Face the SSLC exam with courage, advises Grama PDO Suresh Chalwadi

ಧೈರ್ಯದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಿ ವಡ್ಡರಹಟ್ಟಿ ಗ್ರಾಪಂ ಪಿಡಿಓ ಸುರೇಶ ಚಲವಾದಿ ಸಲಹೆ
ಎಸ್ಸೆಸ್ಸೆಲ್ಸಿ ಪರೀಕ್ಷೆ: ಗುಲಾಬಿ, ಹೂ ನೀಡಿ ಸ್ವಾಗತ
ಗಂಗಾವತಿ : ತಾಲೂಕಿನ ಆರ್ಹಾಳ ಗ್ರಾಮದ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ಶುಕ್ರವಾರದಿಂದ ಆರಂಭವಾದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಗ್ರಾಮ ಪಂಚಾಯತಿ ಅಧಿಕಾರಿಗಳು, ಸದಸ್ಯರು, ಶಿಕ್ಷಣ ಇಲಾಖೆಯವರು ಸಿಹಿ, ಗುಲಾಬಿ ಹೂ ನೀಡಿ ಆರತಿ ಬೆಳಗಿ, ಹೂ ಎರಚಿ ಸ್ವಾಗತಿಸಿ ಶುಭ ಹಾರೈಸಿ, ವಿದ್ಯಾರ್ಥಿಗಳಿಗೆ ಉತ್ಸಾಹ ವಾತಾವರಣ ನಿರ್ಮಿಸಿದರು.
ವಡ್ಡರಹಟ್ಟಿ ಗ್ರಾಪಂ ಪಿಡಿಓ ಸುರೇಶ ಚಲವಾದಿ ಅವರು ಮಾತನಾಡಿ, ಕಳೆದ ಸಾಲಿನಲ್ಲಿ ಆರ್ಹಾಳ ಪರೀಕ್ಷಾ ಕೇಂದ್ರದ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ.50ಕ್ಕೆ ಕುಸಿದಿತ್ತು. ಈ ಹಿನ್ನೆಲೆಯಲ್ಲಿ 2024-25 ನೇ ಸಾಲಿನಲ್ಲಿ ಶೇ.100 ಫಲಿತಾಂಶ ಹೆಚ್ಚಳದ ಗುರಿ ಇಟ್ಟುಕೊಂಡು 78 ವಿದ್ಯಾರ್ಥಿಗಳಿಗೆ 190 ದಿನಗಳ ಕಾಲ ಗಣಿತ ಹಾಗೂ ವಿಜ್ಞಾನ ವಿಷಯಗಳ ಮಾಹಿತಿಯುಳ್ಳ ದಿನಪತ್ರಿಕೆಗಳನ್ನು ಹಾಕಿಸಲಾಗಿತ್ತು. ಜೊತೆಗೆ ವಿಷಯವಾರು ಶಿಕ್ಷಕರು ಹೆಚ್ಚಿನ ಮುತುವರ್ಜಿ ವಹಿಸಿ ಅಭ್ಯಾಸ ಮಾಡಿಸಿ ಫಲಿತಾಂಶ ಸುಧಾರಣೆಗೆ ಶ್ರಮವಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಜೀವನದಲ್ಲಿ ಮಹತ್ತರ ಘಟ್ಟವಾಗಿದ್ದು, ವಿದ್ಯಾರ್ಥಿಗಳು ಧೈರ್ಯದಿಂದ ಪರೀಕ್ಷೆ ಎದುರಿಸಬೇಕು. ಪರೀಕ್ಷೆಯನ್ನು ಚೆನ್ನಾಗಿ ಬರೆದು ಉತ್ತಮ ಅಂಕ ಪಡೆದು ಶಾಲೆ ಮತ್ತು ಪಾಲಕರಿಗೆ ಹೆಸರು ತರಬೇಕು. ಪಾಲಕರು ಮಕ್ಕಳ ಮೇಲೆ ಒತ್ತಡ ಹೇರದೆ ಸಹಕಾರ ನೀಡಬೇಕು. ಕೇಂದ್ರದಲ್ಲಿ ಭಯ ಮುಕ್ತ ವಾತಾವಣ ನಿರ್ಮಿಸುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಸಿಹಿ, ಗುಲಾಬಿ ನೀಡಿ ಆರತಿ ಬೆಳಗಿ ಹೂ ಎರಚಿ ಸ್ವಾಗತಿಸಿಕೊಳ್ಳಲಾಗಿದೆ ಎಂದರು.
ವಿಶೇಷ : ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಸ್ವಸಹಾಯ ಸಂಘದ ಮಹಿಳೆಯರು ಆರತಿ ಬೆಳಗಿ ಶುಭ ಹಾರೈಸಿದರು. ಗ್ರಾಪಂ ಅಧಿಕಾರಿಗಳು, ಸದಸ್ಯರು, ಹಳೇ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಎಕ್ಸಾಂ ಪ್ಯಾಡ್, ಪೆನ್ನುಗಳನ್ನು ನೀಡಿ ಸ್ವಾಗತಿಸಿ ಕೇಂದ್ರದಲ್ಲಿ ಭಯಮುಕ್ತ ವಾತಾವರಣ ನಿರ್ಮಿಸಿರುವುದು ವಿಶೇಷವಾಗಿತ್ತು. ವಿದ್ಯಾರ್ಥಿಗಳ ಪಾಲಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರುಗಳು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಸದಸ್ಯರಾದ ದುರುಗೇಶ, ಕನಕರಾಯ, ಪಂಪಣ್ಣ ಕೋರಿ, ಗ್ರಾಪಂ ಸಿಬ್ಬಂದಿ ರುದ್ರಸ್ವಾಮಿ, ನಾಗರತ್ನ, ಹಿರಿಯ ವಿದ್ಯಾರ್ಥಿ ಬಸವರಾಜ, ಎಸ್ಡಿಎಂಸಿ ಸದಸ್ಯರು, ಶಾಲಾ ಶಿಕ್ಷಕರು, ಸ್ವಸಹಾಯ ಸಂಘದ ಮಹಿಳೆಯರು ಇದ್ದರು.