A grand children's convocation ceremony at Hamalara Colony Anganwadi Center-3
ಹಮಾಲರ ಕಾಲೋನಿ ಅಂಗನವಾಡಿ ಕೇಂದ್ರ-3ರಲ್ಲಿ ಅದ್ದೂರಿಯ ಮಕ್ಕಳ ಘಟಿಕೋತ್ಸವ

ಕೊಪ್ಪಳ ಜುಲೈ 07 (ಕರ್ನಾಟಕ ವಾರ್ತೆ): ಕೊಪ್ಪಳ ನಗರದ ಹಮಾಲರ ಕಾಲೋನಿ ಅಂಗನವಾಡಿ ಕೇಂದ್ರ-3ರಲ್ಲಿ ಶಾಲಾ ಪೂರ್ವ ಶಿಕ್ಷಣವನ್ನು ಮುಗಿಸಿ ಪ್ರಾಥಮಿಕ ಶಾಲೆಗೆ ಪ್ರವೇಶಿಸಿದ ಮಕ್ಕಳಿಗೆ ಮಂಗಳವಾರ (ಜು. 7ರಂದು) ಅದ್ದೂರಿಯ ಬೀಳ್ಕೊಡುಗೆ ಮತ್ತು ಘಟಿಕೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಮಕ್ಕಳು ಅಂಗನವಾಡಿಯಲ್ಲಿ ಮೂರು ವರ್ಷಗಳ ಕಾಲ ಶಾಲಾ ಪೂರ್ವ ಶಿಕ್ಷಣವನ್ನು ಕಲಿತ ವಿಷಯಗಳ ಕುರಿತು ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಮಕ್ಕಳಿಂದ ಗಣಿತ ಪೂರ್ವ ಚಟುವಟಿಕೆ ಕೇಳಿದಷ್ಟು ಕೊಡು, ಅಂಕಿಗಳು, ಬಣ್ಣಗಳು, ಆಕಾರಗಳು, ಪ್ರಾಣಿಗಳು 10 ಹಲವು ಚಟುವಟಿಕೆ ಹಾಗೂ ಪರಿಸರ ಕಾಳಜಿಯ ಕುರಿತು ಇನ್ನು ಅನೇಕ ವಿಷಯಗಳ ಬಗ್ಗೆ ಏರ್ಪಡಿಸಲಾಗಿದ್ದ, ವಸ್ತು ಪ್ರದರ್ಶನದಲ್ಲಿ ಒಂದೊಂದು ವಿಷಯದ ಕುರಿತು ಸ್ವತಃ ಮಕ್ಕಳೇ ಚಿತ್ರ ತೋರಿಸುತ್ತಾ ತನ್ನ ತೊದಲು ನುಡಿಯಲ್ಲಿ ವಿವರಣೆ ಕೊಡುತ್ತಿರುವದು ಅದ್ಭುತವಾಗಿತ್ತು. ಮಕ್ಕಳ ವಿವರಣೆ, ಪ್ರತಿಭೆಯನ್ನು ಕಂಡು ಹಾಜರಿದ್ದ ಅಧಿಕಾರಿಗಳು, ಪೋಷಕರು ತುಂಬಾ ಸಂತೋಷ ಪಟ್ಟರು. ಪ್ರಸ್ತುತ ವರ್ಷದಲ್ಲಿ ಅಂಗನವಾಡಿಗೆ ಬಂದಿರುವ ಮಕ್ಕಳಿಗೆ ಅಕ್ಷರಭ್ಯಾಸ ಅಧಿಕಾರಿಗಳಿಂದ ಮಾಡಿಸಲಾಯಿತು.
ನಂತರ ನಡೆದ ಘಟಿಕೋತ್ಸವ ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ರೋಹಿಣಿ ಕೊಟಗಾರ್ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಈ ರೀತಿಯಾಗಿ ಶಾಲಾ ಪೂರ್ವ ಶಿಕ್ಷಣ ಚಟುವಟಿಕೆಗಳು ನಿರಂತರವಾಗಿ, ಪರಿಣಾಮಕಾರಿಯಾಗಿ ನಡೆದಲ್ಲಿ ಅಂಗನವಾಡಿಯ ಕಡೆ ಪೋಷಕರು ಮಕ್ಕಳನ್ನು ದಾಖಲಿಸಲು ಮುಂದಾಗುತ್ತಾರೆ ಎಂದು ತಿಳಿಸಿದರು.
ಮಕ್ಕಳಿಗೆ ವಿಶ್ವವಿದ್ಯಾಲಯದಲ್ಲಿ ನಡೆಯುವ ಘಟಿಕೋತ್ಸವ ಮಾದರಿಯಲ್ಲಿ ಪದವಿ ಪ್ರಧಾನ ಮಾಡಿರುವದು ವಿನೂತನವಾಗಿತ್ತು. ಘಟಿಕೋತ್ಸವದ ಪ್ರಮಾಣ ಪತ್ರವನ್ನು ಸ್ವೀಕರಿಸಿದ ಮಕ್ಕಳನ್ನು ಕಂಡು ಪೋಷಕರು ತುಂಬಾ ಸಂತೋಷ ಪಟ್ಟರು.
ಪಾಲಕರು ನಮ್ಮ ಮಕ್ಕಳು ಚೆನ್ನಾಗಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ ಒಂದನೇ ತರಗತಿಯಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ ಎಂದು ಹೇಳಿಕೊಂಡರು ಇಂತಹ ಒಂದು ವಿನೂತನ ಕಾರ್ಯಕ್ರಮ ನಡೆಯಲು ಕಾರಣರಾದ ಅಂಗನವಾಡಿ ಕೇಂದ್ರದ ಕಾರ್ಯಕರ್ತರಾದ ಜಯಮ್ಮ, ಮಲ್ಲಮ್ಮ ಮತ್ತು ಶೈಲಜಾ ಅವರನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಅವರು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಅಂಗನವಾಡಿ ಮೇಲ್ವಿಚಾರಕರಾದ ಗಾಯತ್ರಿ ಹಾಗೂ ಉಷಾ, ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸಿದ್ದಪ್ಪ ಕುರಿ ಸೇರಿದಂತೆ ಶಾಲಾ ಮುಖ್ಯ ಶಿಕ್ಷಕರು, ವಲಯ ಮೇಲ್ವಿಚಾರಕಿಯರು, ಅಂಗನವಾಡಿ ಶಿಕ್ಷಕರು, ಸಹಾಯಕಿಯರು ಹಾಗೂ ಪೋಷಕರು ಉಪಸ್ಥಿತರಿದ್ದರು.


