Religion is the celebration of true life: Sri Duttappayya Guruji

ಧರ್ಮವೇ ನಿಜವಾದ ಬದುಕಿನ ಸಂಭ್ರಮ: ಶ್ರೀ ದತ್ತಪ್ಪಯ್ಯ ಗುರೂಜಿ

ಗಂಗಾವತಿ : ನಗರದ ಶ್ರೀ ಶೃಂಗೇರಿ ಶಾರದಾ ಪೀಠದಲ್ಲಿ ಭಾನುವಾರ ಸಂಜೆ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಸಿಂಧಗಿಯ ಭೀಮಾಶಂಕರ ಸಂಸ್ಥಾನಮಠದ ಪೀಠಾಧಿಪತಿಗಳಾದ ಪೂಜ್ಯ ದತ್ತಪ್ಪಯ್ಯ ಗುರುಗಳು ದಿವ್ಯ ಸಾನಿಧ್ಯವಹಿಸಿ ಬಂದ ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿ, ಧರ್ಮದ ಹಾದಿಯಲ್ಲಿ ನಡೆಯುವುದೇ ನಿಜವಾದ ಬದುಕಿನ ಸಂಭ್ರಮವಾಗಿದ್ದು, ನಾವು ನಡೆಯುವ ದಾರಿ ಸುಗಮವಾಗಬೇಕೆಂದರೆ ಧರ್ಮವನ್ನು ನಾವು ನಮ್ಮ ಬದುಕಲ್ಲಿ ಅಳವಡಿಸಿಕೊಳ್ಳಬೇಕು ಹಾಗೂ ಅದು ಕೇವಲ ಮಾತಿನಿಂದ ಅಲ್ಲ ನಮ್ಮ ಮನೆಯಿಂದಲೇ ಪ್ರಾರಂಭವಾಗಬೇಕು. ತಾಯಿಯ ಗರ್ಭದಲ್ಲಿದ್ದಾಗಿನಿಂದಲೇ ನಾವು ಅದನ್ನು ಅನುಸರಿಸಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಶ್ರೀಮಠದ ವ್ಯವಸ್ಥಾಪಕರಾದ ನಾರಾಯಣರಾವ್ ಮಾತನಾಡಿ ಆದ್ಯಾತ್ಮ ಅನ್ನೋದೊಂದು ಸುಂದರ ಬದುಕಿನ ಚಿತ್ರಣ. ಅದನ್ನು ಅನುಭವಿಸಿದಾಗ ಮಾತ್ರ ರುಚಿಸುತ್ತದೆ. ಮನುಷ್ಯ ಜನ್ಮ ಎನ್ನುವುದು ಒಂದು ಸುಕೃತ, ಅದನ್ನು ಹೇಗೆ ನಾವು ಪಾಲಿಸಿಕೊಂಡು ಬರುತ್ತೇವೆ ಅನ್ನೋದು ಕೂಡ ಮುಖ್ಯವಾಗಿರುತ್ತದೆ ಎಂದು ತಿಳಿಸಿದರು.
ಇದಕ್ಕೂ ಪೂರ್ವದಲ್ಲಿ ಶೃಂಗೇರಿ ಉತ್ತರ ಕರ್ನಾಟಕದ ವಿಶೇಷ ಅಧಿಕಾರಿಗಳಾದ ದತ್ತಪ್ಪಯ್ಯ ಗುರುಗಳನ್ನು ಪೂರ್ಣ ಕುಂಭದೊಂದಿಗೆ ಹಾಗೂ ವಿವಿಧ ಮಂತ್ರ ಘೋಷದೊಂದಿಗೆ ಶ್ರೀಮಠಕ್ಕೆ ಸ್ವಾಗತಿಸಿಕೊಳ್ಳಲಾಯಿತು. ಬಳಿಕ ಶ್ರೀಮಠದ ಗುರುಭವನ ಕಲ್ಯಾಣ ಮಂಟಪ ವಿದ್ಯಾರಣ್ಯ ಸಭಾಂಗಣವನ್ನು ವೀಕ್ಷಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಹೇಶ್ ಭಟ್ ಜೋಶಿ, ಭೀಮ್ ಭಟ್ ಬಸಾಪಟ್ಟಣ, ವೇಣು ಅಳವಂಡಿ, ಶ್ರೀಧರ ಅಳವಂಡಿ, ಪವನ್ ಜೋಶಿ, ಅನಿಲ್ ಭಟ್, ದತ್ತಾತ್ರೇಯ ಹೊಸಳ್ಳಿ ಹಾಗೂ ಶಾರದಾ ಭಜನಾ ಮಂಡಳಿಯ ಸರ್ವ ಸದಸ್ಯರು ಪಾಲ್ಗೊಂಡಿದ್ದರು.
