
Dialogue at Koppal District Jail for Conversion of Prisoners
Dialogue at Koppal District Jail for Conversion of Prisoners

ಜೈಲು ಬಂದಿಗಳ ಮನ ಪರಿವರ್ತನೆಗಾಗಿ
ಕೊಪ್ಪಳ ಜಿಲ್ಲಾ ಕಾರಾಗೃಹದಲ್ಲಿ ಸಂವಾದ

ಕೊಪ್ಪಳ ಮೇ 16 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಕಾರಾಗೃಹದಲ್ಲಿ 140ಕ್ಕೂ ಹೆಚ್ಚು ಬಂದಿಗಳಿದ್ದು, ಅವರ ಮನ ಪರಿವರ್ತನೆಗಾಗಿ ನಾಡಿನ ಖ್ಯಾತ ಬರಹಗಾರರು ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ನಾಡೋಜ ಡಾ. ಕುಂ.ವೀರಭದ್ರಪ್ಪರವರಿAದ ಮೇ 15 ರಂದು ಕಾರಾಗೃಹದಲ್ಲಿ ಸಂವಾದ ನಡೆಯಿತು.
ಜಿಲ್ಲಾ ಕಾರಾಗೃಹ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಹಮ್ಮಿಕೊಂಡ ಈ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಮನುಷ್ಯನ ವರ್ತನೆ, ಪೋಸ್ಕೊ ಪ್ರಕರಣಗಳು, ಜಾತಿ ವ್ಯವಸ್ಥೆ, ಬಡತನ, ಹಸಿವು ಹೀಗೆ ವಿವಿಧ ಆಸಕ್ತಿದಾಯಕ ವಿಷಯಗಳ ಕುರಿತಾಗಿ ಜೈಲು ಬಂದಿಗಳು ಪ್ರಶ್ನೆಗಳನ್ನು ಕೇಳಿ ಕುಂ.ವೀರಭದ್ರಪ್ಪ ರವರಿಂದ ಉತ್ತರ ಪಡೆದುಕೊಂಡರು.
ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ್.ಎಸ್.ದರಗದ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ, ಕಾರಾಗೃಹದಲ್ಲಿನ ಬಂದಿಗಳು ಮುಕ್ತವಾಗಿ ಮಾತನಾಡುವಂತಹ ವಾತಾವರಣ ಕಲ್ಪಿಸಲು ಕುಂ.ವೀರಭದ್ರಪ್ಪ ಅವರಂತಹ ಸಾಹಿತಿಗಳನ್ನು ಕಾರಾಗೃಹಕ್ಕೆ ಕರೆಯಿಸಿ ಸಂವಾದ ನಡೆಸಿದ್ದು ವಿಶೇಷ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರಾಗೃಹದ ಅಧೀಕ್ಷಕ ಅಂಬರೀಷ್.ಎಸ್.ಪೂಜಾರಿ ಅವರು ಮಾತನಾಡಿ, ಬಂದಿಗಳ ತಲೆ ಎಣಿಸಿ ಕರ್ತವ್ಯ ನಿರ್ವಹಿಸಿದರೆ, ಕಾರಾಗೃಹದ ಬಂದಿಗಳು ಬದಲಾವಣೆ ಹೊಂದುವುದಿಲ್ಲ. ಬಂದಿಗಳನ್ನು ಬದಲಾವಣೆ ಮಾಡುವುದು ಕಾರಾಗೃಹದ ಮುಖ್ಯ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಈ ಸಂವಾದವನ್ನು ಆಯೋಜಿಸಲಾಗಿದೆ. ಡಾ. ಕುಂ.ವೀರಭದ್ರಪ್ಪ ಅವರಂತಹ ಬರಹಗಾರರ ಮಾತಿನಿಂದ ಬದಲಾವಣೆ ಹೊಂದಿ ಮರು ಸಾಮಾಜೀಕರಣಗೊಂಡು ತಮ್ಮ ಕುಟುಂಬದ ಜೊತೆ ಸುಂದರ ಜೀವನ ನಡೆಸಿದರೆ ಕಾರ್ಯಕ್ರಮದ ಉದ್ದೇಶ ಸಾರ್ಥಕವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಹಾಯಕ ಜೈಲರ್ ಎಫ್.ಜಿ.ಬಾರಿಕೇರ್, ಸೈಕ್ಯಾಟ್ರಿಕ್ ಕೌನ್ಸಲರ್ ಎ.ಕೆ ಹಾವೋಜಿ ಸೇರಿದಂತೆ ಕಾರಾಗೃಹದ ಇತರೆ ಅಧಿಕಾರಿ, ಸಿಬ್ಬಂದಿ ಹಾಗೂ ಬಂದಿಗಳು ಉಪಸ್ಥಿತರಿದ್ದರು.
