Breaking News

ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಬೇಕು:ಅಣ್ಣಾಸಾಹೇಬ ತೆಲಸಂಗ -ಸಚೀನ ಆರ್ ಜಾಧವ

Children should be given rites along with education: Annasaheb Telasanga – Sachina R Jadhav

ಜಾಹೀರಾತು


ಅರಟಾಳ-ಸಾವಳಗಿ: ಪ್ರತಿಯೊಬ್ಬರ ಜೀವನ ರೂಪಿಸಲು ಶಿಕ್ಷಣ ಬಹಳ ಅವಶ್ಯಕ. ವಿದ್ಯಾರ್ಥಿಗಳ ಭಾವಿ ಭವಿಷ್ಯ ರೂಪಗೊಳ್ಳುವುದು ಶಾಲೆಗಳಲ್ಲಿ ಮಾತ್ರ. ಮಕ್ಕಳಿಗೆ ಇಂದು ಗುಣಾತ್ಮಕ ಶಿಕ್ಷಣದ ಉತ್ತಮ ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಕಲಿಸಿಕೊಡುವುದು ಅಗತ್ಯವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಣ್ಣಾಸಾಹೇಬ ತೆಲಸಂಗ ಹೇಳಿದರು.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅರಟಾಳ ಸಮೀಪದ ಬಾಡಗಿ ಗ್ರಾಮದ ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸಂಸ್ಥೆಯ 15ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಇಂಗ್ಲಿಷ್ ವ್ಯಾಮೋಹ ಹೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ ಮಕ್ಕಳನ್ನ ಕನ್ನಡ ಶಾಲೆಗೆ ಸೇರಿಸಿ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವುದರ ಜೊತೆಗೆ ನಮ್ಮ ಅನ್ನದ, ಬದುಕಿನ ಭಾಷೆಯಾಗಿರುವ ಕನ್ನಡವನ್ನ ಉಳಿಸಿ ಬೆಳೆಸಬೇಕು. ಇಂತಹ ಕಾರ್ಯವನ್ನ ಬಸವೇಶ್ವರ ಶಿಕ್ಷಣ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಶಿಕ್ಷಕರು ಮಕ್ಕಳಿಗೆ ಕೇವಲ ಹೆಚ್ಚು ಅಂಕಗಳಿಸುವ ಶಿಕ್ಷಣ ನೀಡಿದರೆ ಸಾಲದು, ಮಕ್ಕಳಲ್ಲಿನ ವಿಶೇಷ ಪ್ರತಿಭೆ ಮತ್ತು ಕೌಶಲ್ಯಗಳನ್ನು ಗುರುತಿಸಿ , ಅವರನ್ನ ಪ್ರೋತ್ಸಾಹಿಸಿದಾಗ ಅವರು ಉನ್ನತ ಸಾಧನೆ ಮಾಡಲು ಸಾಧ್ಯವಿದೆ ಎಂದು ಹೇಳಿದರು.

ಸಾನಿಧ್ಯ ವಹಿಸಿದ್ದ ವೇದಮೂರ್ತಿ ಸಂಗಯ್ಯ ಹಿರೇಮಠ, ಮತ್ತು ಸದ್ಗುರು ಶರಣಯ್ಯ ಹಿರೇಮಠ ಮಾತನಾಡಿ ಶಿಕ್ಷಣ ಎಂಬುದು ನಮ್ಮಲ್ಲಿನ ಅಜ್ಞಾನವನ್ನು ಕಳೆದು ಸುಜ್ಞಾನವನ್ನು ತರುವ ದಿವ್ಯ ಔಷಧಿಯಾಗಿದೆ. ಇಂದಿನ ಶಿಕ್ಷಣ ಕೇವಲ ಹೆಚ್ಚು ಅಂಕಗಳಿಗೆ ಸೀಮಿತವಾಗದೆ ಮಕ್ಕಳಿಗೆ ಬದುಕುವ ಕಲೆಯನ್ನ ಕಲಿಸಬೇಕು, ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದರ ಜೊತೆಗೆ ಉತ್ತಮ ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಕಲಿಸಿಕೊಡುವುದು ಇಂದಿನ ಅಗತ್ಯವಾಗಿದೆ. ಮನೆಯಲ್ಲಿ ಮಕ್ಕಳನ್ನು ಉತ್ತಮ ರೀತಿಯಲ್ಲಿ ಬೆಳೆಸುವ ಜವಾಬ್ದಾರಿ ಪಾಲಕರ ಮೇಲಿದೆ. ಮಕ್ಕಳು ನಾವು ಹೇಳಿದಂತೆ ಮಾಡುವುದಿಲ್ಲ. ನಾವು ಮಾಡಿದಂತೆ ಮಕ್ಕಳು ಮಾಡುತ್ತವೆ. ಆದ್ದರಿಂದ ಮನೆಯಲ್ಲಿ ಪಾಲಕರು ಕೂಡ ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರುವಂತಹ ಕಾರ್ಯಗಳನ್ನ ಮಾಡಬಾರದು. ನಾವು ಒಳ್ಳೆಯವರಾದರೆ ನಾಡೆ ಒಳ್ಳೆಯದು ಎಂಬಂತೆ ಪ್ರತಿಯೊಬ್ಬರೂ ಆದರ್ಶ ಬದುಕು ಕಟ್ಟಿಕೊಳ್ಳಬೇಕೆಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಬಹಳ ದುಬಾರಿಯಾಗುತ್ತಿದೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅತ್ಯಂತ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶ ಹೊಂದಿದ್ದೇವೆ. ಇರುವ ವ್ಯವಸ್ಥೆಯಲ್ಲಿ ಅನೇಕ ಸವಾಲುಗಳನ್ನು ಎದುರಿಸಿ ಕಳೆದ 15 ವರ್ಷಗಳಿಂದ ಈ ಶಿಕ್ಷಣ ಸಂಸ್ಥೆಯನ್ನ ಮುನ್ನಡೆಸಿಕೊಂಡು ಬರುತ್ತಿದ್ದೇವೆ. ತಮ್ಮೆಲ್ಲರ ಸಹಾಯ ಸಹಕಾರದೊಂದಿಗೆ ಹೆಚ್ಚಿನ ತರಗತಿಗಳನ್ನು ಆರಂಭಿಸುವುದರ ಜೊತೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು, ಶಾಲೆಯ ಎಲ್ಲಾ ಶಿಕ್ಷಕರಿಗೆ ಗೌರವಿಸುವ ಮೂಲಕ ಗುರು ವಂದನೆ ಜರುಗಿತು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರನ್ನು ರಂಜಿಸಿದವು.

ಸಂಸ್ಥೆಯ ಕಾರ್ಯದರ್ಶಿ ಶಂಕರೆಮ್ಮ ತೇಲಿ ಪ್ರಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ಮುಖ್ಯೋಪಾಧ್ಯಾಯ ಸಂತೋಷ ಅಂಕಲಗಿ ಸ್ವಾಗತಿಸಿದರು. ಎ. ಎ. ಮುಜಾವರ ವಂದಿಸಿದರು.

ಈ ಸಂದರ್ಭದಲ್ಲಿ ತುಂಗಳದ ಸದಯ್ಯ ಹಿರೇಮಠ, ಸಂಗಯ್ಯ ಹಿರೇಮಠ, ಪಿಕೆಪಿಎಸ್ ಅಧ್ಯಕ್ಷ ಮಲ್ಲಪ್ಪ ಡಂಗಿ, ಗ್ರಾಪಂ ಸದಸ್ಯ ರೇವಪ್ಪ ತೇಲಿ, ಶಿವಾನಂದ ನೇಮಗೌಡ, ಸಿದ್ದು ಹಳ್ಳಿ, ಮಾಜಿ ತಾಪಂ ಸದಸ್ಯ ಶಿವಪ್ಪ ಹಟ್ಟಿ, ರಾಮಪ್ಪ ಭಂಡಾರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

About Mallikarjun

Check Also

ಆನೆಗುಂದಿ ಗ್ರಾಮ ಪಂಚಾಯತಿಯಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿಪರಿಶೀಲನೆ

Progress review of guarantee schemes in Anegundi Gram Panchayat ಗಂಗಾವತಿ: ಸರ್ಕಾರದ ಆದೇಶದಂತೆ ಗ್ಯಾರಂಟಿ ಸಮಿತಿಗಳ ನಡೆ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.