಡಿಟ್ಟಿದ್ದ ಹಣವನ್ನೇ ಈ ಚಿತ್ರಕ್ಕೆ ಹಾಕಿ ನಿರ್ಮಾಣ ಮಾಡಿದ್ದೇನೆ. ಬೆಂಗಳೂರು, ತುಮಕೂರು ಮೊದಲಾದ ಕಡೆ ಹತ್ತು ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ಶೀರ್ಷಿಕೆ ತಿಳಿಸುವಂತೆ ಇದೊಂದು ತಂದ-ಮಗನ ಬಾಂಧವ್ಯ ಸಾರುವ ಚಿತ್ರ. ಈ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.
ತಾರಾಗಣದಲ್ಲಿ ಮೂಗು ಸುರೇಶ್ ಜೊತೆಗೆ ಮಂಜುನಾಥ ಹೆಗ್ಡೆ, ರೇಣುಕಾ ಬಾಲಿ, ಶ್ರೀಮಂತ, ವಿನ್ಯಾ ಶೆಟ್ಟಿ ಮೊದಲಾದವರಿದ್ದಾರೆ. ತಾಂತ್ರಿಕವರ್ಗದಲ್ಲಿ ಛಾಯಾಗ್ರಹಣ ಸೂರ್ಯಕಾಂತ, ಸಂಕಲನ ಮುತ್ತುರಾಜ್, ಸಂಗೀತ ಪುಣ್ಯಶ್ ಕುಮಾರ್, ಪಿಆರ್ ಓ ಸುಧೀಂದ್ರಕುಮಾರ್, ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿಯವರಿದ್ದಾರೆ. ಚಿತ್ರವನ್ನು ಶ್ರೀ ದೇವಿರಮ್ಮ ಮಲ್ಲಿಕಾರ್ಜುನಸ್ವಾಮಿ ಫಿಲಂಸ್, ರಾಘವೇಂದ್ರ ಫಿಲಂಸ್,ಕವಿ ಎಂಟರ್ಪ್ರೈಸಸ್ ಹಂಚಿಕೆದಾರರಾಗಿದ್ದಾರೆ.
**
-ಡಾ.ಪ್ರಭು ಗಂಜಿಹಾಳ
ಮೊ:೯೪೪೮೭೭೫೩೪೬

Total Views: 0
Share This Article