Breaking News

ಸ್ವಾತಂತ್ರ್ಯ ಸಂಗ್ರಾಮದ ಮಹಾನ್ಚಿಂತನೆಗಳನ್ನು ಅಳವಡಿಸಿಕೊಂಡು ಹೊಸ ಮನುಷ್ಯರಾಗಿ”: ಸೌರವ್ ಘೋಷ್

Embrace the Great Thoughts of the Freedom Struggle and Become a New Man”: Saurav Ghosh

ಕೊಪ್ಪಳ: ಬಡತನ ಜಾತಿ, ಧರ್ಮ ಮುಂತಾದ ಹೆಸರಲ್ಲಿ ಧಮನಕ್ಕೊಳಗಾಗಿರುವ ಶೋಷಿತ ಜನಸಮುದಾಯದ ಕಣ್ಣೀರು ಒರೆಸಿ ಹಸಿವು,ಬಡತನ, ದಾರಿದ್ರ್ಯದಿಂದ ಅವರನ್ನು ವಿಮುಕ್ತರನ್ನಾಗಿಸಿ ಈ ದೇಶವನ್ನು ಒಂದು ಉನ್ನತ ಸಮಾಜವನ್ನಾಗಿ ಕಟ್ಟುವ ಭಗತ್ ಸಿಂಗ್, ನೇತಾಜಿ ಮುಂತಾದ ಕ್ರಾಂತಿಕಾರಿಗಳ ಕನಸನ್ನು ನನಸಾಗಿಸುವ ಸಂಕಲ್ಪ ನಮ್ಮದಾಗಬೇಕು ಮತ್ತು ಈ ಪ್ರಕ್ರಿಯೆಯಲ್ಲಿ ಉನ್ನತ ಸಂಸ್ಕೃತಿ ಮತ್ತು ಚಿಂತನೆಗಳನ್ನು ಮೈಗೂಡಿಸಿಕೊಂಡು ನೀವು ಹೊಸ ಮನುಷ್ಯರಾಗಬೇಕು.” ಎಂದು ಎಐಡಿಎಸ್ಓ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಗಳಾದ ಸೌರವ್ ಘೋಷ್ ಕರೆ ನೀಡಿದರು. ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ ವಿದ್ಯಾರ್ಥಿ ಸಮ್ಮೇಳನದ ಪ್ರತಿನಿಧಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ಮುಂದುವರೆದು, ಎಐಡಿಎಸ್ಓ ಹಾಗೂ ಕರ್ನಾಟಕದ ಜನತೆಯ ಅಭೂತಪೂರ್ವ ಹೋರಾಟದಿಂದಾಗಿ ರಾಜ್ಯ ಸರ್ಕಾರವು ಎನ್ಈಪಿ 2020ನ್ನು ಹಿಂಪಡೆದಿದೆ. ಈ ಮೂಲಕ ದೇಶದಲ್ಲೇ ಎನ್‌ಇಪಿ ವಿರುದ್ಧದ ಹೋರಾಟಕ್ಕೆ ಕರ್ನಾಟಕದ ವಿದ್ಯಾರ್ಥಿಗಳು ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಸಮ್ಮೇಳನದಿಂದ ತೆರಳಿದ ಮೇಲೆ ನಿಮ್ಮ ಶಾಲಾ-ಕಾಲೇಜು ಹಾಗೂ ಊರುಗಳಲ್ಲಿ ಹೋರಾಟಗಳನ್ನು ಕಟ್ಟುವ ಮೂಲಕ ಎಐಡಿಎಸ್ಓನ್ನು ಬಲಪಡಿಸಬೇಕೆಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.

ಸಮ್ಮೇಳನದ ಸಮಾರೋಪದಲ್ಲಿ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಎಸ್ ಯು ಸಿ ಐ ಕಮ್ಯೂನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ಕಾಮ್ರೆಡ್ ಕೆ ಉಮಾ, ” ಎಐಡಿಎಸ್ಓ ಇಂದು ಬಹಳ ಎತ್ತರಕ್ಕೆ ಬೆಳೆದಿದೆ. ಸಂಘಟನೆಯು ಹೊಂದಿರುವ ಸಿದ್ಧಾಂತ ಇದರ ಮೂಲ ಸತ್ವವಾದರೆ ಸಾವಿರಾರು ವಿದ್ಯಾರ್ಥಿಗಳ ಭಾಗವಹಿಸುವಿಕೆ ಇದರಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಯುಗದ ಓರ್ವ ಮಹಾನ್ ಮಾರ್ಕ್ಸ್ ವಾದಿ ಚಿಂತಕರು ಹಾಗೂ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿಗಳಾದ ಕಾಮ್ರೇಡ್ ಶಿವದಾಸ್ ಘೋಷರು ಹೇಳಿರುವಂತೆ ಎಲ್ಲಾ ಕಾಲಕ್ಕೂ ಸಮಾಜದ ಬದಲಾವಣೆಗೆ ಮುಂಚೂಣಿಯಲ್ಲಿ ನಿಲ್ಲುವುದು ವಿದ್ಯಾರ್ಥಿಗಳು ಮತ್ತು ಯುವಜನರು. ಈ ಹಿನ್ನೆಲೆಯಲ್ಲಿ ಶಿಕ್ಷಣವನ್ನು ಕೆಲವರ ಕಪಿಮುಷ್ಠಿಯಿಂದ ಬಿಡುಗಡೆಗೊಳಿಸಿ ಶತಮಾನಗಳಿಂದ ತುಳಿತಕ್ಕೊಳಗಾಗಿರುವ ಶೋಷಿತರ ಗುಡಿಸಲುಗಳಿಗೆ ಅದನ್ನು ತಲುಪಿಸುವ ಐತಿಹಾಸಿಕ ಪಾತ್ರವನ್ನು ನೀವು ನಿಭಾಯಿಸಬೇಕಿದೆ. ಏಕೆಂದರೆ ಶಿಕ್ಷಣವು ಯಾರೋ ಕೆಲವರ ಸ್ವತ್ತಲ್ಲ. ಬದಲಿಗೆ, ಹಲವಾರು ಮಹಾನ್ ವ್ಯಕ್ತಿಗಳ ಅಪಾರ ತ್ಯಾಗ ಹಾಗೂ ಸಾವಿರಾರು ವರ್ಷಗಳ ಅವಿರತ ಪರಿಶ್ರಮದಿಂದ ಮಾನವ ಸಮಾಜವು ಜ್ಞಾನವನ್ನು ಸಂಪಾದಿಸಿದೆ. ಈ ಜ್ಞಾನವನ್ನು ರಕ್ಷಿಸುವ ಮಹಾನ್ ಉದ್ದೇಶದೊಂದಿಗೆ ಎಐಡಿಎಸ್ಓ  ಈ ಸಮ್ಮೇಳನವನ್ನು ಸಂಘಟಿಸಿದೆ ಇದನ್ನು ನೆನಪಿನಲ್ಲಿಟ್ಟುಕೊಂಡು ಆ ಮಹನೀಯರಿಗೆ ನೀವು ನಿಜವಾದ ಗೌರವ ಸಲ್ಲಿಸುತ್ತೀರಿ” ಎಂಬ ಭರವಸೆಯನ್ನು ವ್ಯಕ್ತಪಡಿಸುತ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ಈ ಸಮ್ಮೇಳನದಲ್ಲಿ ರಾಜ್ಯದ 31 ಜಿಲ್ಲೆಗಳ ಪ್ರತಿನಿಧಿಗಳನ್ನೊಳಗೊಂಡ 395 ಜನರ ಎಐಡಿಎಸ್ಓ ಕರ್ನಾಟಕ ನೂತನ ರಾಜ್ಯ ಕೌನ್ಸಿಲನ್ನು ಚುನಾಯಿಸಲಾಯಿತು. ರಾಜ್ಯ ಅಧ್ಯಕ್ಷರಾಗಿ ಅಶ್ವಿನಿ ಕೆ ಎಸ್, ಕಾರ್ಯದರ್ಶಿಗಳಾಗಿ ಅಜಯ್ ಕಾಮತ್ ಹಾಗೂ ಉಪಾಧ್ಯಕ್ಷರುಗಳಾಗಿ ಹಣಮಂತು, ಅಭಯಾ ದಿವಾಕರ್, ಸ್ನೇಹಾ ಕಟ್ಟಿಮನಿ, ಚಂದ್ರಕಲಾ, ಅಪೂರ್ವ ಸಿ ಎಂ, ಖಜಾಂಚಿಯಾಗಿ ಸುಭಾಷ್ ಬಿ. ಜೆ. ಹಾಗೂ ಕಚೇರಿ ಕಾರ್ಯದರ್ಶಿಯಾಗಿ ಮಹಾಂತೇಶ ಬಿ ಸೇರಿದಂತೆ ವಿವಿಧ ಪದಾಧಿಕಾರಿಗಳು ಚುನಾಯಿಸಲ್ಪಟ್ಟರು.

ಸೆಪ್ಟೆಂಬರ್ 1ರಿಂದ 3 ರವರೆಗೆ  ತುಮಕೂರಿನಲ್ಲಿ ನಡೆದ ಎಂಟನೇ ರಾಜ್ಯಮಟ್ಟದ ವಿದ್ಯಾರ್ಥಿ ಸಮ್ಮೇಳನವು, ಸಾರ್ವಜನಿಕ ಶಿಕ್ಷಣ ಉಳಿಸಲು ರಾಜ್ಯವ್ಯಾಪಿ ಬಲಿಷ್ಠ ಹೋರಾಟಗಳನ್ನು ಕಟ್ಟಿ ಬೆಳೆಸುವ ಮತ್ತು ಈ ಕರ್ತವ್ಯದಲ್ಲಿ ನೇತಾಜಿ ಭಗತ್ ಸಿಂಗ್ ಮುಂತಾದ ಕ್ರಾಂತಿಕಾರಿಗಳ ಹಾಗೂ ರಾಜಾರಾಮ್ ಮೋಹನ ರಾಯ್, ಈಶ್ವರಚಂದ್ರ ವಿದ್ಯಾಸಾಗರರಂತಹ ನವೋದಯ ಚಿಂತಕರ ಉನ್ನತ ಚಿಂತನೆ ಮತ್ತು ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳುವ ಸಂಕಲ್ಪದೊಂದಿಗೆ ಸೆಪ್ಟೆಂಬರ್ ಮೂರನೇ ತಾರೀಕಿನಂದು ಸಮಾರೋಪಗೊಂಡಿತು.

About Mallikarjun

Check Also

ಖೊಟ್ಟಿ ದಾಖಲೆ ಸೃಷ್ಟಿಸಿ, ಬಿಪಿಎಲ್ ಪಡಿತರ ಚೀಟಿ ಪಡೆದಿದ್ದ ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲು, ದಂಡವಸೂಲಿ.

ಕಾರಟಗಿ: ತಾಲೂಕಿನ ಸಿದ್ಧಾಪುರ ಗ್ರಾಮದ ಬಿಜೆಪಿ ಮುಖಂಡ ಆಗಿರುವ ಮಹಿಬೂಬ್ ಸಾಬ್ ಮುಲ್ಲಾ (ಎಂ.ಡಿ.ಎಸ್) ತಂದೆ ಮೋದಿನ್ ಸಾಬ್ ಈತನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.