Bhima Koregaon victory is the history of sacrifice and sacrifice: Kalakappa Kambali,

ವರದಿ : ಪಂಚಯ್ಯ ಹಿರೇಮಠ ಕೊಪ್ಪಳ.
ಕುಕನೂರು : ಹಿರಿಯರ ತ್ಯಾಗ, ಬಲಿದಾನ, ಶೌರ್ಯದ ಇತಿಹಾಸವೇ ಭೀಮಾ ಕೋರೆಗಾಂವ್ ವಿಜಯೋತ್ಸವ ಎಂದು ತಾಲೂಕ ಪಂಚಾಯತಿ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಸ್ಮರಿಸಿದರು.
ಅವರು ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಏರ್ಪಡಿಸಿದ್ದ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸ್ವಾತಂತ್ರ್ಯ, ಸಮಾನತೆ, ಸಹೋದರತೆ, ಸ್ವಾಭಿಮಾನಕ್ಕಾಗಿ ನಡೆದ ಯುದ್ಧ ಕೋರೆಗಾಂವ್ ವಿಜಯೋತ್ಸವ. ಮಹಾರಾಷ್ಟ್ರದ ಭೀಮ ನದಿಯ ದಡದಲ್ಲಿ 1818 ಜನವರಿ 01 ರಂದು 500 ಮಹಾರ್ ಸೈನಿಕರು 28 ಸಾವಿರ ಪೇಶ್ವೆಗಳ ನಡುವೆ ನಡೆದ ಕದನ ಜಗತ್ತಿನ ಸ್ವಾಭಿಮಾನ ಯುದ್ಧ. ಇಂತಹ ವೀರ ಸೈನಿಕರ ಸ್ಮರಣಾರ್ಥ ವಿಜಯೋತ್ಸವ ಆಚರಿಸಲಾಗುತ್ತಿದೆ ಎಂದರು.
ನಂತರ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಅರವಿಂದಗೌಡ ಪಾಟೀಲ್ ಮಾತನಾಡಿ, ಪೇಶ್ವೆಗಳ ಆಡಳಿತದಲ್ಲಿದ್ದ ಜಾತಿ, ಅಸ್ಪೃಶ್ಯತೆ, ಮೇಲುಕೀಳುಗಳ ವಿರುದ್ಧ ನಿಂತು ಮಾನವೀಯ ಮೌಲ್ಯಗಳನ್ನು ಪಡೆದುಕೊಳ್ಳಲು ಹಂಬಲಿಸುವ ಮಹಾರ್ ಸೈನಿಕರ ಧೈರ್ಯ, ಸಾಹಸ, ಕೆಚ್ಚೆದೆಯ ಹೋರಾಟವಾಗಿದೆ ಎಂದರು.
ಕೋರೆಗಾಂವ್ ಯುದ್ಧದಲ್ಲಿ 28 ಸಾವಿರ ಪೇಶ್ವೆ ಸೈನಿಕರನ್ನು ಸೋಲಿಸಿದ 500 ಮಹಾರ್ ಸೈನಿಕರ ಪೈಕಿ 22 ಮಂದಿ ಸೈನಿಕರು ಮರಣ ಹೊಂದುತ್ತಾರೆ. ಮಹಾರ್ ಸೈನಿಕರು ಪ್ರಥಮ ಗುಂಡು ಸಿಡಿಸಿದ ಸ್ಥಳದಲ್ಲೇ 65 ಅಡಿ ಎತ್ತರದ ಒಂದು ಶಿಲಾ ಸ್ಮಾರಕವನ್ನು 1821 ಮಾರ್ಚ್ 26 ರಂದು ಬ್ರಿಟಿಷ್ ಸರ್ಕಾರ ನಿರ್ಮಾಣ ಮಾಡಿದೆ ಹಾಗೂ ಆ ಸ್ಥಳದಲ್ಲಿ ಮಡಿದ 22 ಸೈನಿಕರ ಹೆಸರನ್ನು ಕೆತ್ತಿಸಲಾಗಿದೆ ಎಂದರು.
ನಂತರದಲ್ಲಿ ಕನಕಗಿರಿ ಮಾಜಿ ಶಾಸಕ ಬಸವರಾಜ ದಡೇಸೂಗುರು, ತಾಲೂಕ ಪಂಚಾಯತಿ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಹಾಗೂ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಅರವಿಂದಗೌಡ ಪಾಟೀಲ್ ಇವರನ್ನು ಸಮಾಜದ ವತಿಯಿಂದ ಸನ್ಮಾನಿಸಲಾಯಿತು.
ಈ ವೇಳೆ ವಿಜಯೋತ್ಸವ ಆಚರಣೆಯಲ್ಲಿ ಯುವಕರು ಡಿಜೆ ಸದ್ದಿಗೆ ಹೆಜ್ಜೆ ಹಾಕಿ ಸಂತಸ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ನಾಗಪ್ಪ ಕಲ್ಮನಿ, ಹನುಮಂತಪ್ಪ ಚಲವಾದಿ, ಯಲ್ಲಪ್ಪ ಕಲ್ಮನಿ, ರಾಮಣ್ಣ ಬಂಕದಮನಿ, ನಿಂಗಪ್ಪ ಗೊರ್ಲೆಕೊಪ್ಪ, ರಮೇಶ ಶಾಸ್ತ್ರೀ, ಫಕೀರಪ್ಪ ಸಾಲ್ಮನಿ, ಜುಂಜಪ್ಪ ಸಾಲ್ಮನಿ, ಈರಪ್ಪ ಕಾಳಿ, ಲಕ್ಷ್ಮಣ ಸಾಲ್ಮನಿ, ಉಮೇಶ ಚಲವಾದಿ, ಹನುಮಂತಪ್ಪ ಜಕ್ಲಿ, ನಿಂಗಪ್ಪ ಘಾಟಿ ಸೇರಿದಂತೆ ಪ್ರಗತಿಪರರಾದ ವಿರೇಶ ಸಬರದ, ಜಗದೀಶ ಜವಳಿ, ಪಂಚಯ್ಯ ಹಿರೇಮಠ ಹಾಗೂ ಅನೇಕ ಯುವಕರು ಸಮಾಜದವರು ಇತರರು ಇದ್ದರು.