ಶ್ರೀ ಕೃಷ್ಣ ರುಕ್ಷ್ಮಿಣಿ ಕಾನೂನು ಮಹಾವಿದ್ಯಾಲಯದಲ್ಲಿ ಮೌಲ್ಯೋತ್ಸವ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು
Malyutsava' (Festival of Values) at Sri Krishna Rukmini Law College

ಶ್ರೀ ಕೃಷ್ಣ ರುಕ್ಷ್ಮಿಣಿ ಕಾನೂನು ಮಹಾವಿದ್ಯಾಲಯದಲ್ಲಿ ಮೌಲ್ಯೋತ್ಸವ

ಜಾಹೀರಾತು

ಬೆಂಗಳೂರು: ಚಿಕ್ಕಜಾಲದ ಚೊಕ್ಕನಹಳ್ಳಿಯಲ್ಲಿರುವ ಶ್ರೀ ರೇವಣ ಸಿದ್ದೇಶ್ವರ ಎಜುಕೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಶ್ರೀ ಕೃಷ್ಣ ರುಕ್ಷ್ಮಿಣಿ ಕಾನೂನು ಮಹಾವಿದ್ಯಾಲಯದಲ್ಲಿ ಜೂನ್ 20 ರಂದು ಜಿಲ್ಲಾ ಮಟ್ಟದ ಅಂತರ ಕಾಲೇಜು ಪ್ರಬಂಧ, ಚರ್ಚೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ “ಮೌಲ್ಯೋತ್ಸವ” ಕಾರ್ಯಕ್ರಮ ನಡೆಯಿತು.

ಕಾನೂನು ಶಿಕ್ಷಣದಲ್ಲಿ ನೈತಿಕ ಮೌಲ್ಯಗಳ ಅಗತ್ಯತೆ: ಡಾ. ಸುನೀಲ್ ಬಾಗಡೆ
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ (KSLU) ಸಹಾಯಕ ಕುಲಸಚಿವರು ಹಾಗೂ ಸಹಾಯಕ ಪ್ರಾಧ್ಯಾಪಕರಾದ ಡಾ. ಸುನೀಲ್ ಬಾಗಡೆ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, “ಕಾನೂನು ಶಿಕ್ಷಣದಲ್ಲಿ ಕೇವಲ ಕಾಯ್ದೆಗಳ ಜ್ಞಾನವಷ್ಟೇ ಸಾಲದು, ವೃತ್ತಿಪರ ನೈತಿಕತೆ ಮತ್ತು ಸಾಮಾಜಿಕ ಮೌಲ್ಯಗಳು ಅತ್ಯಂತ ಮುಖ್ಯ” ಎಂದು ಪ್ರತಿಪಾದಿಸಿದರು. ಸಮಾಜದ ಏಳಿಗೆಗಾಗಿ ಮತ್ತು ಸಾಂವಿಧಾನಿಕ ಮೌಲ್ಯಗಳ ರಕ್ಷಣೆಗಾಗಿ ಶ್ರಮಿಸಿದ ದೇಶದ ಪ್ರಖ್ಯಾತ ವಕೀಲರಾದ ನಾನಿ ಪಾಲ್ಖಿವಾಲಾ ಹಾಗೂ ಪರಿಸರ ಸಂರಕ್ಷಣೆಯ ಹೋರಾಟಗಾರರಾದ ಎಂ.ಸಿ. ಮೆಹ್ತಾ ಅವರ ಆದರ್ಶಗಳನ್ನು ವಿದ್ಯಾರ್ಥಿಗಳಿಗೆ ಉದಾಹರಣೆಯಾಗಿ ನೀಡಿದ ಅವರು, ಮುಂಬರುವ ವಕೀಲರು ಇಂತಹ ಮಹನೀಯರ ಹಾದಿಯಲ್ಲಿ ಸಾಗಬೇಕು ಎಂದು ಕರೆ ನೀಡಿದರು.

ವಿದ್ಯಾರ್ಥಿಗಳಿಗೆ ಮಾಜಿ ಸಚಿವ ಆರ್. ಕೃಷ್ಣಪ್ಪ ಪ್ರೇರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ರೇವಣ ಸಿದ್ದೇಶ್ವರ ಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಶ್ರೀ ಆರ್. ಕೃಷ್ಣಪ್ಪ ಅವರು ಮಾತನಾಡಿ, ಯುವ ಜನಾಂಗವು ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ಮತ್ತು ನೈತಿಕ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.

ವಿವಿಧ ಸ್ಪರ್ಧೆಗಳು ಮತ್ತು ರಕ್ತದಾನ ಶಿಬಿರ
ಈ ಮೌಲ್ಯೋತ್ಸವದಲ್ಲಿ ಜಿಲ್ಲೆಯ ವಿವಿಧ ಭಾಗಗಳ ಹತ್ತಾರು ಕಾಲೇಜುಗಳಿಂದ ಆಗಮಿಸಿದ್ದ ನೂರಾರು ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಪ್ರಬಂಧ, ಚರ್ಚಾ ಸ್ಪರ್ಧೆ ಹಾಗೂ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ (ಗಾಯನ ಮತ್ತು ನೃತ್ಯ) ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಇದೇ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಬೃಹತ್ ರಕ್ತದಾನ ಶಿಬಿರವು ಸಾರ್ವಜನಿಕರ ಮತ್ತು ವಿದ್ಯಾರ್ಥಿಗಳ ಗಮನ ಸೆಳೆಯಿತು.

ಗಣ್ಯರ ಉಪಸ್ಥಿತಿ
ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ರುಕ್ಷ್ಮಿಣಿ ಕಾನೂನು ಮಹಾವಿದ್ಯಾಲಯದ ನಿರ್ದೇಶಕರಾದ ಶ್ರೀ ಕೇಶವ್ ಕೃಷ್ಣಪ್ಪ ಮತ್ತು ಪ್ರಾಂಶುಪಾಲರಾದ ಶ್ರೀಮತಿ ರಮ್ಯಾ ಎ.ಎಸ್. ಅವರು ಉಪಸ್ಥಿತರಿದ್ದು, ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಗೌರವಿಸಿದರು. ಜೊತೆಗೆ, ಕಾನೂನು ವೃತ್ತಿಯಲ್ಲಿ ಪ್ರಾಮಾಣಿಕತೆ, ನೈತಿಕ ಮೌಲ್ಯಗಳು ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಅಳವಡಿಸಿಕೊಳ್ಳುವಂತೆ ಭಾಗವಹಿಸಿದ್ದ ಎಲ್ಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪ್ರೇರೇಪಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ, ವಿದ್ಯಾರ್ಥಿ ಸಂಘಟನಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು

Total Views: 0
Share This Article