
There are 5.2 crore pending cases in the country, speedy justice should be the fundamental duty of lawyers: Justice P.S. Dinesh Kumar

ಪೋಕ್ಸೋ ಕುರಿತ ಅಣಕು ನ್ಯಾಯಾಲಯ ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನ ವಿತರಣೆ

ದೇಶದಲ್ಲಿ 5.2 ಕೋಟಿ ಪ್ರಕರಣಗಳು ಬಾಕಿ ಇದ್ದು, ತ್ವರಿತ ನ್ಯಾಯದಾನ ವಕೀಲರ ಮೂಲಭೂತ ಕರ್ತವ್ಯವಾಗಬೇಕು: ಜಸ್ಟಿಸ್ ಪಿ.ಎಸ್. ದಿನೇಶ್ ಕುಮಾರ್
ಬೆಂಗಳೂರು,ಮೇ.31: ಜೀವನದ ಎಲ್ಲಾ ಹಂತಗಳಲ್ಲೂ ನೈತಿಕತೆಯನ್ನು ಅಳವಡಿಸಿಕೊಂಡಲ್ಲಿ ಬದುಕು, ವೃತ್ತಿಯಲ್ಲಿ ಯಶಸ್ವಿಯಾಗಬಹುದು ಎಂದು ನಿವೃತ್ತ ಮುಖ್ಯನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಹೇಳಿದ್ದಾರೆ.
ದೇವಾಂಗ ಸಂಘ ಕಾಲೇಜ್ ಆಫ್ ಲಾ ಹಾಗೂ ಯುವ ವಕೀಲರ ಸ್ನೇಹ ಬಳಗದಿಂದ ದೇವಾಂಗ ಸಂಘದ ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಮೂರು ದಿನಗಳ “ಫೋಕ್ಸ್ ಕಾಯ್ದೆ” ಕುರಿತು ಶ್ರೀ ಪತಿಯಪ್ಪ ಸ್ಮರಣಾರ್ಥ ಅಖಿಲ ಕರ್ನಾಟಕ ಪ್ರಥಮ ಕನ್ನಡ ಅಣಕು ನ್ಯಾಯಾಲಯ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ನೈತಿಕತೆ ಎಂದರೆ ಉತ್ತಮ ಗುಣಮಟ್ಟದ ನೈತಿಕತೆಯನ್ನು ಅಳವಡಿಸಿಕೊಳ್ಳಬೇಕು. ಉತ್ತಮ ಅಭ್ಯಾಸಗಳಿಂದ ನ್ಯಾಯಾಂಗ ವ್ಯವಸ್ಥೆ ಉತ್ತಮಗೊಳ್ಳಲಿದೆ. ದೇಶದಲ್ಲಿ 5.2 ಕೋಟಿ ಪ್ರಕರಣಗಳು ಬಾಕಿ ಉಳಿದಿವೆ. ತ್ವರಿತ ನ್ಯಾಯದಾನ ವಕೀಲರ ಮೂಲಭೂತ ಕರ್ತವ್ಯವಾಗಬೇಕು. ಆಸ್ತಿ ವಿಭಾಗ ಕುರಿತ ವ್ಯಾಜ್ಯ 60 ವರ್ಷಗಳಿಂದ ಇತ್ಯರ್ಥವಾಗಿಲ್ಲ ಎಂದರೆ ನ್ಯಾಯದಾನ ವ್ಯವಸ್ಥೆ ಹೇಗಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಿ ಎಂದರು.
ರಾಜ್ಯ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಂ.ಜಿ. ಉಮಾ ಮಾತನಾಡಿ, ನ್ಯಾಯಾಲಯದಲ್ಲಿನ ವಾದ, ಪ್ರತಿವಾದ ಮಾತೃಭಾಷೆಯಲ್ಲಿದ್ದರೆ ಕಕ್ಷಿದಾರನಿಗೆ ಅರ್ಥವಾಗುತ್ತದೆ. ಜಿಲ್ಲಾ ನ್ಯಾಯಾಲಯಗಳಲ್ಲಿ ಮಾತೃಭಾಷೆಯಲ್ಲಿ ತೀರ್ಪು ನೀಡುತ್ತಿರುವುದು ಉತ್ತಮ ಬೆಳವಣಿಗೆ. ವಕೀಲರು ಉನ್ನತ ನ್ಯಾಯಾಲಯಗಳಲ್ಲಿ ಇಂಗ್ಲಿಷ್ ನಲ್ಲಿ ವ್ಯವಹರಿಸಬೇಕು. ಆದ್ದರಿಂದ ಇಂಗ್ಲಿಷ್ ಭಾಷಾ ಪ್ರೌಢಿಮೆ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ನಿರ್ದೇಶಕರಾದ ಪ್ರೊ.ಸಿ.ಎಸ್. ಪಾಟೀಲ್, ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿ ಸಿ.ಕೆ. ವಿರೇಶ್ ಕುಮಾರ್. ಹುಬ್ಬಳ್ಳಿಯ ಕೆ.ಎಸ್.ಎಲ್.ಯು ವಿದ್ಯಾವಿಷಯಕ ಪರಿಷತ್ ಸದಸ್ಯ ಡಾ. ಶಾರದಾ ನಿರ್ವಾಣಿ, ದೇವಾಂಗ ಸಂಘದ ಅಧ್ಯಕ್ಷ ಡಾ. ಜಿ. ರಮೇಶ್, ದೇವಾಂಗ ಸಂಘದ ಉಪಾಧ್ಯಕ್ಷರಾದ ಎ.ವಿಜಯ್ ಕುಮಾರ್, ಪಾರ್ವತಿ, ದೇವಾಂಗ ಸಂಘ ಕಾಲೇಜ್ ಆಫ್ ಲಾ ಹಾಗೂ ಯುವ ವಕೀಲರ ಸ್ನೇಹ ಬಳಗದ ಅಧ್ಯಕ್ಷ ಅನಿಲ್ ರೆಡ್ಡಿ, ಮತ್ತು ಪ್ರಾಂಶುಪಾಲರಾದ ಡಾ. ಶಿಲ್ಪ ಬಿ .ಪಿ ., ಸಂಘದ ಕಾರ್ಯದರ್ಶಿ ಆರ್. ಭಾಸ್ಕರ್, ಖಜಾಂಚಿ ಎಂ. ಲಕ್ಷ್ಮೀ ನಾರಾಯಣ, ಜಂಟಿ ಕಾರ್ಯದರ್ಶಿ ಊರುಕರೆ ಜಿ. ದಯಾನಂದ್ ಮತ್ತಿತರರು ಉಪಸ್ಥಿತರಿದ್ದರು.
