
Opposition to shoddy work: Contractors face scolding, work halted


ಕಳಪೆ ಕಾಮಗಾರಿಗೆ ವಿರೋಧ: ಗುತ್ತಿಗೆದಾರರಿಗೆ ತರಾಟೆ, ಕೆಲಸ ಸ್ಥಗಿತ
ವರದಿ: ಎಮ್.ಡಿ. ಗೌಸ್
ಗಂಗಾವತಿ: ನಗರದ ಇಸ್ಲಾಂಪುರ್ ಪ್ರದೇಶದ 16ನೇ ವಾರ್ಡಿನಲ್ಲಿ ನಡೆಯುತ್ತಿದ್ದ ಕಾಮಗಾರಿ ಕಳಪೆ ಗುಣಮಟ್ಟದಲ್ಲಿ ನಡೆಯುತ್ತಿದೆ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳು ಗುತ್ತಿಗೆದಾರರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು.
ಸ್ಥಳೀಯರು “ಕಾಮಗಾರಿ ಮಾಡಿದರೆ ಗುಣಮಟ್ಟದಿಂದ ಮಾಡಬೇಕು, ಇಲ್ಲದಿದ್ದರೆ ಕೆಲಸ ನಿಲ್ಲಿಸಿ ಹಿಂದಿರುಗಬೇಕು” ಎಂದು ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು. ಕಾಮಗಾರಿಯಲ್ಲಿ ಮಾನದಂಡಗಳನ್ನು ಪಾಲಿಸಲಾಗುತ್ತಿಲ್ಲ ಎಂಬುದಾಗಿ ಅವರು ಆರೋಪಿಸಿದರು.
ಇದೇ ವೇಳೆ, ಭಾರತೀಯ ಪ್ರಜಾಸೇನೆ ಸಂಘಟನೆಯ ಜಿಲ್ಲಾಧ್ಯಕ್ಷ ನಬೀರಸೂಲ್ ಅವರು ಸಂಬಂಧಿತ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾಹಿತಿ ನೀಡಿ, ಕಳಪೆ ಕಾಮಗಾರಿಯ ಬಗ್ಗೆ ವಿವರಿಸಿದರು. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ತಕ್ಷಣ ಗುತ್ತಿಗೆದಾರರಿಗೆ ಸೂಚನೆ ನೀಡಿ, ಎಸ್ಟಿಮೇಟ್ ಪ್ರಕಾರ ಕಾಮಗಾರಿ ಸರಿಯಾಗಿ ನಡೆಯುತ್ತಿಲ್ಲ ಎಂದು ಸೂಚಿಸಿದರು.
ಅಧಿಕಾರಿಗಳು, ಕಾಮಗಾರಿಯನ್ನು ನಿಯಮಾನುಸಾರ ಹಾಗೂ ಗುಣಮಟ್ಟದಿಂದ ಪುನಃ ಪ್ರಾರಂಭಿಸಲು ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಗುಣಮಟ್ಟದ ಕಾಮಗಾರಿ ಆಗಬೇಕು ಎಂಬ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ.
