I am very fortunate

ಯಾವತ್ತು ಬಸವಾದಿ ಶರಣರ ಚಿಂತನೆಗಳ ಕುರಿತು ಹೇಳಲು, ಬರೆಯಲು ,ಸಾಧ್ಯವಾದಷ್ಟು ಈ ಕಡೆ ಮುಖ ಮಾಡಲು ಶುರು ಮಾಡಿದೇನೋ ಅಂದಿನಿಂದ ಇಂದಿನವರೆಗೆ ತುಂಬಾ ಸಂತುಷ್ಟನಾಗಿದ್ದೇನೆ. ನನ್ನ ರಕ್ತ ಸಂಬಂಧಕ್ಕಿಂತ ವಿಚಾರ ಸಂಬಂಧಿಗಳು ತೀರಾ ಹತ್ತಿರವಾಗಿದ್ದಾರೆ. ನನಗೆ ಏನಾದರು ಆದರೆ ಅವರು ತಮಗಾದ ನೋವೆಂದು ಭಾವಿಸುತ್ತಾರೆ. ತುಂಬಾ ಗೌರವಯುತವಾಗಿ ನನ್ನೊಂದಿಗೆ ವರ್ತಿಸುತ್ತಾರೆ.
ನಾನೇನು ಬಹು ದೊಡ್ಡ ಮೇದಾವಿ ಅಲ್ಲ. ಪಂಡಿತನಲ್ಲ. ಆದರೂ ಅವರು ಪ್ರೀತಿಯ ಮಹಾಪೂರವನ್ನು ಹರಿಸುತ್ತಾರೆ. ಅಪ್ಪ ಬಸವಣ್ಣನವರು ಮಾವಿನ ಕಾಯಿಯೊಳಗೊಂದು ಎಕ್ಕೆಯ ಕಾಯಿ, ನಾನಯ್ಯ, ಅಡ್ಡ ದೊಡ್ಡ ನಾನಲ್ಲವಯ್ಯಾ, ಎನಗಿಂತ ಕಿರಿಯರಿಲ್ಲ, ಶಿವ ಶರಣರಿಗಿಂತ ಹಿರಿಯರಿಲ್ಲ ಎಂದು ಹೇಳಿದ ಮೇಲೆ ನಾನೇನು ಸುಡುಗಾಡು ಅಲ್ಲ. ಈ ಪ್ರಜ್ಞೆ ನನ್ನೊಳಗೆ ಸದಾ ಇರುತ್ತದೆ. ಎಂದು ನನ್ನೊಳಗೆ ಅಹಂ ಬರುತ್ತದೆ. ಆಗ ಬಸವ ಪ್ರಣೀತ ವಿಶ್ವಾರಾಧ್ಯ ಇರುವುದಿಲ್ಲ.
ಜನ ಸಾಮಾನ್ಯ ಲಿಂಗಾಯತರಿಗೆ ,ಬಸವ ಪ್ರಣೀತ ಲಿಂಗಾಯತ ಧರ್ಮದ ತಿರುಳನ್ನು ಅರಿಯುವ ಕುತೂಹಲ ಇದೆ. ಆದರೆ ಅದನ್ನು ತಿಳಿಸಬೇಕಾದ ಮಠೀಯ ವ್ಯವಸ್ಥೆಯ ಮಠಾಧೀಶ ಉಂಡುಂಡು ಮಲಗಿದ್ದಾರೆ. ಅಡ್ಡ ಉದ್ದ ಪಲ್ಲಕ್ಕಿಯ ಮೆರವಣಿಗೆಯಲ್ಲಿ ಕಳೆದು ಹೋಗಿದ್ದಾರೆ. ಗುರು ವೈಭವಕ್ಕೆ ಸಿಕ್ಕಾಗಲೆ ಶಿಷ್ಯಂಗೆ ನರಕಪ್ರಾಪ್ತಿ ಎಂಬಂತೆ ಭಕ್ತ ಅಜ್ಞಾನದ ಕೂಪದಲ್ಲಿ ಸಿಲುಕಿದ್ದಾನೆ.
ನಾನು ಹೋದಲೆಲ್ಲ ಬಸವಾದಿ ಶರಣರ ಚಿಂತನೆ ಕುರಿತು ಸ್ಪಷ್ಟವಾಗಿ ಹೇಳಿದಾಗ ಜನ ಮುಕುರುತ್ತಾರೆ.ಪ್ರೀತಿಯ ಹೊನ್ನ ಮಳೆ ಸುರಿಸುತ್ತಾರೆ. ಇದು ನಾನು ಹೋದ ಕಡೆಯಲೆಲ್ಲ ಸಾಮಾನ್ಯ. ನಿನ್ನೆಯ ದಿನ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಸಿದ್ಧಯ್ಯನ ಕೋಟೆ ಕಾರ್ಯಕ್ರಮಕ್ಕೆ ಹೋದಾಗಲೂ ಅದೇ ಆಯ್ತು . ೮೫ ವಯಸ್ಸಿನ ಅಜ್ಜಿ ನನ್ನ ತಬ್ಬಿಕೊಂಡು ಪ್ರೀತಿಯ ಮಳೆಗರೆದಳು. ನಾನಾಡಿದ ಬಸವ ಪ್ರಣೀತ ಮಾತುಗಳು ಆ ಅಜ್ಜಿಯನ್ನು ಅಷ್ಟೊಂದು ಗಾಢವಾಗಿ ಪ್ರಭಾವಿಸಿದ್ದವು.
ಈ ಸಾರ್ಥಕ ಕ್ಷಣಗಳು ಕಂಡು ಮನಸ್ಸು ಹರ್ಷಿಸಿತು.
೦ ವಿಶ್ವಾರಾಧ್ಯ ಸತ್ಯಂಪೇಟೆ