ವಸತಿ ಸಂಕಿರಣಗಳಿಗೆ ಸಂಬಂಧಿಸಿದ  ಕಾನೂನು ಸುಧಾರಣೆಗಳಿಗೆ ಕ್ರಮ: ಎನ್.ಎ. ಹ್ಯಾರಿಸ್

H.Mallikarjun
H.Mallikarjun - Kalyanasiri
2 Min Read
ಜಾಹೀರಾತು

Action for legal reforms related to housing complexes: N.A. Harris




ವಸತಿ ಸಂಕಿರಣಗಳಿಗೆ ಸಂಬಂಧಿಸಿದ  ಕಾನೂನು ಸುಧಾರಣೆಗಳಿಗೆ ಕ್ರಮ: ಎನ್.ಎ. ಹ್ಯಾರಿಸ್

ಜಾಹೀರಾತು

 

ಬೆಂಗಳೂರು: ವಸತಿ ಸಂಕಿರಣಗಳಿಗೆ ಸಂಬಂಧಿಸಿದ  ಕಾನೂನು ಸುಧಾರಣೆಗಳಿಗೆ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರೀಸ್ ಹೇಳಿದ್ದಾರೆ.

ಹಿರಿಯ ವಕೀಲರಾದ ಬೀನಾ ಪಿಳ್ಳೈ ನೇತೃತ್ವದ ನೆಕ್ಸ್ಟ್ ಲೀಗಲ್ ಸರ್ವೀಸಸ್ ಹಾಗೂ ಬೆಂಗಳೂರು ಅಪಾರ್ಟ್ಮೆಂಟ್ ಫೆಡರೇಷನ್ ಸಹಯೋಗದಲ್ಲಿ ಸೇಂಟ್ ಜೋಸೆಫ್ ಕಾನೂನು ಕಾಲೇಜಿನಲ್ಲಿ ವಸತಿ ಸಂಕಿರ್ಣಗಳಿಗೆ ಸಂಬಂಧಿಸಿದ ಕಾನೂನು ಜಾಗೃತಿ ಮತ್ತು ಪಾಲುದಾರರ ಸಂವಾದ ‘ಪ್ರೊಪ್ರೈಟಾಸ್ 2.0’ ನಲ್ಲಿ ಮಾತನಾಡಿದ ಅವರು, ಅಪಾರ್ಟ್ಮೆಂಟ್ ಮಾಲೀಕರು, ಬಿಲ್ಡರ್ಗಳು ಮತ್ತು ವಿವಿಧ ಸರ್ಕಾರಿ ಇಲಾಖೆಗಳ ನಡುವೆ ಸಮನ್ವಯತೆ ತರುವ ಉದ್ದೇಶದಿಂದ ಸರ್ಕಾರ ಹಲವು ಕಾನೂನು ಸುಧಾರಣೆಗಳನ್ನು ಕೈಗೊಂಡಿದೆ ಎಂದು ತಿಳಿಸಿದರು.

“ಬೆಂಗಳೂರು ವಿವಿಧ ಹಿನ್ನೆಲೆಯ ಜನ ವಾಸಿಸುವ  ಚೈತನ್ಯಮಯ ಮಹಾನಗರವಾಗಿದೆ. ಜೀವನಶೈಲಿ ಹಾಗೂ ನಗರ ಜೀವನದ ಮಾದರಿಗಳು ಬದಲಾಗಿರುವ ಹಿನ್ನೆಲೆಯಲ್ಲಿ ಹಳೆಯ ಕಾನೂನುಗಳು ಮತ್ತು ಪದ್ಧತಿಗಳು ಹಲವು ಬಾರಿ ಅಡಚಣೆಯಾಗುತ್ತಿವೆ. ಈ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಹೊಸ ಕಾನೂನು ಚೌಕಟ್ಟುಗಳು, ತಂತ್ರಜ್ಞಾನ ಆಧಾರಿತ ಆಡಳಿತ ವ್ಯವಸ್ಥೆ ಹಾಗೂ ಸಾರ್ವಜನಿಕ ಜಾಗೃತಿಯ ಮೂಲಕ ವ್ಯವಸ್ಥೆಯನ್ನು ಆಧುನೀಕರಿಸಲು ಕ್ರಮ ಕೈಗೊಳ್ಳುತ್ತಿದೆ,” ಎಂದು ಅವರು ಹೇಳಿದರು.

ಬಿಡಿಎ ಆಡಳಿತದಲ್ಲಿ ಪಾರದರ್ಶಕತೆ, ತಂತ್ರಜ್ಞಾನ ಆಧಾರಿತ ಕಾರ್ಯವಿಧಾನಗಳನ್ನು ಅಳವಡಿಸಲಾಗಿದೆ. ವಿಶೇಷ ದೂರು ಪರಿಹಾರ ವ್ಯವಸ್ಥೆ ಹಾಗೂ ಕಾನೂನು ವಿವಾದಗಳನ್ನು ಶೀಘ್ರ ಬಗೆಹರಿಸಲು ಅಧಿಕೃತ ಮಧ್ಯಸ್ಥಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. “ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ಮತ್ತು ಅವುಗಳನ್ನು ಶೀಘ್ರವಾಗಿ ಪರಿಹರಿಸಲು ನಿಯಮಿತ ಆನ್ಲೈನ್ ನೇರ ಸಂವಾದ ಕಾರ್ಯಕ್ರಮಗಳನ್ನು ಆರಂಭಿಸಿದ್ದೇವೆ,” ಎಂದು ಅವರು ಹೇಳಿದರು.

ಬೆಂಗಳೂರು ಅಪಾರ್ಟ್ಮೆಂಟ್ ಫೆಡರೇಷನ್ ಅಧ್ಯಕ್ಷ ಸತೀಶ್ ಬಿ. ಮಲ್ಯ ಮಾತನಾಡಿ, ಕಟ್ಟಡ ನಿರ್ಮಾಣ ಪ್ರಕ್ರಿಯೆ ಮತ್ತು ಅಪಾರ್ಟ್ಮೆಂಟ್ ಆಡಳಿತಕ್ಕೆ ಸಂಬಂಧಿಸಿದ ಹೊಸ ಕಾನೂನುಗಳನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿರುವುದು ಉತ್ತಮ ಬೆಳವಣಿಗೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈಗಾಗಲೇ ನಮ್ಮೊಂದಿಗೆ ಸುಧಾರಣೆಗಳ ಕುರಿತು ಸಮಾಲೋಚನೆ ನಡೆಸಿದ್ದಾರೆ. ನಮ್ಮ ಶಿಫಾರಸುಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಶ್ರೀ ಕೆ ರಾಮಚಂದ್ರನ್ (ನಿವೃತ್ತ) ಮಾಜಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು, ನ್ಯಾಯಮೂರ್ತಿ ಡಾ. ಅಶೋಕ್ ಬಿ ಹಿಂಚಿಗೇರಿ, ಅಧ್ಯಕ್ಷರು, ಕರ್ನಾಟಕ ಕಾನೂನು ಆಯೋಗ ಮತ್ತು ಮಾಜಿ ನ್ಯಾಯಾಧೀಶರು, ಕರ್ನಾಟಕ ಹೈಕೋರ್ಟ್,  ಬೀನಾ ಪಿಳ್ಳೈ, ಸ್ಥಾಪಕರು, ನೆಕ್ಸ್ಟ್ಲೀಗಲ್ ಸರ್ವೀಸಸ್,  ದೇವಿ ಸುಕನ್ಯಾ, ನೆಕ್ಸ್ಟ್ಲೀಗಲ್ ಸರ್ವೀಸಸ್, ನಿವೃತ್ತ ಐಎಎಸ್ ಅಧಿಕಾರಿ ರಾಕೇಶ್ ಸಿಂಗ್, ರೇರಾ ಅಧಿಕಾರಿಗಳು,  ಕಾನೂನು ತಜ್ಞರು, ಅಪಾರ್ಟ್ಮೆಂಟ್ ಸಂಘಗಳ ಪ್ರತಿನಿಧಿಗಳು, ವಕೀಲರು, ಬಿಲ್ಡರ್ಗಳು ಹಾಗೂ ಇತರೆ ಕೈಗಾರಿಕಾ ವಲಯದ ಪ್ರಮುಖರು ಭಾಗವಹಿಸಿದ್ದರು.

Total Views: 1
Share This Article