
ಕೊಪ್ಪಳ: ತರ್ಕಬದ್ಧಗೊಳಿಸುವಿಕೆ ಎಂಬ ಹೆಸರಿನಲ್ಲಿ ಸುಮಾರು 7,000 ಆಶಾ ಕಾರ್ಯಕರ್ತೆಯರನ್ನು ಕೈಬಿಡುವ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸಲು ಅಗ್ರಹಿಸಿ ಪ್ರತಿಭಟನೆ
Protest demanding immediate halt to the process of laying off around 7,000 ASHA workers in the name of rationalization.

.
ಕೊಪ್ಪಳ:ಈ ಬರುವ ಮಾರ್ಚ್ ಬಜೆಟ್ನಲ್ಲಿ ಆಶಾ ಕಾರ್ಯಕರ್ತೆಯರ ಗೌರವಧನವನ್ನು ಗಣನೀಯವಾಗಿ ಹೆಚ್ಚಿಸಬೇಕು, ಹಾಗೂ ತರ್ಕಬದ್ಧಗೊಳಿಸುವಿಕೆ ಎಂಬ ಹೆಸರಿನಲ್ಲಿ ಸುಮಾರು 7,000 ಆಶಾ ಕಾರ್ಯಕರ್ತೆಯರನ್ನು ಕೈಬಿಡುವ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸಬೇಕು
ಎಂದು ಆಗ್ರಹಿಸಿ ನಾಳೆ (ಫೆಬ್ರವರಿ 28) ಕೊಪ್ಪಳ ನಗರದಲ್ಲಿ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಶರಣು ಗಡ್ಡಿ ತಿಳಿಸಿದ್ದಾರೆ.
ಈ ಮೆರವಣಿಗೆ ಕೊಪ್ಪಳ ನಗರದ ಈಶ್ವರ್ ಪಾರ್ಕ್ನಿಂದ ಆರಂಭವಾಗಿ ಜಿಲ್ಲಾಧಿಕಾರಿಗಳ ಕಚೇರಿವರೆಗೆ ನಡೆಯಲಿದ್ದು, ಅಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಸಾವಿರಾರು ಆಶಾ ಕಾರ್ಯಕರ್ತೆಯರು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲ ಶಕ್ತಿಯಾಗಿದ್ದು, ಗರ್ಭಿಣಿ ಮಹಿಳೆಯರು, ನವಜಾತ ಶಿಶುಗಳು, ಲಸಿಕೆ ಅಭಿಯಾನ, ಸಾಂಕ್ರಾಮಿಕ ರೋಗ ನಿಯಂತ್ರಣ ಸೇರಿದಂತೆ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಆದರೆ ಅತ್ಯಲ್ಪ ಗೌರವಧನ, ಹೆಚ್ಚುತ್ತಿರುವ ಕೆಲಸದ ಒತ್ತಡ ಮತ್ತು ಉದ್ಯೋಗ ಭದ್ರತೆ ಇಲ್ಲದ ಪರಿಸ್ಥಿತಿ ಅವರ ಬದುಕನ್ನು ಸಂಕಷ್ಟಕ್ಕೆ ತಳ್ಳಿದೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿಗಳು ಹಿಂದೆ ನೀಡಿದ ಭರವಸೆಗಳನ್ನು ಇಂದಿಗೂ ಈಡೇರಿಸದಿರುವುದು ವಿಷಾದಕರ ಸಂಗತಿಯಾಗಿದೆ. ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂಬ ಆಗ್ರಹದೊಂದಿಗೆ ರಾಜ್ಯವ್ಯಾಪಿ ಪ್ರತಿಭಟನೆಗೆ ಕರೆ ನೀಡಲಾಗಿದ್ದು, ಅದರ ಭಾಗವಾಗಿ ಕೊಪ್ಪಳದಲ್ಲಿ ಈ ಮೆರವಣಿಗೆ ನಡೆಯಲಿದೆ ಎಂದು ಅವರು ತಿಳಿಸಿದರು.
ನಾಳೆಯ ಪ್ರತಿಭಟನೆಯಲ್ಲಿ ಆಶಾ ಕಾರ್ಯಕರ್ತೆಯರು, ಕಾರ್ಮಿಕ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದ್ದಾರೆ




