Breaking News

ಬಾಲಮಂದಿರದ ಮಕ್ಕಳಿಂದ ತಾರಾಲಯ ವೀಕ್ಷಣೆ

Planetarium viewing by Kindergarten children

ಕೊಪ್ಪಳ ಅಕ್ಟೋಬರ್ 21 (ಕ.ವಾ.): ಇಲ್ಲಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸರ್ಕಾರಿ ಬಾಲಕರ ಹಾಗೂ ಬಾಲಕಿಯರ ಮಂದಿರಗಳ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಸ್ಥಳೀಯ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಅಕ್ಟೋಬರ್ 21ರಂದು ಭೇಟಿ ನೀಡಿ ತಾರಾಲಯ, ಸೌರಮಂಡಲ, ವಿವಿಧ ಭೌತಶಾಸ್ತ್ರೀಯ ರಚನೆಗಳನ್ನು ವೀಕ್ಷಿಸಿದರು.
ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ತಾತ್ಕಾಲಿಕವಾಗಿ ಸ್ಥಾಪಿಸಲಾಗಿರುವ ತಾರಾಲಯವನ್ನು ಪ್ರವೇಶಿಸಿದ ವಿದ್ಯಾರ್ಥಿಗಳು ಸೌರಮಂಡಲದ ರಚನೆ, ಸೂರ್ಯ ಮತ್ತು ವಿವಿಧ ನಕ್ಷತ್ರಗಳು, ಗ್ರಹಗಳು, ಧೂಮಕೇತು, ಉಲ್ಕೆಗಳು ಮೊದಲಾದವುಗಳ ದೃಶ್ಯಗಳನ್ನು ಕಣ್ತುಂಬಿಕೊಂಡರು.
ತೇಲುವ ಚೆಂಡು, ಭೂಮಿಯ ಚಲನೆ, ಬೆಳಕು, ನೆರಳು, ವರ್ಣಗಳು, ಜಾದೂ ನಲ್ಲಿ (ಮ್ಯಾಜಿಕ್ ಟ್ಯಾಪ್), ಉಂಗುರಗಳಿಂದ ಉಂಟಾಗುವ ದೃಷ್ಟಿಭ್ರಮೆ, ಅನಂತ ಬಾವಿ, ಚಿತ್ರಗುಣಕ, ಕನ್ನಡಿ ಮತ್ತು ಪ್ರತಿಬಿಂಬ, ಪೆಡಲ್ ಪವರ್ ಸೇರಿದಂತೆ ವಿವಿಧ ವಿಜ್ಞಾನ ಮಾದರಿಗಳ ಕುರಿತು ಪ್ರಾದೇಶಿಕ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಮೈಲಾರಪ್ಪ ಅವರು ಮಕ್ಕಳಿಗೆ ಕುತೂಹಲಕರವಾಗಿ ವಿವರಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರೋಹಿಣಿ ಕೊಟಗಾರ ಮಾತನಾಡಿ, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಲು ಪ್ರಾದೇಶಿಕ ವಿಜ್ಞಾನ ಕೇಂದ್ರ ಮಾಡುತ್ತಿರುವ ಪ್ರಯತ್ನಗಳು ಶ್ಲಾಘನೀಯ. ಎಲ್ಲಾ ಕ್ರಿಯೆ, ಚಟುವಟಿಕೆಗಳಿಗೆ ವಿಜ್ಞಾನವೇ ಆಧಾರವಾಗಿರುತ್ತದೆ. ವಿಜ್ಞಾನವೊಂದೇ ಸತ್ಯ. ಅಂಧ ನಂಬಿಕೆಗಳನ್ನು ಕೈಬಿಟ್ಟು ಪ್ರತಿಯೊಂದನ್ನು ವೈಜ್ಞಾನಿಕವಾಗಿ ನೋಡುವ, ಅರ್ಥೈಸಿಕೊಳ್ಳುವ ಪ್ರಯತ್ನಗಳನ್ನು ಮಾಡಬೇಕು. ಕೊಪ್ಪಳದಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಬಾಲಮಂದಿರದಲ್ಲಿರುವ ಗ್ರಾಮೀಣ ಮಕ್ಕಳು ಇಂದು ಇಲ್ಲಿಗೆ ಭೇಟಿ ನೀಡುವ ಮೂಲಕ ಸಂತಸಪಡುವದರೊಂದಿಗೆ ಅನೇಕ ವಿಷಯಗಳನ್ನು ಬೆರಗು ಗಣ್ಣಿನಿಂದ ನೋಡಿದ್ದಾರೆ. ಕಿರಿಯರಷ್ಟೇ ಅಲ್ಲದೇ ಹಿರಿಯರು ಕೂಡ ಅರಿಯಬೇಕಾದ ಅನೇಕ ಸಂಗತಿಗಳು ಇಲ್ಲಿವೆ ಎಂದರು.
ಬಾಲಮಂದಿರದ ಅಧೀಕ್ಷಕಿ ಮಂಜುಳಾ ಬುದ್ದಪ್ಪನವರ್, ಸಾಂಸ್ಥಿಕ ರಕ್ಷಣಾಧಿಕಾರಿ ಸುಮಲತಾ ಎಂ.ಡೊಳ್ಳಿನ, ಲೀಗಲ್ ಕಂ ಪ್ರೊಬೇಶನ್ ಅಧಿಕಾರಿ ಶಿವಲೀಲಾ ವನ್ನೂರ, ಸಿಬ್ಬಂದಿ ವರ್ಗದ ನೇತ್ರಾ ಹಡಪದ, ಮಂಜುನಾಥ, ಮಕ್ಕಳ ಜಾಗೃತಿ ಸಂಸ್ಥೆಯ ಪ್ರಕಾಶ್, ವ್ಯೋಮಕೇಶಯ್ಯ, ಶರಣಮ್ಮ ಸೇರಿದಂತೆ ಇತರರು ಇದ್ದರು.

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.