Gandhi India; Various Competitions

ಕೊಪ್ಪಳ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಕಾಲೇಜು ಶಿಕ್ಷಣ ಇಲಾಖೆಯ ಆದೇಶದ ಮೇರೆಗೆ ಮಹಾತ್ಮ ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ 1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಸಂದರ್ಭದಲ್ಲಿ “ಗಾಂಧಿ ಭಾರತ” ಎಂಬ ಕಾರ್ಯಕ್ರಮದ ಅಡಿಯಲ್ಲಿ ವಿದ್ಯಾರ್ಥಿಗಳಿಗಾಗಿ “ನಾವು ಮನುಜರು” ಎನ್ನುವ ಧ್ಯೇಯದೊಂದಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಗಾಂಧೀಜಿ ಚಿಂತನೆಗಳ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರಸಕ್ತ ಕಾರ್ಯಕ್ರಮವನ್ನು ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2ರ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು. ರಾಷ್ಟ್ರಗೀತೆಯನ್ನು ಹಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ಕೊಡಲಾಯಿತು.
ರಾಷ್ಟ್ರೀಯ ಸೇವಾ ಯೋಜನೆ ವಿಶ್ವವಿದ್ಯಾಲಯ ಘಟಕದ ಕಾರ್ಯಕ್ರಮ ಅಧಿಕಾರಿಗಳಾದ ಗಾಯತ್ರಿ ಭಾವಿಕಟ್ಟಿ ಅವರು ಪ್ರಾಸ್ತಾವಿಕವಾಗಿ ಕಾರ್ಯಕ್ರಮದ ಧ್ಯೇಯ ಹಾಗೂ ಉದ್ದೇಶವನ್ನು ಕುರಿತು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ.ಡಿ.ಎಚ್ ನಾಯ್ಕ ಅವರು ಮಹಾತ್ಮ ಗಾಂಧೀಜಿಯ ಚಿಂತನೆಗಳಾದ ಹೋರಾಟದ ಮಾರ್ಗವಾಗಿ ಸತ್ಯ ಮತ್ತು ಅಹಿಂಸೆಯ ಮಹತ್ವ, ಗ್ರಾಮ ಸ್ವರಾಜ್ ಪರಿಕಲ್ಪನೆಯ ಪ್ರಸ್ತುತೆ ಇತ್ಯಾದಿಗಳನ್ನು ಕುರಿತು ಮಾತನಾಡಿದರು.
ಗಾಂಧೀಜಿ ಬೋಧಿಸಿದ ದೇಶದ ಅಭಿವೃದ್ಧಿ ಮತ್ತು ಒಗ್ಗಟ್ಟಿಗೆ ಮಾರಕವಾದ ಏಳು ಸಾಮಾಜಿಕ ಪಾತಕಗಳಾದ ತತ್ವ ರಹಿತ ರಾಜಕಾರಣ, ದುಡಿಮೆ ಇಲ್ಲದ ಸಂಪತ್ತು, ಆತ್ಮಸಾಕ್ಷಿ ಇಲ್ಲದ ಸಂತೋಷ , ಚಾರಿತ್ರ್ಯವಿಲ್ಲದ ಶಿಕ್ಷಣ , ನೀತಿ ಇಲ್ಲದ ವ್ಯಾಪಾರ, ಮಾನವೀಯತೆ ಇಲ್ಲದ ವಿಜ್ಞಾನ ಹಾಗೂ ತ್ಯಾಗವಿಲ್ಲದ ಪೂಜೆ ಇವುಗಳನ್ನು ಬೋಧಿಸಿದರು.
ರಾಷ್ಟ್ರೀಯ ಸೇವಾ ಯೋಜನೆ ಸ್ವ ಆರ್ಥಿಕ ಘಟಕದ ಕಾರ್ಯಕ್ರಮ ಅಧಿಕಾರಿಗಳಾದ ಡಾ.ಉಮೇಶ್ ಅಂಗಡಿ ಕಾರ್ಯಕ್ರಮವನ್ನು ನೆರವೇರಿಸಿ ಕೊಟ್ಟರು. ನಂತರ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ, ದೇಶಭಕ್ತಿ ಗೀತೆಗಳ ಸ್ಪರ್ಧೆ ಹಾಗೂ ಏಕಪಾತ್ರ ಅಭಿನಯ ಸ್ಪರ್ಧೆಗಳನ್ನು ನಡೆಸಲಾಯಿತು. ಕಾಲೇಜಿನ ಬಿ.ಎ, ಬಿ.ಕಾಂ, ಬಿ.ಎಸ್ಸಿ , ಬಿ.ಬಿ.ಎ ಹಾಗೂ ಬಿ.ಸಿ.ಎ ಕೋರ್ಸ್ ಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶ್ರೀಮತಿ ಸಂತೋಷ್ ಕುಮಾರಿ, ಡಾ. ಗಿರಿಜಾ ತುರುಮುರಿ ಡಾ. ತುಕಾರಾಂ ನಾಯ್ಕ, ಡಾ. ಶಿವಬಸಪ್ಪ ಮಸ್ಕಿ, ಜ್ಞಾನೇಶ್ವರ ಪತ್ತಾರ್, ಗೋಣಿಬಸಪ್ಪ, ಮ್ಯಾದಾರಹಳ್ಳಿ ಸೋಮೇಶ್ ಮತ್ತು ಗುರುಬಸವರಾಜ್ ಸ್ಪರ್ಧೆಗಳ ತೀರ್ಪುಗಾರರಾಗಿದ್ದರು. ಹಾಗೂ ಡಾ.ಪ್ರಕಾಶ್ ಬಳ್ಳಾರಿ ಡಾ.ಮಹಾಂತೇಶ್ ನೆಲಾಗಣಿ, ಶಿವಣ್ಣ, ಡಾ.ವಿಪ್ಲವಿ, ಮಲ್ಲೇಶಪ್ಪ, ವಸಂತಕುಮಾರ್, ನವೀನ್ ಕುಮಾರ್ ಮೊದಲಾದ ಬೋಧಕ ವರ್ಗದವರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.