Bike rally in Gangavathi spreads message of Hindu-Muslim harmony; 80th Independence Day celebrated with great enthusiasm.

ಗಂಗಾವತಿಯಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಾರಿದ ಬೈಕ್ ರಾಲಿ: ವಿಜೃಂಭಣೆಯಿಂದ ಜರುಗಿದ 80ನೇ ಸ್ವಾತಂತ್ರ್ಯ ದಿನಾಚರಣೆ


ಗಂಗಾವತಿ: ಅಲ್-ವಕೀಲ್ ವೆಲ್ಫೇರ್ ಟ್ರಸ್ಟ್ (ರಿ) ಹಾಗೂ ಶ್ರೀ ಆದಿ ಜಗದ್ಗುರು ರೇಣುಕಾಚಾರ್ಯ ಸೇವಾ ಸಮಿತಿ (ರಿ) ಗಂಗಾವತಿ ಇವರ ಸಂಯುಕ್ತ ಆಶ್ರಯದಲ್ಲಿ, 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿ ಬೈಕ್ ರಾಲಿಯನ್ನು ಅತ್ಯಂತ ಸಡಗರದಿಂದ ಹಮ್ಮಿಕೊಳ್ಳಲಾಯಿತು.
ಬೆಳಿಗ್ಗೆ 8:30ಕ್ಕೆ ಗಂಗಾವತಿ ಬಸ್ ನಿಲ್ದಾಣ ವೃತ್ತದಿಂದ ಆರಂಭವಾದ ಈ ಬೈಕ್ ರಾಲಿಯು ನೀಲಕಂಠೇಶ್ವರ ವೃತ್ತ, ಕನಕದಾಸ ಸರ್ಕಲ್, ಜುಲೈನಗರ ಮಾರ್ಗವಾಗಿ, ಮಹಾರಾಣಾ ಪ್ರತಾಪ್ ಸರ್ಕಲ್ನಿಂದ ಪಿ. ಇಸ್ಲಾಂಪುರ್ ಮಾರ್ಗವಾಗಿ ಸಾಗಿ ಗಾಂಧಿ ಸರ್ಕಲ್ ತಲುಪಿತು. ಬಳಿಕ ಮಹಾತ್ಮ ಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ರಾಲಿಯನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಲಾಯಿತು. ಸ್ವಾತಂತ್ರ್ಯೋತ್ಸವದ ಈ ಸಂಭ್ರಮದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಒಂದೇ ತಾರೆಯಡಿಯಲ್ಲಿ ಪಾಲ್ಗೊಂಡು ಭಾವೈಕ್ಯತೆಯನ್ನು ಮೆರೆದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರಾದ ಎಚ್.ಆರ್. ಶ್ರೀನಾಥ್ ಅವರು, “ಗಂಗಾವತಿ ಶಾಂತಿ ಪ್ರಿಯರ ನಾಡು ಮತ್ತು ಭಾವೈಕ್ಯತೆಯನ್ನು ಸಾರುವ ಬೀಡು” ಎಂದು ಬಣ್ಣಿಸಿದರು.
ಅಲ್-ವಕೀಲ್ ವೆಲ್ಫೇರ್ ಟ್ರಸ್ಟ್ನ ಅಧ್ಯಕ್ಷರಾದ ಅಜರ್ ಅನ್ಸಾರಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು 80 ವರ್ಷಗಳು ಕಳೆದರೂ ದೇಶದಲ್ಲಿ ಇನ್ನೂ ಅನೇಕ ಸುಧಾರಣೆಗಳು ಆಗಬೇಕಿದೆ. ಭಾವೈಕ್ಯತೆಗೆ ಹೆಸರಾದ ಗಂಗಾವತಿಯಲ್ಲಿ ಸರ್ವ ಜನಾಂಗದವರು ಪರಸ್ಪರ ಪ್ರೀತಿ-ವಿಶ್ವಾಸ ಹಾಗೂ ‘ನಾವು ನಮ್ಮವರು’ ಎನ್ನುವ ಭಾವನೆಯೊಂದಿಗೆ ಗಟ್ಟಿಯಾಗಿ ಮುನ್ನಡೆಯೋಣ ಎಂದು ದೃಢಸಂಕಲ್ಪ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಅಲ್-ವಕೀಲ್ ವೆಲ್ಫೇರ್ ಟ್ರಸ್ಟ್ನ ಕಾರ್ಯದರ್ಶಿ ಇಸ್ಮಾಯಿಲ್ ಸಾಬ್ ಹಾಗೂ ಸರ್ವ ಸದಸ್ಯರು, ಶ್ರೀ ಆದಿ ಜಗದ್ಗುರು ರೇಣುಕಾಚಾರ್ಯ ಸೇವಾ ಸಮಿತಿಯ ಅಧ್ಯಕ್ಷರಾದ ಡಾ. ಶರಬಯ್ಯ, ಕಾರ್ಯದರ್ಶಿಗಳು ಮತ್ತು ಸಮಿತಿಯ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಬೈಕ್ ರಾಲಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.





