
Demand to give proper status to Ahinda leader Satish Jarkiholi

ಅಹಿಂದ ನಾಯಕ ಸತೀಶ ಜಾರಕಿಹೊಳಿಗೆ ಸೂಕ್ತ ಸ್ಥಾನಮಾನ ನೀಡಲು ಆಗ್ರಹ

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಶೋಷಿತರು ಮತ್ತು ಅಲ್ಪಸಂಖ್ಯಾತರ ಏಳ್ಗೆಗಾಗಿ ಬದ್ಧತೆ ಹಾಗೂ ಎಲ್ಲ ಜಾತಿ ,ಧರ್ಮಗಳ ನಡುವೆ ತರ ತಮ ಭಾವಗಳಿಲ್ಲದೇ ಬಂಧುತ್ವ ಸ್ಥಾಪಿಸಲು ,ಮಾನವ ಬಂಧುತ್ವ ವೇದಿಕೆ ಮೂಲಕ ಕಳೆದ ಹಲವು ದಶಕಗಳಿಂದ ಶ್ರಮಿಸುತ್ತಿರುವ ಯಮಮಕನಮರಡಿ ಶಾಸಕರಾದ ಸತೀಶ ಜಾರಕಿಹೊಳಿ ಅವರು ಬುದ್ಧ,ಬಸವ ,ಅಂಬೇಡ್ಕರ್ ತತ್ವಗಳನ್ನು ಆಧರಿಸಿ ಮುನ್ನಡೆಯುತ್ತಿರುವ ಗಟ್ಟಿ ಸೈದ್ಧಾಂತಿಕ ರಾಜಕಾರಣದ ಮುಂದುವರೆದ ಕೊಂಡೊಯಾಗಿದ್ದ ಕಾಂಗ್ರೆಸ್ ಪಕ್ಷವು ಅವರಿಗೆ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಗಳನ್ನು ನೀಡಿ ಅಹಿಂದ ವರ್ಗಗಳಿಗೆ ನ್ಯಾಯ ಒದಗಿಸಲು ಕರ್ನಾಟಕ ರಾಜ್ಯ ವಾಲ್ಮೀಕಿ ಸಂಘಟನೆಗಳ ಒಕ್ಕೂಟದ ಸಂಚಾಲಕ ರಾಮು ನಾಯಕ ಒತ್ತಾಯಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಸತೀಶ ಜಾರಕಿಹೊಳಿ ಅವರು ಇಂದಿನ ದಿನಗಳಲ್ಲಿ ಅಪರೂಪವಾಗುತ್ತಿರುವ ಮೌಲ್ಯಗಳ ಬದ್ಧತೆಯನ್ನು ಹೊಂದಿರುವ ರಾಜಕಾರಣಿಯಾಗಿದ್ದಾರೆ. ಬುದ್ಧ, ಬಸವ,ಅಂಬೇಡ್ಕರ್ ತತ್ವಗಳ ನಿಜ ಅನುಯಾಯಿಗಳಾಗಿದ್ದಾರೆ. ಸಿದ್ಧರಾಮಯ್ಯನವರ ನೆಚ್ಚಿನ ಶಿಷ್ಯರಾಗಿ 2006 ರಲ್ಲಿ ಹುಬ್ಬಳ್ಳಿಯಲ್ಲಿ ಅಹಿಂದ ಸಮಾವೇಶ ಆಯೋಜನೆಯಲ್ಲಿ ಮುಖ್ಯಪಾತ್ರ ವಹಿಸುವ ಮೂಲಕ ಸಿದ್ಧರಾಮಯ್ಯನವರು ಮತ್ತು ಕಾಂಗ್ರೆಸ್ ಪಕ್ಷದ ಬಲ ಹೆಚ್ಚಲು ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ.
ರಾಜ್ಯದ ಯಾವುದೇ ಮೂಲೆಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ ನಾಯಕರಿಗೆ ತನು,ಮನ,ಧನದ ಮೂಲಕ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ನೆರವು ನೀಡಿದ ಏಕೈಕ ನಾಯಕ ಸತೀಶ ಜಾರಕಿಹೊಳಿ ಎಂಬುದನ್ನು ಇಂದಿನ ಅನೇಕ ಶಾಸಕರು,ಸಚಿವರು ಬಹಿರಂಗವಾಗಿ ಹೇಳಿರುವುದನ್ನು ಪಕ್ಷ ಪರಿಗಣಿಸಿ, ಅವರ ಬದ್ಧತೆಯನ್ನು ಗುರುತಿಸಿ ಸೂಕ್ತ ಸ್ಥಾನ ಮಾನ ಕಲ್ಪಿಸಬೇಕು.
ಅವರಿಗೆ ಉಸ್ತುವಾರಿ ನೀಡಿದ ಎಲ್ಲ ಕ್ಷೇತ್ರಗಳು ಮತ್ತು ರಾಜ್ಯದ ವಿವಿಧ ಉಪಚುನಾವಣೆಗಳಲ್ಲಿ ಪಕ್ಷ ಜಯಭೇರಿ ಬಾರಿಸಲು ಶ್ರಮಿಸಿದ್ದಾರೆ,2020 ರಲ್ಲಿ ಪಕ್ಷವು ಸಂಕಷ್ಟದಲ್ಲಿದ್ದಾಗ, ಕೇಂದ್ರ ರೇಲ್ವೆ ಸಚಿವ ಸುರೇಶ್ ಅಂಗಡಿ ಅವರ ನಿಧನದಿಂದ ತೆರವಾಗಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಸೂಚನೆಯಂತೆ ಸ್ಪರ್ಧಿಸಿ ಪ್ರಬಲ ಪೈಪೋಟಿ ನೀಡಿದ್ದು, ಸತೀಶ ಜಾರಕಿಹೊಳಿ ಅವರ ಧೈರ್ಯಕ್ಕೆ ಸಾಕ್ಷಿ ಎಂದು ಸ್ವತಃ ಸಿದ್ಧರಾಮಯ್ಯನವರೇ ಕೊಂಡಾಡಿದ್ದು ಈಗ ಇತಿಹಾಸ.
ರಾಜ್ಯದಲ್ಲಿರುವ ಸಾಮಾಜಿಕ ಸಮೀಕರಣವನ್ನು ಅತ್ಯಂತ ಸಮರ್ಥವಾಗಿ ಅರ್ಥೈಸಿಕೊಂಡಿರುವ ಸತೀಶ ಜಾರಕಿಹೊಳಿ ಅವರನ್ನು ಕಾಂಗ್ರೆಸ್ ಗೌರವದಿಂದ ನಡೆಸಿಕೊಂಡರೆ, ಆ ಪಕ್ಷಕ್ಕೆ ಸ್ವಾತಂತ್ರ್ಯಾನಂತರದ ಎಲ್ಲ ಚುನಾವಣೆಗಳ ಪಕ್ಕಾ ಮತ ಬ್ಯಾಂಕ್ ಆಗಿರುವ ಪರಿಶಿಷ್ಟ ಜಾತಿ ,ಪರಿಶಿಷ್ಟ ಪಂಗಡ ಹಾಗೂ ಎಲ್ಲ ಶೋಷಿತರ ನಿರೀಕ್ಷೆಗಳಿಗೆ ಕಾಂಗ್ರೆಸ್ ಮನ್ನಣೆ ನೀಡಿದಂತಾಗುತ್ತದೆ.
ಕಾಂಗ್ರೆಸ್ ಪಕ್ಷದ ವರಿಷ್ಠರು ಅಹಿಂದ ವರ್ಗಗಳ ನಾಯಕ ಸತೀಶ ಜಾರಕಿಹೊಳಿ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ ಮುಂಬರುವ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಪಕ್ಷಕ್ಕೆ ವ್ಯಾಪಕ ಬೆಂಬಲ ದೊರೆಯುವದರಲ್ಲಿ ಯಾವುದೇ ಅನುಮಾನಗಳಿಲ್ಲ ಎಂದು ರಾಮು ನಾಯಕ ಅಭಿಪ್ರಾಯಪಟ್ಟಿದ್ದಾರೆ.
