
ನೋಂದಣಿ ರದ್ದಾಗಿರುವ ಶಾಲೆಯಿಂದ ವಿದ್ಯಾರ್ಥಿಗಳಿಗೆ ಟಿ.ಸಿ ಕೊಡದಿರುವ ಬಗ್ಗೆ ಮಾಜಿ ಪ್ರಾಂಶುಪಾಲರಿಂದ ದೂರು: ಶಾಲಾ ಶಿಕ್ಷಣ ಇಲಾಖೆಯಿಂದ ತನಿಖೆಗೆ ಆದೇಶ

Former principal complains about not giving TC to students from deregistered school: School Education Department orders investigation

ಬೆಂಗಳೂರು,ಜೂ.10: ಥಣಿಸಂದ್ರದ ಹೆಗ್ಗಡೆ ನಗರದ ನೋಂದಣಿ ರದ್ದಾಗಿರುವ ಸಾಮರ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಸ್ಕೂಲ್ ಆಡಳಿತ ಮಂಡಳಿಯು ವಿದ್ಯಾರ್ಥಿಗಳಿಗೆ ಟಿಸಿ ಕೊಡದೆ, ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿರುವ ಆರೋಪದ ಬಗ್ಗೆ ಶಾಲಾ ಶಿಕ್ಷಣ ಇಲಾಖೆಯ ಬೆಂಗಳೂರು ದಕ್ಷಿಣ ಜಿಲ್ಲೆಯ ಆಡಳಿತ ವಿಭಾಗದ ಉಪ ನಿರ್ದೇಶಕರು ಕೆ.ಆರ್.ಪುರಂನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತನಿಖೆ ನಡೆಸಿ ತುರ್ತಾಗಿ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ.
ಮುಂಬೈನ ಥಾಣೆಯ ಬಿಲಾಲ್ ಪಾರ್ಕ್ ನ ಅಲ್ಮಾಸ್ ಕಾಲೋನಿಯ ನಿವಾಸಿ ಹಾಗೂ ಜಾಮಿಯಾ ಮೊಹಮ್ಮದೀಯ ಮನ್ಸೂರ, ಜಾಮಿಯಾ ಮೊಹಮ್ಮದ್ದೀಯ ಮನ್ಸೂರ ಮದರಸಾದ ಮಾಜಿ ಪ್ರಾಂಶುಪಾಲರಾದ ಡಾ. ಖುರ್ಷಿ ಅಷರಫ್ ಇಕ್ಬಾಲ್ ಅವರು ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸುವಂತೆ ಸೂಚಿಸಿದ್ದಾರೆ.
ಮಾನ್ಯತೆ ರದ್ದಾದ ಹಿನ್ನೆಲೆಯಲ್ಲಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿಗಳ ಬೇಡಿಕೆಯಂತೆ ಆಡಳಿತ ಮಂಡಳಿಯವರು ವರ್ಗಾವಣೆ ಪತ್ರ ನೀಡದೇ ಬೆದರಿಕೆ ಹಾಕುತ್ತಿದ್ದಾರೆ. ಈ ದೌರ್ಜನ್ಯ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋದ ಮೇಲೆ ಕೇವಲ ಮೂವರು ವಿದ್ಯಾರ್ಥಿಗಳಿಗೆ ವರ್ಗಾವಣೆ ಪತ್ರ ನೀಡಿದ್ದಾರೆ. ಪ್ರತಿನಿತ್ಯ ಹಲವಾರು ವಿದ್ಯಾರ್ಥಿಗಳು, ಪೋಷಕರು ಟಿಸಿಗಾಗಿ ಅಲೆಯುತ್ತಿದ್ದಾರೆ. ಆದರೆ ಟಿಸಿ ನೀಡದೇ ಗೂಂಡಾ ವರ್ತನೆ ತೋರಿ, ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಹೀಗಾಗಿ ತಕ್ಷಣವೇ ಶಾಲಾ ಆಡಳಿತ ಮಂಡಳಿ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಡಾ. ಖುರ್ಷಿ ಅಷರಫ್ ಇಕ್ಬಾಲ್ ದೂರು ನೀಡಿದ್ದರು.
ಹೊರದೇಶದಿಂದ ಬಡಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಾಲಾ ಅಡಳಿತ ಮಂಡಳಿಗೆ ಆರ್ಥಿಕ ಸಂಪನ್ಮೂಲ ಹರಿದು ಬರುತ್ತದೆ. ಸಂಬಂಧಿಸಿದ ಪ್ರಾಧಿಕಾರದಿಂದ ನೋಂದಣಿ ಮಾಡಿಸದ ಶಾಲೆಗಳಲ್ಲಿ ಮಕ್ಕಳು ಓದಿ ಉನ್ನತ ಶಿಕ್ಷಣಕ್ಕೆ ತೆರಳಿದಾದ ತೊಂದರೆ ಅನುಭವಿಸುತ್ತಾರೆ ಎಂಬ ವಿಷಯವನ್ನು ಸ್ತಾಪಿಸಿದಾಗ ಶಾಲಾ ಅಡಳಿತ ಮಂಡಳಿಯವರು ನನ್ನನ್ನು ಶಾಲೆಯಿಂದ ಹೊರ ಹಾಕಿದ್ದಾರೆ. ಅದನ್ನು ಪ್ರಶ್ನಿಸಿ ಕಾನೂನು ಹೋರಾಟ ನಡೆಸುತ್ತಿದ್ದೇನೆ. ಸದರಿ ಶಾಲಾ ಆಡಳಿತ ಮಂಡಳಿಯ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು. ಶಾಲಾ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಭವಿಷ್ಯಕ್ಕೆ ಯಾರು ಹೊಣೆ. ಶಾಲಾ ಆಡಳಿತ ಮಂಡಳಿಗೆ ವಿದ್ಯಾರ್ಥಿಗಳ ಬಗ್ಗೆ ಕಿಂಚಿತ್ತೂ ಕಳಕಳಿ ಇಲ್ಲ ಎಂದು ದೂರಿದ್ದಾರೆ.
ಜಾಮಿಯ ಮೊಹಮ್ಮದಿಯ ಮನ್ಸೂರ ಮದರಸಾ ಮುಂಬೈ, ಅಲ್ ಜಾಮಿಯ ಮೊಹಮ್ಮದೀಯ ಎಜುಕೇಷನ್ ಸೊಸೈಟಿ ಮುಂಬೈ, ಜಾಮಿಯ ಮೊಹಮ್ಮದೀಯ ಸೊಸೈಟಿ ಮುಂಬೈ, ಅಲ್ ಜಾಮಿಯ ಮೊಹಮ್ಮದೀಯ ಎಜುಕೇಷನ್ ಸೊಸೈಟಿ ಮುಂಬೈ, ಸಾಮರ್ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಶಾಲೆ ಮುಂಬೈ, ಸಾಮರ್ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಶಾಲೆ ಹೆಗ್ಗಡೆ ನಗರ ಥಣಿಸಂದ್ರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಡಾ. ಖುರ್ಷಿ ಅಷರಫ್ ಇಕ್ಬಾಲ್ ಮನವಿ ಮಾಡಿದ್ದಾರೆ. ಈ ದೂರುಗಳ ಸಂಬಂಧ ಆಡಳಿತ ಮಂಡಳಿಯಿಂದ ವಿವರಣೆ ಪಡೆದು ಪರಿಶೀಲಿಸಿ ನಿಮ್ಮ ಸ್ಪಷ್ಟ ಅಭಿಪ್ರಾಯ ಮತ್ತು ಪೂರಕ ದಾಖಲೆಗಳೊಂದಿಗೆ ವಿವರವಾದ ವರದಿಯನ್ನು ಅತೀ ತುರ್ತಾಗಿ ಸಲ್ಲಿಸುವಂತೆ ಸೂಚಿಸಿದ್ದಾರೆ.
