Breaking News

ಅಸಂಘಟಿತರಾದ ಕಾರಣ ಅವರು ಬೆಳೆದ ಬೆಳೆಗೆ ಯೋಗ್ಯ ಧಾರಣೆ ದೊರಕುತ್ತಿಲ್ಲ- ಸಣ್ಣ ಕೈಗಾರಿಕಾ ಸಚಿವ ಶರಣಬಸ್ಸಪ್ಪಗೌಡ ದರ್ಶನಾಪುರ

Due to being unorganized, they are not getting proper storage for the crops grown – Small Industries Minister Sharanbassappa Gowda Darshanapura

ಶಹಾಪುರ : ೨೬ : ದೇಶದಲ್ಲಿ ರೈತರ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿದೆ. ಅವರ ಜೀವನ ಕಷ್ಟಗಳ ಸರಮಾಲೆಯನ್ನೆ ಎದುರಿಸುತ್ತಿದೆ. ರೈತರೆಲ್ಲರು ಅಸಂಘಟಿತರಾದ ಕಾರಣ ಅವರು ಬೆಳೆದ ಬೆಳೆಗೆ ಯೋಗ್ಯ ಧಾರಣೆ ದೊರಕುತ್ತಿಲ್ಲ ಎಂದು ಸಣ್ಣ ಕೈಗಾರಿಕಾ ಸಚಿವ ಶರಣಬಸ್ಸಪ್ಪಗೌಡ ದರ್ಶನಾಪುರ ನಗರದ ಬಸವಮಾರ್ಗ ಪ್ರತಿಷ್ಠಾನ ಮತ್ತು ಜಾಗತಿಕ ಲಿಂಗಾಯತ ಮಹಾಸಭೆ ಏರ್ಪಡಿಸಿದ್ದ ತಿಂಗಳ ಬಸವ ಬೆಳಕು -೧೧೧ ರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಂದುವರೆದು ಮಾತನಾಡಿದ ಅವರು ಸರಕಾರ ನಡೆಸುವವರಿಗೆ ಕೈಗಾರಿಕೋದ್ಯಮಿಗಳು ಚುನಾವಣೆಯಲ್ಲಿ ಫಂಡಿAಗ್ ಮಾಡುತ್ತಾರೆ. ಸಹಜವಾಗಿ ಚುನಾವಣೆಯಲ್ಲಿ ಗೆದ್ದು ಬಂದ ಜನ ಪ್ರತಿನಿಧಿ ಉದ್ಯಮಿಗಳ ಪರವಾದ ಧೋರಣೆ ಉಳ್ಳವನಾಗುತ್ತಾನೆ. ಸಹಜವಾಗಿ ಆಗ ರೈತನಿಗೆ ಅನ್ಯಾಯವಾಗುತ್ತದೆ. ಎಲ್ಲೋ ಕೆಲವು ಕಡೆ ರೈತರ ಪ್ರತಿಭಟನೆ ನಡೆದಾಗ ಮಾತ್ರ ಸರಕಾರಗಳು ಆತನ ಕೊಂಕಳ ಖುಷಿ ಪಡಿಸುವ ಕೆಲಸ ಮಾಡುತ್ತವೆ ವಿನಃ ರೈತರ ಸಮಗ್ರ ಅಭಿವೃದ್ಧಿಗೆ ಯೋಜನೆಯನ್ನು ಸರಕಾರಗಳು ರೂಪಿಸಿಲ್ಲ ಎಂದು ಅಸಮಧಾನ ವ್ಯಕ್ತ ಪಡಿಸಿದರು.

ರೈತರ ಬನ್ನ ಬವಣೆಗಳ ಕುರಿತು ಪರಿಣಾಮಕಾರಿಯಾದ ಚರ್ಚೆಗಳನ್ನು ಏರ್ಪಡಿಸಬಹುದಾಗಿದ್ದ ದೃಶ್ಯ ಮಾಧ್ಯಮಗಳು ತಮ್ಮ ಜವಾಬ್ದಾರಿಯನ್ನು ಮರೆತಿವೆ. ಜನಪರವಾದ ಧೋರಣೆಗಳನ್ನು ದೃಶ್ಯ ಮಾಧ್ಯಮಗಳಲ್ಲಿ ಸಾಧ್ಯವಿಲ್ಲವೇನೋ ಎಂಬ ಅನುಮಾನ ಮೂಡುವಂತೆ ಮಾಡಿವೆ. ಸಮಾಜದಲ್ಲಿ ಜನಪರವಾದ ಕಾಳಜಿಗಳು ಕ್ಷೀಣಗೊಂಡಿವೆ. ರೈತರ ಪರವಾಗಿ ಇದೀಗ ಯಾರೂ ನಿಲ್ಲುತ್ತಿಲ್ಲ.ಆದ್ದರಿಂದ ರೈತರಿಗೆ ಹೆಣ್ಣು ಕೊಡಲು ಸಮಾಜ ಹಿಂದು ಮುಂದು ನೋಡುವಂಥ ಸ್ಥಿತಿ ನಿರ್ಮಾಣವಾಗಿರುವುದು ವಿಷಾದನೀಯ ಸಂಗತಿ ಎಂದವರು ತಮ್ಮ ಖೇದವನ್ನು ವ್ಯಕ್ತ ಪಡಿಸಿದರು.

ಮತದಾರರು ಸಹ ತಮ್ಮ ಊರಿಗೆ ಬೇಕಾದ ರಸ್ತೆ, ನೀರು, ಚರಂಡಿ ವ್ಯವಸ್ಥೆ, ಶಾಲೆಯ ಕಟ್ಟಡ, ಬೀದಿಯ ದೀಪಗಳ ಕುರಿತು ಕೇಳುತ್ತಿಲ್ಲ. ಬದಲಾಗಿ ತಮ್ಮ ಊರಿಗೆ ಮಸೀದಿ ಮಂದಿರ ಚರ್ಚುಗಳ ಕಟ್ಟಡಗಳ ಕುರಿತು ಕೇಳುತ್ತಿದ್ದಾರೆ. ಅನಿವಾರ್ಯವಾಗಿ ರಾಜಕಾರಣ ಗಳೂ ಸಹ ಪಕ್ಷಭೇದವಿಲ್ಲದ ಜನರ ಆಸೆಗಳನ್ನು ಪೂರೈಸಿ ಗೆದ್ದು ಬರುತ್ತಿದ್ದಾರೆ. ನೈತಿಕತೆ ಈಗ ಯಾರಲ್ಲೂ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಎಲ್ಲರೂ ಬಸವಾದಿ ಶರಣರ ಆಶಯಗಳನ್ನು ಹೇಳುವವರೆ ಆಗಿದ್ದೇವೆ. ಆದರೆ ಅವರ ಮೌಲ್ಯಗಳನ್ನು ಪ್ರತಿನಿಧಿಸುವವರು ಯಾರು ? ಎಂದು ನಮ್ಮಷ್ಟಕ್ಕೆ ನಾವೆ ಆತ್ಮಾವಲೋಕ ಮಾಡಿಕೊಳ್ಳಲು ಬಸವಮಾರ್ಗ ಪ್ರತಿಷ್ಠಾನ ಸತತ ಪ್ರಯತ್ನಿಸುತಿದೆ ಎಂದವರು ಬಣ್ಣಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರಾದ ಬಡಗಲಪುರ ನಾಗೇಂದ್ರಪ್ಪ ಮಾತನಾಡಿ, ಕೃಷಿಕನ ಸಂಸ್ಕೃತಿ ಮತ್ತು ಬಸವಾದಿ ಶರಣರು ಹೇಳಿದ ಚಿಂತನೆಗಳು ಬೇರೆ ಬೇರೆ ಇಲ್ಲ.ದುಡಿಯುವ ಜನವರ್ಗವನ್ನು ಬಸವಣ್ಣನವರು ಗೌರವಿಸಿದರು. ಶ್ರಮಿಕರ ಪರವಾಗಿ ಶರಣರ ಹೋರಾಟವಾಗಿತ್ತು. ಅವರು ಯಾವತ್ತೂ ಗುಡಿಯ ಸಂಸ್ಕೃತಿಯನ್ನು ರೂಪಿಸಲಿಲ್ಲ. ದೇಹವನ್ನು ದೇವಾಲಯ ಮಾಡಿದರು. ನಾವಿಂದು ಸನಾತನ ಪರಂಪರೆಯೆಂಬ ಪೊಳ್ಳು ಭ್ರಮೆಗಳ ಸುತ್ತ ಮುತ್ತ ಓಡಾಡುತ್ತಿದ್ದೇವೆ.ಸುಳ್ಳುಗಳ ಜಾತ್ರೆಯಲ್ಲಿ ನಮ್ಮನ್ನು ನಾವು ಕಳೆದುಕೊಳ್ಳುತ್ತಿದ್ದೇವೆ ಎಂದು ವಿಷಾದ ವ್ಯಕ್ತ ಪಡಿಸಿದರು.

ಉಳುವಾಯೋಗಿಯ ನೋಡಲ್ಲಿ ಎಂಬ ವಿಷಯ ಕುರಿತು ಕರ್ನಾಟಕ ರಾಜ್ಯ ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನ ಪಾಟೀಲ ಮಾತನಾಡಿ, ರೈತರ ಬಗ್ಗೆ ಸರಕಾರದ ಅನುಕಂಪ ಬೇಕಾಗಿಲ್ಲ. ರೈತ ಬೆಳೆದ ದವಸ ಧಾನ್ಯಗಳಿಗೆ ಸಮರ್ಪಕ ಬೆಲೆ ನಿಗದಿ ಮಾಡಿದರೆ ಸಾಕು ನಮ್ಮ ಏನೆಲ್ಲ ಕಷ್ಟವನ್ನು ನಾವೇ ನಿವಾರಿಸಿಕೊಳ್ಳುತ್ತೇವೆ. ಸ್ವಾಮಿನಾಥನ ವರದಿ ಜಾರಿಗೆ ಬರಲಿ, ಇಲ್ಲದಿದ್ದರೆ ರೈತರ ಮನೆಗೆ ಹೆಣ್ಣು ಸಹ ಕೊಡಲು ಇಂದು ಸಮಾಜ ಹಿಂದು ಮುಂದು ನೋಡುತ್ತಿದೆ. ಬಹುಶಃ ಇದು ಹೀಗೆ ಮುಂದುವರೆದರೆ ಉಣ್ಣಲಿಕ್ಕೂ ಆಹಾರಧಾನ್ಯದ ಕೊರತೆ ಉಂಟಾಗಲಿದೆ ಎಂದು ಎಚ್ಚರಿಸಿದರು.

ಪ್ರತಿಷ್ಠಾನದ ವಿಶ್ವಾರಾಧ್ಯ ಸತ್ಯಂಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ರಮೇಶ ಪೂರ್ಣಚ್ಚ, ಚಾಮರಸ ಮಾಲಿ ಪಾಟೀಲ, ಚೆನ್ನಪ್ಪ ಆನೇಗುಂದಿ, ಚಂದ್ರಶೇಖರ ಮಾಗನೂರ ಮಾತನಾಡಿದರು. ವೇದಿಕೆಯ ಮೇಲೆ ಮಲ್ಲಿಕಾರ್ಜುನ ಸತ್ಯಂಪೇಟೆ, ಶರಣು ಮಂದರವಾಡ, ಶರಣು ಸುಬೇದಾರ ಮೊದಲಾದವರಿದ್ದರು. ಫಜಲುದ್ದೀನ ರಹಮಾನಖಾಜಿ ವಚನ ಪ್ರಾರ್ಥನೆ ಮಾಡಿದರು. ಅಮೋಘ ಸತ್ಯಂಪೇಟೆ ಸ್ವಾಗತಿಸಿದರು. ಶಿವಣ್ಣ ಇಜೇರಿ ಕಾರ್ಯಕ್ರಮ ನಿರೂಪಿಸಿದರು.

ಕೊನೆಯಲ್ಲಿ ಚೇತನ ಮಾಲಿ ಪಾಟೀಲ ವಂದನೆಗಳನ್ನು ಸಲ್ಲಿಸಿದರು.
ಈ ಸಭೆಯಲ್ಲಿ ಸಿದ್ರಾಮಯ್ಯ ರಾಮಗಿರಿ ಮಠ, ಗುರುಬಸವಯ್ಯ ಗದ್ದುಗೆ, ಚಂದ್ರು ಹವಾಲ್ದಾರ, ಶಿವಯೋಗಪ್ಪ ಮುಡಬೂಳ, ಶಿವಲಿಂಗಪ್ಪ ಸಾಹು, ಉಮೇಶ ಗೋಗಿ, ಅಡಿವೆಪ್ಪ ಜಾಕಾ, ಶಂಭುಲಿAಗ ದೇಸಾಯಿ, ಸುರೇಶ ಅರುಣ , ರಾಘವೇಂದ್ರ ಹಾರಣಗೇರಾ, ಬಸವರಾಜ ಹೇರುಂಡಿ, ಸಿದ್ದಲಿಂಗಪ್ಪ ಆನೇಗುಂದಿ, ಮೊದಲಾದವರು ಭಾಗವಹಿಸಿದ್ದರು.

About Mallikarjun

Check Also

ಖೊಟ್ಟಿ ದಾಖಲೆ ಸೃಷ್ಟಿಸಿ, ಬಿಪಿಎಲ್ ಪಡಿತರ ಚೀಟಿ ಪಡೆದಿದ್ದ ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲು, ದಂಡವಸೂಲಿ.

ಕಾರಟಗಿ: ತಾಲೂಕಿನ ಸಿದ್ಧಾಪುರ ಗ್ರಾಮದ ಬಿಜೆಪಿ ಮುಖಂಡ ಆಗಿರುವ ಮಹಿಬೂಬ್ ಸಾಬ್ ಮುಲ್ಲಾ (ಎಂ.ಡಿ.ಎಸ್) ತಂದೆ ಮೋದಿನ್ ಸಾಬ್ ಈತನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.