
Criminal case against school that started enrolling students without accreditation: Warning from field education officers of the School Education Department

ಮಾನ್ಯತೆ ಇಲ್ಲದೆ ವಿದ್ಯಾರ್ಥಿಗಳ ದಾಖಲಾತಿ ಪ್ರಾರಂಭಿಸಿದ ಶಾಲೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ: ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಎಚ್ಚರಿಕೆ

ಸರ್ಕಾರಿ ಆದೇಶದ ವಿರುದ್ಧವಾಗಿ ಶಾಲಾ ದಾಖಲಾತಿ ಆರಂಭಿಸಿರುವ ಶಿಕ್ಷಣ ಸಂಸ್ಥೆ ವಿರುದ್ಧ ಕ್ರಿಮಿನಲ್ ಮೊಕದ್ದಮೆ: ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಎಚ್ಚರಿಕೆ
ಬೆಂಗಳೂರು; ಸರ್ಕಾರದ ಅನುಮತಿ ಪಡೆಯದೇ, ನ್ಯಾಯಾಲಯದ ಆದೇಶಕ್ಕೂ ಗೌರವ ನೀಡದೇ ಥಣಿಸಂದ್ರದ ಜಾಮೀಯ ಮೊಹಮ್ಮದೀಯ ಮನ್ಸೂರ ಶಿಕ್ಷಣ ಸಂಸ್ಥೆಯಲ್ಲಿ 2026 – 27 ನೇ ಸಾಲಿಗೆ ಆರಂಭಿಸಿರುವ 6 ರಿಂದ 8 ನೇ ತರಗತಿ ದಾಖಲಾತಿ ಪ್ರಕ್ರಿಯೆ ಸ್ಥಗಿತಗೊಳಿಸದಿದ್ದರೆ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಶಾಲಾ ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ.
ಈ ಕುರಿತು ಜಾಮೀಯ ಮೊಹಮ್ಮದೀಯ ಮನ್ಸೂರ ಶಿಕ್ಷಣ ಸಂಸ್ಥೆಗೆ ಶಾಲಾ ಶಿಕ್ಷಣ ಇಲಾಖೆ ಎರಡನೇ ಬಾರಿ ನೋಟೀಸ್ ಜಾರಿ ಮಾಡಿ ಎಚ್ಚರಿಸಿದೆ. ಪದೇ ಪದೇ ನಿಯಮ ಉಲ್ಲಂಘಿಸುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಕೂಡಲೇ ಶಾಲಾ ದಾಖಲಾತಿ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದೆ.
ಆಡಳಿತ ಮಂಡಳಿ ವಿರುದ್ಧ ಅಬ್ದುಲ್ ರಹೀಮ್ ಎಂಬುವರು ಶಿಕ್ಷಣ ಇಲಾಖೆಗೆ ದೂರು ನೀಡಿದ್ದರು. ಅದರಂತೆ ಕೆ.ಆರ್. ಪುರಂನ ಕ್ಷೇತ್ರ ಶಿಕ್ಷಣಾಧಿಕಾರಿಗಳು ನೋಟೀಸ್ ನೀಡಿದ್ದಾರೆ.

ಮುಂಬಯಿ ಮಾಲೀಕತ್ವದ ದಿ ಅಲ್ ಜಾಮಿಯ ಮೊಹಮ್ಮದಿಯ ಎಜುಕೇಷನ್ ಸೊಸೈಟಿ ರಾಜ್ಯ ಪಠ್ಯಕ್ರಮ ಎಂದು ನಮೂದಿಸಿ 6 ರಿಂದ 08 ನೇ ತರಗತಿಗೆ ದಾಖಲಾತಿ ಪ್ರವೇಶ ಎಂದು ಜಾಹಿರಾತು ನೀಡಿರುವುದು ನಿಯಮಬಾಹಿರವಾಗಿದೆ. ರಾಜ್ಯ ಪಠ್ಯಕ್ರಮದಲ್ಲಿ ಶಾಲೆ ನಡೆಸಲು ಶಿಕ್ಷಣ ಕಾಯ್ದೆ 30, 31 ರಂತೆ ನೋಂದಣಿ ಮತ್ತು ನಿಯಮ 36 ರಂತೆ ಮಾನ್ಯತೆ ಪಡೆದು ಶಾಲೆ ನಡೆಸಲು ಅವಕಾಶವಿದೆ. ಆದರೆ ಜಾಮಿಯ ಮಹಮ್ಮದಿಯ ಮನ್ಸೂರ ಹೆಸರಿನಲ್ಲಿ ಇಲಾಖೆಯಿಂದ ಶಿಕ್ಷಣ ಕಾಯ್ದೆ ನಿಯಮಾನುಸಾರ ಅನುಮತಿ ಪಡೆಯದೇ ಜೂನ್ ನಿಂದ ದಾರ್ಮಿಕ ಶಿಕ್ಷಣ ಮತ್ತು ರಾಜ್ಯ ಪಠ್ಯಕ್ರಮ ಶಿಕ್ಷಣ ಎಂದು ಅನಧಿಕೃತವಾಗಿ ದಾಖಲಾತಿ ಪ್ರಕ್ರಿಯೆ ಆರಂಭಿಸಿರುವುದು ಕಂಡು ಬಂದಿದೆ. ಕೂಡಲೇ ಜಾಹಿರಾತು ರದ್ದುಪಡಿಸಬೇಕು. ಇಲ್ಲವಾದಲಲ್ಲಿ ಇದು ಅನಧಿಕೃತ ಶಾಲೆಯೆಂದು ಆಡಳಿತ ಮಂಡಳಿ ಮತ್ತು ಶಾಲಾ ಆಡಳಿತಾತ್ಮಕ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಕ್ರಿಮಿನಲ್ ಮೊಕದ್ದಮೆ ಹೂಡಲು ಕ್ರಮವಹಿಸಲಾಗುವುದು ಎಂದು ನೋಟೀಸ್ ನಲ್ಲಿ ತಿಳಿಸಿದೆ.
ಆಡಳಿತ ಮಂಡಳಿಯವರು ಹೈಕೋರ್ಟ್ ಆದೇಶಕ್ಕೆ ಗೌರವ ನೀಡುತ್ತಿಲ್ಲ. ಹೀಗಾಗಿ ಮದರಸಾವನ್ನು ಮುಚ್ಚಿಸಿ ಮುಗ್ಧ ಮಕ್ಕಳ ಭವಿಷ್ಯವನ್ನು ಕಾಪಾಡಬೇಕು ಎಂದು ಅಬ್ದುಲ್ ರಹೀಮ್ ದೂರಿನಲ್ಲಿ ಮನವಿ ಮಾಡಿದ್ದರು.
