Breaking News

ದೇವಸ್ಥಾನಕ್ಕೆ ನೀಡುವ ಕಾಣಿಕೆ ಹರಕೆಗಳಲ್ಲಿಯೇ ನಮ್ಮ ಭ್ರಷ್ಟ ಮನಸ್ಸು ಇದೆ-ಗೋವಿಂದರಾಜ ಬಾರಿಕೇರ

Our corrupt mind is in the offerings given to the temple – Govindaraja Barikera

ಶಹಾಪುರ : ೨೬ : ನಾಗರಿಕ ಬಟ್ಟೆ ತೊಟ್ಟು ಒಳ್ಳೆಯವರಂತೆ ವರ್ತಿಸುತ್ತೇವೆ ಆದರೆ ನಾವು ಯಾರೂ ಬಸವಣ್ಣನವರಂತೆ ಅಂತರಂಗದ ಕದವನ್ನು ತೆರೆದು ನಮ್ಮನ್ನು ನಾವು ಅವಲೋಕಿಸಿಕೊಂಡಿಲ್ಲ. ಅಂತರಂಗದ ಒಳಗಡೆ ರಣರಂಗ, ಹೊರಗಡೆ ಮಾತ್ರ ಶೃಂಗಾರಯುತವಾಗಿ ಸಭ್ಯತೆಯ ಮುಖವಾಡ ಹಾಕಿ ಕುಳಿತ್ತಿದ್ದೇವೆ. ದೇವಸ್ಥಾನಕ್ಕೆ ನೀಡುವ ಕಾಣಿಕೆ – ಹರಕೆಗಳಲ್ಲಿಯೇ ನಮ್ಮ ಭ್ರಷ್ಟ ಮನಸ್ಸು ಇದೆ ಎಂದು ಬಸವವಾದಿ ಚಿಂತಕ ಗೋವಿಂದರಾಜ ಬಾರಿಕೇರ ಮಾರ್ಮಿಕವಾಗಿ ನುಡಿದರು.

ನಗರದ ಬಸವಮಾರ್ಗ ಪ್ರತಿಷ್ಠಾನ ಮತ್ತು ಜಾಗತಿಕ ಲಿಂಗಾಯತ ಮಹಾಸಭೆ ಏರ್ಪಡಿಸಿದ್ದ ತಿಂಗಳ ಬಸವ ಬೆಳಕು- ೧೦೯ ರ ಕಾರ್ಯಕ್ರಮದಲ್ಲಿ ಬಸವ ತತ್ವ ಒಂದು ಅಂತರ್ಯಾತ್ರೆ ಎಂಬ ವಿಷಯ ಕುರಿತು ಮಾತನಾಡುತ್ತ ಮುಂದುವರೆದು, ದೇವರಿಗಿಂತ ಭಿನ್ನವಾದುದು ಸತ್ಯ. ಸತ್ಯದ ಕೂರಲಗನ್ನು ಇಟ್ಟುಕೊಂಡೆ ಶರಣರು ಬದುಕಿದರು. ಶರಣರ ಅಂತರಂಗ ಬಹಿರಂಗ ಬೇರೆ ಬೇರೆಯಾಗಿರಲಿಲ್ಲ. ಎರಡೂ ಒಂದೆ ಆಗಿದ್ದವು. ಜ್ಞಾನವೇ ಶ್ರೇಷ್ಠ ಎಂಬ ಬಾಲಿಷವಾದ ಮಾತುಗಳನ್ನು ತಿರಸ್ಕರಿಸಿ ಅಂತರಂಗದ ಧ್ವನಿಗೆ ಶರಣರು ಜೀವ ನೀಡಿದರು. ಸಂಗ್ರಹಗೊಂಡ ಜ್ಞಾನ ಕೆಡುತ್ತದೆ. ಯಾವ ಶ್ಲೋಕಗಳು, ವೇದಗಳು, ಪುರಾಣಗಳು, ಆಗಮಗಳು ಎದೆಯ ದನಿಗೆ ಸಾಟಿಯಿಲ್ಲ. ಸ್ವಯಂ ಬೆಳೆಯುವ ಮರಕ್ಕೆ ಬಸವಣ್ಣನವರು ಅವಕಾಶ ನೀಡಿದರು.

ಭ್ರಮಿತ ಲೋಕದ ಪಳಿಯುಳಿಕೆಗಳಾದ ಗುಡಿ ಚರ್ಚು ಮಸೀದಿ ಇತ್ಯಾದಿಗಳನ್ನು ಕಟ್ಟಿ ಸತ್ಯವನ್ನು ಹೂತು ಹಾಕಿದವರ ನಡುವೆ ಬಸವಣ್ಣ ಎನ್ನ ಕಾಲೆ ಕಂಬ ದೇಹವೆ ದೇಗುಲ ಎಂಬ ಹೊಸ ಮಾತುಗಳ ಮೂಲಕ ಜಡತ್ವದ ಸಂಕೇತವಾದ ಪೌರೋಹಿತ್ಯನ್ನು  ಕಿತ್ತಿ ಬಿಸಾಡಿ ದೇವರಲೋಕ- ಮರ್ತ್ಯಲೋಕ ಪಾತಾಳ ಲೋಕಕ್ಕೂ ಬಸವಣ್ಣ ಮಾರ್ಗವನ್ನು ಕಂಡು ಹಿಡಿದರು.ಲಿಂಗಾಂಗ ಅನುಸಂಧಾನದಲ್ಲಿ ನೀನೇ ಲಿಂಗವಾಗು ಎನ್ನುವ ಮೂಲಕ ಸಂಪ್ರದಾಯದ ಚೌಕಟ್ಟನ್ನು ದಾಟಿದ ಪ್ರಪಂಚದ ಏಕೈಕ ಪುರುಷ ಬಸವಣ್ಣನವರಾಗಿದ್ದರು ಎಂದು ಮಾರ್ಮಿಕವಾಗಿ ಬಣ್ಣಿಸಿದರು. 

ಅಂತರಂಗ ಬಹಿರಂಗ ನಮ್ಮಲ್ಲಿ ಎಂದಿಗೂ ಭಿನ್ನ ಭಿನ್ನವಾಗಿವೆ. ಮಂಡೆ ಬೋಳಾಗಿದೆ. ಮನ ಬೋಳಾಗಿಲ್ಲ. ಮೇಲ್ನೋಟಕ್ಕೆ ತೋರಿಸಿಕೊಳ್ಳುವುದೆ ಒಂದಾದರೆ ಅಂತರಂಗದಲ್ಲಿ ಇರುವುದೆ ಬೇರೆ. ಬಸವಣ್ಣ ಅಂತರಂಗ ಹಾಗೂ ಬಹಿರಂಗ ಶುದ್ಧಿಯನ್ನು ಇಟ್ಟುಕೊಂಡಿದ್ದರಿಂದಲೆ ಅವರ ವಚನ ಚಳುವಳಿ ಇಲ್ಲಿಯವರೆಗೂ ಜೀವಂತವಾಗಿ ಉಳಿಯಲು ಸಾಧ್ಯವಾಯಿತು ಎಂದು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಿಂಧನೂರಿನ ವೀರಭದ್ರಗೌಡ ಅಮರಾಪುರ ನುಡಿದರು.

ವೈದಿಕತ್ವದ ದಾಳಿಗೆ ಭಾರತೀಯ ಮನಸ್ಸುಗಳು ತತ್ತರಗೊಂಡಿವೆ. ವಚನ ಸಾಹಿತ್ಯ ಹಾಗೂ ಶರಣರ ಚಿಂತನೆಗಳ ಮೇಲೆ ಸತತ ಹಲ್ಲೆ ನಡೆದಿದೆ. ಪುರೋಹಿತರ ಕಪಿಮುಷ್ಠಿಯಲ್ಲಿ ಸಿಲುಕಿರುವ ಮನಸ್ಸುಗಳಿಗೆ ಸತ್ಯವನ್ನು ಎದುರಿಸುವ ಶಕ್ತಿ ಇಲ್ಲವಾಗಿದೆ. ಆದ್ದರಿಂದಲೆ ಗುಡಿ ಚರ್ಚು ಮಸೀದಿಗಳ ಬೆಳವಣ ಗೆ ದಾಖಲೆಯ ಮಟ್ಟ ಮುಟ್ಟುತ್ತಿದೆ. ದೇಹವೆ ದೇವಾಲಯ.ಶಿರವೆ ಹೊನ್ನ ಕಳಶ ಎಂದು ಬಸವಣ್ಣನವರ ತತ್ವ ಅರಿತಾಗ ಮಾತ್ರ ನಿರ್ಭಯವಾಗಿ ಬಾಳಲು ಸಾಧ್ಯವಾಗುತ್ತದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅತಿಥಿಗಳಾಗಿ ಮಲ್ಲಿನಾಥಗೌಡ ಮಾಲಿ ಪಾಟೀಲ, ಶರಣೆ ಲಕ್ಷಿö್ಮ ಮಲ್ಲಿನಾಥಗೌಡ ಸಭೆಯನ್ನು ಉದ್ಘಾಟಿಸಿದರು. ಲಕ್ಷö್ಮಣ ಲಾಳಸೇರಿ ಸ್ವಾಗತಿಸಿದರು. ಫಜಲುದ್ದೀನ ಖಾಜಿಸಾಬ ಕೆಂಭಾವಿ ವಚನ ಪ್ರಾರ್ಥನೆ ಮಾಡಿದರು.

ಸಮಾರಂಭದಲ್ಲಿ ಶಿವಯೋಗಪ್ಪ ಹವಾಲ್ದಾರ, ಸಿದ್ಧಲಿಂಗಪ್ಪ ಆನೇಗುಂದಿ, ಶರಣು ಬೊಮ್ಮನಳ್ಳಿ, ಶರಣು ಯಡ್ರಾಮಿ, ದೇವಿಂದ್ರಪ್ಪ ಬಡಿಗೇರ, ಸಿದ್ಧರಾಮ ಹೊನ್ಕಲ್, ಗುಂಡಪ್ಪ ತುಂಬಗಿ, ಬಸವರಾಜ ಮುಂಡಾಸ, ಪ್ರಕಾಶ ರಾಜೂರು, ಸಂಗಮ್ಮ ಹರನೂರ, ಭೀಮನಗೌಡ, ಚಂದ್ರು ಮುಡಬೂಳ, ತಿಪ್ಪಣ್ಣ ಜಮಾದಾರ, ಸಿದ್ದು ಕೆರವಟಗಿ, ವಿಶ್ವನಾಥ ಬಂಕಲದೊಡ್ಡಿ, ಕಾಮಣ್ಣ ವಿಭೂತಿಹಳ್ಳಿ, ಬಸವರಾಜ ಹುಣಸಗಿ, ಶರಣಪ್ಪ ಹುಣಸಗಿ, ಪ್ರಕಾಶ ರಾಜೂರು, ಚೇತನ ಮಾಲಿ ಪಾಟೀಲ ಮಳಗ, ಮಂಜಯ್ಯ ಹಿರೇಮಠ ಸತ್ಯಂಪೇಟೆ ಮುಂತಾದವರು ಭಾಗವಹಿಸಿದ್ದರು.

About Mallikarjun

Check Also

ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಿಬ್ಬಂದಿ ಕಿರುಕುಳ ತಪ್ಪಿಸಿ..!

12೦೦ ಗ್ರಾಹಕರಿಗೆ ಜೀವ ಭದ್ರತೆ ಒದಗಿಸಬೇಕೆಂದು ರಕ್ಷಣಾ ವೇದಿಕೆ ಮನವಿ: ಗಂಗಾವತಿ: 2018ನೇ ಸಾಲಿನಲ್ಲಿ lಗಂಗಾವತಿ ತಾಲೂಕು ಕರ್ನಾಟಕ ಗ್ರಾಮೀಣ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.