ಗಂಗಾವತಿ : ತಾಲೂಕಿನ ಬಸಾಪಟ್ಟಣ ಗ್ರಾ.ಪಂ. ಕಾರ್ಯಾಲಯದ ಮುಂದೆ ಲೋಕಸಭಾ ಚುನಾವಣೆ ಅಂಗವಾಗಿ ತಾಲೂಕು ಸ್ವೀಪ್ ಸಮಿತಿ ವತಿಯಿಂದ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮೀದೇವಿ ಅವರ ಅಧ್ಯಕ್ಷತೆಯಲ್ಲಿ ಮೇಣದ ಬತ್ತಿ ಬೆಳಗಿಸುವ ಮೂಲಕ ಶುಕ್ರವಾರ ರಾತ್ರಿ ಮತದಾನ ಜಾಗೃತಿ ಮೂಡಿಸಲಾಯಿತು.
ಗ್ರಾಮದ ಚುನಾವಣೆ ರಾಯಭಾರಿಗಳಾದ ತೃತಿಯ ಲಿಂಗಿಗಳಾದ ಶರಣಮ್ಮ ಹಾಗೂ ರಾಜಶೇಖರ ಅವರು ನನ್ನ ಮತ, ನನ್ನ ಹಕ್ಕು ಚುನಾವಣೆ ಘೋಷವಾಖ್ಯಕ್ಕೆ ಮೇಣದಬತ್ತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮೀದೇವಿ ಅವರು ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಶೇ.100 ರಷ್ಟು ಮತದಾನ ಮಾಡಬೇಕು. ಯಾರೂ ಕೂಡ ಯಾವುದೇ ಆಸೆ, ಆಮೀಷಕ್ಕೆ ಬಲಿಯಾಗಬಾರದು. ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಬೇಕು. 2024 ರ ಪ್ರಜಾಪ್ರಭುತ್ವ ಹಬ್ಬದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
ನಂತರ ಮತದಾನ ಮಹತ್ವ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಗ್ರಾ.ಪಂ. ಕಾರ್ಯಾಲಯದ ಮುಂದೆ ಬಿಡಿಸಲಾಗಿದ್ದ ವಿವಿಪ್ಯಾಟ್ ಚಿತ್ರದ ರಂಗೋಲಿ ಎಲ್ಲರ ಗಮನ ಸೆಳೆಯಿತು.
ಬಸಾಪಟ್ಟಣ ಗ್ರಾಪಂ ಪಿಡಿಓ ವಿದ್ಯಾವತಿ, ಕಾರ್ಯದರ್ಶಿಗಳಾದ ನಾಗೇಶ ಸಜ್ಜನ್, ಎಸ್ ಡಿಎ ಶ್ರೀನಿವಾಸ, ತಾಲೂಕು ಐಇಸಿ ಸಂಯೋಜಕರಾದ ಬಾಳಪ್ಪ ತಾಳಕೇರಿ, ಗ್ರಾ.ಪಂ. ಸಿಬ್ಬಂದಿಗಳು, ಎನ್ ಆರ್ ಎಲ್ ಎಂ ಎಂ.ಬಿ.ಕೆ., ಸ್ವಸಹಾಯ ಗುಂಪುಗಳ ಸದಸ್ಯರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.