Waqf Board member Shaheen Sharif has lodged a complaint with the Police Commissioner seeking action against an unregistered madrasa.

ಎಲ್ಲಿಯೂ ನೋಂದಣಿಯಾಗದಿರುವ ಮದರಸಾ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ಆಯುಕ್ತರಿಗೆ ದೂರು ನೀಡಿದ ವಕ್ಫ್ಸ್ ಮಂಡಳಿ ಸದಸ್ಯೆ ಶಹೀನ್ ಶರೀಫ್

ಬೆಂಗಳೂರು: ಎಲ್ಲಿಯೂ ನೋಂದಣಿ ಮಾಡದೆ ವಿವಿಧ ಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ಮದರಸಾ ನಡೆಸುತ್ತಾ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಜಾಮಿಯಾ ಮಹಮದೀಯ ಮನ್ಸೂರ ಸಂಸ್ಥೆಯ ಜಾಮಿಯಾ ಮಹಮ್ಮದಿಯ ಎಜುಕೇಷನ್ ಸೊಸೈಟಿ, ಮುಂಬೈ ವಿರುದ್ಧ ಆಂತರಿಕ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಅಲ್ಪ ಸಂಖ್ಯಾತ ಇಲಾಖೆಯ ವಕ್ಫ್ ಮಂಡಳಿಯ ಸದಸ್ಯೆ ಹಾಗೂ ಕರ್ನಾಟಕ ಸ್ಟೇಟ್ ವಕ್ಪ್ ಪೌಂಡೇಷನ್ ಫಾರ್ ವುಮೇನ್ ಡೆವಲ್ಪಮೆಂಟ್ ನ ಸದಸ್ಯರಾದ ಶಹೀನ್ ಶರೀಫ್ ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
ಪಾಕಿಸ್ತಾನ ಸೇರಿ ಹೊರದೇಶಗಳಿಂದ ಸಂಸ್ಥೆ ಕಾನೂನು ಬಾಹಿರವಾಗಿ ದೇಣಿಗೆ ರೂಪದಲ್ಲಿ ಕೋಟ್ಯಾಂತರ ರೂಪಾಯಿ ಹಣ ದೋಚುತ್ತಿದ್ದು, ನಮ್ಮ ಕಾನೂನುಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣ ಇಲಾಖೆಗೆ ಸುಳ್ಳು ದಾಖಲೆಗಳನ್ನು ಒದಗಿಸಿ, ವಂಚನೆ ಮಾಡಿದೆ. ಮದರಸಾದಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿದ್ದು, ಕಾನೂನು ಸುವ್ಯಸ್ಥೆಗೆ ವಿರುದ್ಧವಾಗಿರುವ ಈ ಸಂಸ್ಥೆಯನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರಿಗೆ ಖುದ್ದಾಗಿ ದೂರು ಸಲ್ಲಿಸಿದ್ದಾರೆ.
ಪಾಕಿಸ್ತಾನದ ಭಯೋತ್ಪಾದನ ಸಂಸ್ಥೆಗಳ ಜೊತೆ ನೇರ ಸಂಪರ್ಕ ಹೊಂದಿರುವ ಸದರಿ ಶಾಲಾ ಮಂಡಳಿಯವರು ನಮ್ಮ ದೇಶಕ್ಕೆ ಭಾರೀ ಅಪಾಯ ತಂದೊಡ್ಡುವ ಸಾಧ್ಯತೆ ಇದ್ದು, ಇದು ನಮಗೆ ಎಚ್ಚರಿಕೆಯಾಗಿದೆ. ಈ ಸಂಸ್ಥೆಯ ವಿರುದ್ಧ ಒಬ್ಬ ದಕ್ಷ ಎಸಿಪಿ ದರ್ಜೆಯ ಅಧಿಕಾರಿಯಿಂದ ಆಂತರಿಕ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಥಣಿಸಂದ್ರದಲ್ಲಿ ಮದರಸಾ ನಡೆಸುತ್ತಿರುವ ಜಾಮಿಯಾ ಮಹಮ್ಮದಿಯ ಎಜುಕೇಷನ್ ಸೊಸೈಟಿ ದೇಶದಲ್ಲಿ ಎಲ್ಲಿಯೂ ನೋಂದಣಿಯಾಗಿಲ್ಲ. ನಕಲಿ ದಾಖಲೆಗಳನ್ನು ನೀಡಿ ಬೇರೆ ಬೇರೆ ಹೆಸರಿನಲ್ಲಿ ನಾಮಫಲಕಗಳನ್ನು ಹಾಕಿರುವುದು ಸಾಬೀತಾಗಿದ್ದು, ಮಾನ್ಯತೆಯನ್ನು ಈಗಾಗಲೇ ರದ್ದುಗೊಳಿಸಲಾಗಿದೆ. ನಕಲಿ ರಶೀದಿಗಳು, ನಕಲಿ ಪ್ರಮಾಣ ಪತ್ರಗಳನ್ನು ನೀಡಿ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ ಆಡುತ್ತಿದೆ. ಜಾಮಿಯಾ ಮೊಹಮ್ಮದೀಯಾ ಮನ್ಸೂರ ಮದರಸ ಎಂಬ ಹೆಸರಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ನಕಲಿ ದಾಖಲೆ ಸಲ್ಲಿಸಿ ಹತ್ತು ಲಕ್ಷ ರೂ ಅನುದಾನ ಪಡೆದಿದೆ ಎಂದು ಶಹೀನ್ ಶರೀಫ್ ಆಪಾದಿಸಿದ್ದಾರೆ.
ಇಲ್ಲಿನ ಮದರಸಾ ವಿದ್ಯಾರ್ಥಿಗಳು ದಾಂಧಲೆ ನಡೆಸಿ ರೌಡಿಗಳಂತೆ ವರ್ತಿಸಿ ಮಹಿಳೆಯರು, ವೃದ್ಧರು, ಮಹಿಳೆಯರ ಮಾನಕ್ಕೆ ಕುಂದುಂಟು ಮಾಡಿದ್ದಾರೆ. ಮಹಿಳೆಯರ ಮೈಮೇಲಿನ ಬಟ್ಟೆಗಳನ್ನು ಬಿಚ್ಚಿ, ಎಳೆದಾಡಿ, ಕೂದಲು ಹಿಡಿದು ಹೊಡೆದು, ಕಾರದ ಪುಡಿ ಎರಚಿದ್ದಾರೆ. ಮಾರಕಾಸ್ತ್ರಗಳು, ಕಲ್ಲುಗಳಿಂದ ಹೊಡೆದು ಅವಾಚ್ಯವಾಗಿ ನಿಂದಿಸಿ ಕೊಲೆ ಬೆದರಿಕೆಗಳನ್ನು ಹಾಕುತ್ತಿದ್ದಾರೆ.
ಬಿಹಾರ, ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದ ವಿದ್ಯಾರ್ಥಿಗಳನ್ನು ಮದರಸಾದಲ್ಲಿ ಸೇರಿಸಿಕೊಂಡಿದ್ದು, ಇಲ್ಲಿ ಮಕ್ಕಳ ಭವಿಷ್ಯ ರೂಪಿಸಬೇಕಾದ ಸುವಿಚಾರಗಳನ್ನು ಕಲಿಸುವುದನ್ನು ಬಿಟ್ಟು ಮಕ್ಕಳಿಗೆ ಸಮಾಜಘಾತುಕತನವನ್ನು ತಲೆಯಲ್ಲಿ ತುಂಬುತ್ತಿದ್ದಾರೆ. ಸ್ವತ್ತನ್ನು ಲಪಟಾಯಿಸುವ, ಸ್ವತ್ತಿಗೆ ಯಾರೂ ಬಾರದಂತೆ ನೋಡಿಕೊಳ್ಳುವ, ಸ್ವತ್ತಿನ ಮಾಲೀಕರ ಮತ್ತು ಅವರ ಕುಟುಂಬದವರ ಮೇಲೆ ಹಲ್ಲೆ ಮಾಡಿ, ಬೆದರಿಕೆಯನ್ನು ಹುಟ್ಟಿಸಲು ಮದರಸಾವನ್ನು ಬಳಸಿಕೊಳ್ಳುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ ಎಂದು ಹೇಳಿದ್ದಾರೆ.
