Board of Islamic Education's Talent Recognition and Prize Distribution Ceremony in Gangavathi

ಗಂಗಾವತಿಯಲ್ಲಿ ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಪ್ರತಿಭಾ ಪುರಸ್ಕಾರ ಹಾಗೂ ಬಹುಮಾನ ವಿತರಣಾ ಸಮಾರಂಭ

ಗಂಗಾವತಿ: “ಅಕ್ಷರ ಕಲಿಯುವ ಮತ್ತು ಕಲಿಸುವ ಚಟುವಟಿಕೆಯನ್ನು ಪುಣ್ಯದಾಯಕ ಕರ್ಮ ಎಂದು ಇಸ್ಲಾಂ ಪರಿಗಣಿಸುತ್ತದೆ. ಸಂಪತ್ತನ್ನು ನಾವು ಕಾಪಾಡುವುದಾದರೆ, ಜ್ಞಾನವು ನಮ್ಮನ್ನು ಕಾಪಾಡುತ್ತದೆ” ಎಂದು ಬಿಐಇ ರಾಜ್ಯ ಕಾರ್ಯದರ್ಶಿ ರಿಯಾಝ್ ಅಹ್ಮದ್ ರೋಣ ಹೇಳಿದರು.
ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್, ಗಂಗಾವತಿ ಘಟಕದ ವತಿಯಿಂದ ಸ್ಥಳೀಯ ಅಲೀ ಫಾತಿಮಾ ಶಾದಿ ಮಹಲ್ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಐಓ ಸಿಂಧನೂರ ಘಟಕದ ಸ್ಥಾನೀಯ ಅಧ್ಯಕ್ಷೆ ನೇಹಾ ತಸ್ಲೀಮ್ ಮಾತನಾಡಿ, “ಜ್ಞಾನವು ಬೆಳಕಾಗಿದ್ದು, ಅದು ಅಂಧಕಾರವನ್ನು ಮತ್ತು ಅಜ್ಞಾನವನ್ನು ತೊಲಗಿಸುತ್ತದೆ. ದೇವರ ಶ್ರೇಷ್ಠ ದಾಸರು ಹೆಚ್ಚು ಕಲಿಯುವವರಾಗಿರುತ್ತಾರೆ” ಎಂದು ಹೇಳಿದರು.
ಅತಿಥಿಗಳಾದ ನಿವೃತ್ತ ಸರ್ಕಾರಿ ಶಾಲಾ ಮುಖ್ಯೋಪಾಧ್ಯಾಯ ಮಕ್ಬೂಲ್ ಎಂ.ಬಿ, ಕೊಪ್ಪಳ ಎಸ್ಡಿಎಂ ಅಧ್ಯಕ್ಷ ಮಹಮ್ಮದ್ ದಳಪತಿ, ಶಿಕ್ಷಕರಾದ ಮುಹಮ್ಮದ್ ಅಲಿ, ಡಾ. ಅಂಜುಮ್ ತಾಜ್, ಡಾ. ಝೋಬಿಯಾ ಅಫ್ಶೀನ್ ಅವರು ಸಂದರ್ಭೋಚಿತವಾಗಿ ಮಾತನಾಡಿದರು.
ಜಮಾಅತೆ ಇಸ್ಲಾಮೀ ಹಿಂದ್, ಗಂಗಾವತಿ ಸ್ಥಾನೀಯ ಅಧ್ಯಕ್ಷರಾದ ಅಬ್ದುಲ್ ಕುದ್ದುಸ್ ಅವರು ಪ್ರಾಸ್ತಾವಿಕ ಭಾಷಣದಲ್ಲಿ ಬಿಐಇಯ ಪರಿಚಯ ಮಾಡಿದರು. ಕೊನೆಯಲ್ಲಿ ಧನ್ಯವಾದ ಅರ್ಪಿಸಿದರು. ಜಿಐಓ ಸ್ಥಾನೀಯ ಅಧ್ಯಕ್ಷೆ ಹುಮೇರಾ ಸಿದ್ದೀಕಾ ಕಾರ್ಯಕ್ರಮವನ್ನು ನಿರೂಪಿಸಿದರು.
