Kolar district in-charge minister to officials meeting
ಬೆಂಗಳೂರು:(ಫೆಬ್ರವರಿ 23):- ನಗರಾಭಿವೃದ್ಧಿ ಮತ್ತು ನಗರ ಯೋಜನೆ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಿ.ಎಸ್.ಸುರೇಶ(ಬೈರತಿ) ಅವರ ಅಧ್ಯಕ್ಷತೆಯಲ್ಲಿ ಕೋಲಾರ ಜಿಲ್ಲೆಯಲ್ಲಿ ಇರುವ ಬೃಹತ್ ಮತ್ತು ದೊಡ್ಡ ಪ್ರಮಾಣದ ಕೈಗಾರಿಕೆಗಳು ಮತ್ತು ಕಾರ್ಖಾನೆಗಳು ತಮ್ಮ ಸಾಮಾಜಿಕ ಹೊಣೆಗಾರಿಕೆ(Company Social Responsibility) ಮತ್ತು ಸ್ಥಳೀಯರಿಗೆ ಉದ್ಯೋಗಗಳನ್ನು(Employment to Localities) ಸರಿಯಾದ ರೀತಿಯಲ್ಲಿ ನೀಡಲಾಗಿದೆಯೇ ಎನ್ನುವ ಕುರಿತು ವಿಧಾನ ಸೌಧದಲ್ಲಿ ಸಂಜೆ ಸಭೆ ಜರುಗಿತು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ನಜೀರ್ ಅಹ್ಮದ್, ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಂ.ಎಲ್. ಅನೀಲ್ ಕುಮಾರ್, ಕೋಲಾರ ಜಿಲ್ಲಾಧಿಕಾರಿ ಅಕ್ರಂ ಪಾಷಾ,ಜಿಲ್ಲಾ ಪಂಚಾಯತ್ ಸಿಇಒ ಪದ್ಮ ಬಸವಂತಪ್ಪ ಉಪಸ್ಥಿತರಿದ್ದರು.
*ರಿಜಿಸ್ಟರ್ ಆಫ್ ಕಂಪನಿಯ ಹಿರಿಯ ಅಧಿಕಾರಿ, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ಫ್ಯಾಕ್ಟರಿ ಮತ್ತು ಬಾಯ್ಲರ್ ಇಲಾಖೆ, ಕಾರ್ಮಿಕ ಇಲಾಖೆ,ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೋಲಾರ ಜಿಲ್ಲೆಯ ಅಧಿಕಾರಿಗಳು, ನರಸಾಪುರ,ವೇಮಗಲ್,ಮಾಲೂರು, ಕೆಜಿಎಫ್ ಪ್ರದೇಶದ ಕೈಗಾರಿಕಾ ಸಂಸ್ಥೆಗಳಾದ ಟಾಟಾ,ಹೋಂಡಾ, ವಿಸ್ಟ್ರಾನ್,ಐಟಿಸಿ, ಅದ್ವೈತ್,ಎಕ್ಸ್ಐಡ್,ಮಿತ್ಸುಬಿಷಿ ಕಂಪನಿಗಳ ಅಡಳಿತ ಮತ್ತು ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರು ಹೀಗೆ ಒಟ್ಟು 55 ಕೈಗಾರಿಕ ಸಂಸ್ಥೆಗಳು ಸಭೆಯಲ್ಲಿ ಭಾಗವಹಿಸಿದ್ದರು.
ಕಂಪನಿ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ಸಂಸ್ಥೆ ಗಳಿಸಿದ ಲಾಭಾಂಶದಲ್ಲಿ ಶೇಕಡ ಎರಡರಷ್ಟುನ್ನು ಜಿಲ್ಲೆಯ ಸರ್ಕಾರಿ ಆಸ್ಪತ್ರೆ, ಸರಕಾರಿ ಶಾಲೆಗಳು ಸೇರಿದಂತೆ ಸಮಾಜದ ಉದ್ದೇಶಕ್ಕಾಗಿ ಬಳಸಲಾಗಿದೆ ಎಂದು ವಿವರಿಸಿದರು.
ಜಿಲ್ಲೆಯಲ್ಲಿ ಬೃಹತ್ ಮತ್ತು ದೊಡ್ಡ ಪ್ರಮಾಣದ ಕೈಗಾರಿಕೆ ಮತ್ತು ಕಂಪನಿಗಳಿಗೆ ರಾಜ್ಯ ಸರ್ಕಾರ ಭೂಮಿ ನೀಡಿ, ವಿದ್ಯುತ್ ಪೂರೈಕೆ ,ನೀರು, ರಸ್ತೆ ಸಾರಿಗೆ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಿದೆ. ಹೀಗಾಗಿ ಸಮಾಜಕ ಹೊಣೆಗಾರಿಕೆ ಹಣವನ್ನು ಜಿಲ್ಲೆಯಲ್ಲಿ ಬಳಕೆ ಮಾಡಬೇಕು, ಬೇರೆ ಜಿಲ್ಲೆಗಳಿಗೆ ಹೋಗಬಾರದು ಎಂದು ಸೂಚನೆ ನೀಡಿದರು.
ಯಾರಿಗೆ, ಎಲ್ಲಿ ಅವಶ್ಯಕತೆ ಇದೆ ಅಲ್ಲಿ ತಮ್ಮ ಸಾಮಾಜಿಕ ಹೊಣೆಗಾರಿಕೆ ಹಣವನ್ನು ಬಳಸಿ. ಜಿಲ್ಲಾಡಳಿತ ವನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಮ್ಮ ಸಿಎಸ್ಅರ್ ಫಂಡ್ ಅನ್ನು ವಿನಿಯೋಗ ಮಾಡಿದರೆ, ಅದು ಸಾರ್ಥಕವಾಗುತ್ತದೆ ಮತ್ತು ತಮ್ಮ ಸಂಸ್ಥೆಯ ಹೆಸರು ಶಾಶ್ವತವಾಗಿ ಇರುತ್ತದೆ ಎಂದು ಸಚಿವರಾದ ಶ್ರೀ ಬೈರತಿ ಸುರೇಶ ಹೇಳಿದರು.