
Lice: Opportunity to file objections to rejected proposal under Fasal Bima Yojana
ಕುಷ್ಟಗಿ: ಫಸಲ್ ಭೀಮಾ ಯೋಜನೆಯಡಿ ತಿರಸ್ಕೃತ ಪ್ರಸ್ತಾವನೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ

ಕೊಪ್ಪಳ ಏಪ್ರಿಲ್ 07 (ಕರ್ನಾಟಕ ವಾರ್ತೆ): 2024-25 ನೇ ಸಾಲಿನ ಮುಂಗಾರು, ಹಿಂಗಾರು ಮತ್ತು ಬೇಸಿಗೆ ಹಂಗಾಮಿನ ಫಸಲ್ ಭೀಮಾ(ವಿಮಾ) ಯೋಜನೆಯಡಿಯಲ್ಲಿ ಬೆಳೆ ಸಮಿಕ್ಷೆಯೊಂದಿಗೆ ಹೋಂದಾಣಿಕೆಯಾಗದೆ ತಿರಸ್ಕೃತಗೊಂಡ ಪ್ರಸ್ತಾವನೆಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಕುಷ್ಟಗಿಯ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯಲ್ಲಿ 2024-25ನೇ ಸಾಲಿನಲ್ಲಿ 2024-25ನೇ ಸಾಲಿನ ಮುಂಗಾರು, ಹಿಂಗಾರು ಮತ್ತು ಬೇಸಿಗೆ ಹಂಗಾಮುಗಳಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಬೆಳೆ ಸಮೀಕ್ಷೆಯ ದತ್ತಾಂಶಗಳನ್ನು ಬೆಳೆ ನೋಂದಣಿಯಾದ ಪ್ರಸ್ತಾವನೆಗಳೊಂದಿಗೆ ಹೋಲಿಕೆ ಮಾಡಿ ಹೊಂದಾಣಿಕೆಯಾಗದ ತಿರಸ್ಕೃತಗೊಂಡ ಪ್ರಸ್ತಾವನೆಗಳಿಗೆ ರೈತರು ಆಕ್ಷೇಪಣೆ ಸಲ್ಲಿಸಬಹುದಾಗಿದೆ.
ಪ್ರಸ್ತುತ ಸಂರಕ್ಷಣೆ ತಂತ್ರಾಂಶದನ್ವಯ ಕುಷ್ಟಗಿ ತಾಲೂಕಿಗೆ ಸಂಬಂಧಿಸಿದಂತೆ ಮುಂಗಾರು 1969, ಹಿಂಗಾರು 113 ಹಾಗೂ ಬೇಸಿಗೆಯ 9 ಪ್ರಸ್ತಾವನೆಗಳು ತಿರಸ್ಕೃತಗೊಂಡಿದ್ದು, ವಿಮಾ ಅರ್ಜಿ ತಿರಸ್ಕೃತಗೊಂಡ ಬಗ್ಗೆ ಸಂಬಂಧಪಟ್ಟ ರೈತರ ಆಕ್ಷೇಪಣೆ ಇದ್ದಲ್ಲಿ ಮಾತ್ರ ಮರುಪರಿಶೀಲಿಸಲು, ಬೆಳೆ ವಿಮೆಗೆ ನೋಂದಣಿಯಾಗಿರುವ ಬೆಳೆಯನ್ನು ಬೆಳೆದಿರುವ ಕುರಿತು ಅಗತ್ಯ ದಾಖಲೆಗಳೊಂದಿಗೆ ಇದೇ ಏಪ್ರಿಲ್ 17ರ ರೊಳಗಾಗಿ ಕುಷ್ಟಗಿಯ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಮನವಿಯನ್ನು ಸಲ್ಲಿಸಬೇಕು.
ಮನವಿ ಸಲ್ಲಿಸಲು 2024-25ರ ಪಹಣಿ ಪತ್ರಿಕೆಯಲ್ಲಿ (ಆರ್.ಟಿ.ಸಿ) ವಿಮೆಗೆ ನೋಂದಾಯಿಸಿದ ಬೆಳೆ ನಮೂದಾಗಿರಬೇಕು. ಬೆಂಬಲ ಬೆಲೆ ಪ್ರಯೋಜನ ಪಡೆದಿದ್ದಲ್ಲಿ, ಅದರ ರಶೀದಿ ಮತ್ತು ವಿಮೆಗೆ ನೋಂದಾಯಿತ ಬೆಳೆಯ ಉತ್ಪನ್ನವನ್ನು ಎಪಿಎಂಸಿ ಮಾರುಕಟ್ಟೆಗೆ ಮಾರಾಟ ಮಾಡಿದ ರಶೀದಿಯೊಂದಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕುಷ್ಟಗಿಯ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಬಹುದು ಎಂದು ಕುಷ್ಟಗಿ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
