Breaking News

ಆರ್ಥಿಕ ಕುಸಿತದ ಪ್ರಪಾತದ ಅಂಚಿನಿಂದ ಭಾರತವನ್ನುಮೇಲೆತ್ತಿದವರು ಪ್ರಧಾನಿ ಮೋದಿ – ನಿರ್ಮಲಾಸೀತಾರಾಮನ್

ಬೆಂಗಳೂರು, ಏಪ್ರಿಲ್ 24 ದೀರ್ಘಾವಧಿ ಮುನ್ನೋಟದ ಪ್ರಧಾನಿ ನರೇಂದ್ರ ಮೋದಿ ಅವರ ಕ್ರಿಯಾಶೀಲ ನಡೆ, ದೂರದೃಷ್ಟಿಯ ಕ್ರಮ, ನಿಖರ ಯೋಜನೆಗಳ ಫಲವಾಗಿ ದಶಕದೊಳಗೆ ಐದು ದುರ್ಬಲ ಆರ್ಥಿಕತೆಗಳಿಂದ ಹೊರಬಂದು ಭಾರತವು ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತಡಯಾಗಿ ಹೊರಹೊಮ್ಮಲು ಸಾಧ್ಯವಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಪಾದಿಸಿದ್ದಾರೆ.
ಬೆಂಗಳೂರಿನ ಕಾಸಿಯಾ ಸಭಾಂಗಣದಲ್ಲಿ, ಇನ್ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೆಟರೀಸ್‌ ಆಫ್‌ ಇಂಡಿಯಾ (ಐಸಿಎಸ್ಐ) ಮತ್ತು ಇನ್ಸ್ಟಿಟ್ಯೂಟ್ ಆಫ್ ಕಾಸ್ಟ್ ಅಂಡ್‌ ಮ್ಯಾನೇಜ್ಮೆಂಟ್ (ಐಸಿಎಂಎಐ) ಸದಸ್ಯರನ್ನುದ್ದೇಶಿಸಿ ಮಾತಮಾಡಿದ ಅವರು, 2014 ರಲ್ಲಿ ಎನ್ ಡಿ ಎ ಸರ್ಕಾರ ಹಿಂದಿನ ಯುಪಿಎ ಸರ್ಕಾರದಿಂದ ಕೆಟ್ಟ ಪರಂಪರೆ ಪಡೆಯಿತು. ಆದರೆ ಆ ಯುಪಿಎ ಸರ್ಕಾರಕ್ಕೆ ವಾಜಪೇಯಿ ಅವರು 2004 ರಲ್ಲಿ ಅಧಿಕಾರ ತೊರೆದಾಗಿನ ಅತ್ಯುತ್ತಮ ಪರಂಪರೆ ದೊರೆತಿತ್ತು ಎಂದರು.
ವಾಜಪೇಯಿಯವರು ಪ್ರಧಾನಿ ಆಗಿದ್ದ ಕೊನೆಯ ಅವಧಿಯಾದ 2003-2004 ರಲ್ಲಿ ದೇಶವು ಶೇಕಡ 8 ರಷ್ಟು ಪ್ರಗತಿಗೆ ಸಾಕ್ಷಿಯಾಗಿತ್ತು ಎಂದು ಅವರು ಹೇಳಿದರು. ಮಾರ್ಚ್ 2004 ರವರೆಗೆ ಸರಾಸರಿ ಹಣದುಬ್ಬರ ಶೇಕಡ 4 ರಷ್ಟಿತ್ತು ಮತ್ತು ವಿದೇಶಿ ವಿನಿಮಯ ಮೀಸಲು ಆರೊಗ್ಯಕರವಾಗಿತ್ತು. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಏಪ್ರಿಲ್ 2004 ರಲ್ಲಿ ಅಧಿಕಾರಕ್ಕೆ ಬಂದ ಮೇಲೆ ಇಳಿಕೆಯ ಹಾದಿ ಆರಂಭವಾಯಿತು ಎಂದು ಅವರು ಅಭಿಪ್ರಾಯಪಟ್ಟರು.
ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಹಿಂದಿನ ಸರ್ಕಾರದ ಪ್ರಗತಿಯಿಲ್ಲದ ಅಥವಾ ಕುಂಠಿತ ಪ್ರಗತಿಯ ಸ್ಥಿತಿಯನ್ನು ಪಡೆಯಬೇಕಾಯಿತು. ಜಿಡಿಪಿ ಶೇಕಡ 5 ಕ್ಕಿಂತ ಕಡಿಮೆ ಇದ್ದು, ಎರಡಂಕಿಯ ಹಣದುಬ್ಬರದ ಸ್ಥಿತಿ ಇತ್ತು..ವಿಪರೀತ ನಿಯಮಗಳು, ಸುಲಲಿತವಲ್ಲದ ಕಡ್ಡಾಯಗಳು ಮತ್ತು ಇನ್ಸ್ ಪೆಕ್ಟರ್ ರಾಜ್ ನಂತಹ ವ್ಯವಸ್ಥೆ ಇತ್ತು. ಖಜಾನೆ ಟೊಳ್ಳಾಗಿತ್ತು, ನೀತಿ ನಿರೂಪಣೆಗಳು ದುರ್ಬಲವಾಗಿತ್ತು. ಬಹುತೇಕ 1991 ರ ಹಿಂದಿನ ಸ್ಥಿತಿಗೆ ತಲುಪಬೇಕಾಗಬಹುದಾದ ಅಪಾಯದಲ್ಲಿತ್ತು. ಆರ್ಥಿಕತೆಯು ಅವ್ಯವಸ್ಥೆಯ ಆಗರವಾಗಿತ್ತು. ಅದೊಂದು ಕತ್ತಲಿನ ದಶಕವಾಗಿತ್ತು, ಭಾರತವನ್ನು ಐದು ದುರ್ಬಲ ರಾಷ್ಟ್ರಗಳ ಪೈಕಿ ಒಂದು ಎಂದು ಪರಿಗಣಿಸಲಾಗಿತ್ತು. 2014 ರಲ್ಲಿ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಅಧಿಕಾರ ಸ್ವೀಕರಿಸಿದಾಗ, ಭಾರತ ಇಂತಹ ದಯನೀಯ ಸ್ಥಿತಿಯಲ್ಲಿತ್ತು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಒಂದು ದಶಕದ ಉತ್ತಮ ಆಡಳಿತದ ಬಳಿಕ, ಈಗ ಭಾರತ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದ್ದು, ಅತಿ ಶೀಘ್ರದಲ್ಲೇ ಐದು ಲಕ್ಷ ಕೋಟಿ ಆರ್ಥಿಕತೆಯ ರಾಷ್ಟ್ರವಾಗಲಿದೆ ಎಂದು ಹೇಳಿದರು. ಇಂತಹ ಗಮನಾರ್ಹ ಸಾಧನೆ ಸಾಧ್ಯವಾಗಿದ್ದು, ದೀರ್ಘಾವಧಿ ಮುನ್ನೋಟದ ಸೂಕ್ತ ಯೋಜನೆಯಿಂದ ಜಾರಿಗೆ ಬಂದ ಸದೃಢ, ಜನ-ಸ್ನೇಹಿ, ವ್ಯಾಪರ-ಸ್ನೇಹಿ ನೀತಿಗಳಿಂದಾಗಿ ಎಂದು ವಿತ್ತ ಸಚಿವರು ವಿವರಿಸಿದರು.
ಅಸಮಂಜಸ ನೀತಿ ನಿಯಮಗಳ ಶಾಪವಿಲ್ಲದ ರಾಜಕೀಯ ಸ್ಥಿರತೆ, ನವೀನ ಆರ್ಥಿಕ ನೀತಿಗಳು, ಸಂಪೂರ್ಣ ಪಾರದರ್ಶಕತೆ ಮತ ಸುಲಲಿತ ವ್ಯಾಪಾರ ಪರಿಸರಗಳೇ ಈ ಆರ್ಥಿಕ ಚೇತರಿಕೆಗೆ ಪ್ರಮುಖ ಕಾರಣ ಎಂದು ಹೇಳಿದ ಅವರು, ಅಭಿವೃದ್ಧಿಯು ತನ್ನಿಂದ ತಾನೇ ಆಗಿವುದಿಲ್ಲ, ಕ್ರಿಯಾಶೀಲ ಪ್ರಯತ್ನಗಳಿಲ್ಲದೇ ಆಗುವುದಿಲ್ಲ ಎಂಬುದನ್ನು ಪ್ರಧಾನಮಂತ್ರಿ ಚೆನ್ನಾಗಿ ಅರಿತಿದ್ದರು ಎಂದರು.
ಬಳಿಕ ಸಂವಾದದಲ್ಲಿ ಉತ್ತರಿಸಿದ ಅವರು, ವ್ಯವಸ್ಥೆಯು ಸರಳವಾಗಿರಬೇಕು ಮತ್ತು ಕಡ್ಡಾಯ ಪಾಲನೆಗಳನ್ನು ಇನ್ನಷ್ಟು ಸುಲಭ ಮಾಡಬೇಕು ಎಂಬುದು ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದ ಗುರಿಯಾಗಿದೆ. ತಮ್ಮ ಸರ್ಕಾರ ತನ್ನ ಕ್ರಾಂತಿಕಾರಕ ಪ್ರಕ್ರಿಯೆಯ ಭಾಗವಾಗಿ ಆರ್ಥಿಕತೆ ಮ ಮತ್ತು ಕಾರ್ಪೊರೇಟ್ ವಲಯಗಳಲ್ಲಿನ 1,500 ಚಾಲ್ತಿಯಲ್ಲಿಲ್ಲದ ನಿಯಮಗಳನ್ನು ತೆಗೆದು ಹಾಕಿದೆ ಎಂದು ತಿಳಿಸಿದರು.
ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಹಣಕಾಸು ಸಚಿವರು, “ಸುಧಾರಣೆ ನಿಂತ ನೀರಲ್ಲ. ಅದು ನಿರಂತರ ಪ್ರಕ್ರಿಯೆ” ಎಂದರು.

ಭಾರತ ಮತ್ತು ಚೀನಾ ದೇಶಗಳ ಆರ್ಥಿಕತೆ ನಡುವಿನ ಹೋಲಿಕೆ ಬಗೆಗಿನ ಪ್ರಶ್ನೆಗೆ ಸಚಿವರು, ಚೀನಾ ದೇಶದ ಆರ್ಥಿಕ ನಿಧಾನಗತಿಯು ಜಾಗತಿಕ ಸನ್ನಿವೇಶದಲ್ಲಿ ಭಾರತಕ್ಕೆ ಅವಕಾಶ ಕೊಡಬಹುದು. ಆದರೆ ಮಾನವ ಸಂಪನ್ಮೂಲ ನೀತಿಯ ವಿಷಯವಾಗಲೀ ಅಥವಾ ಆರ್ಥಿಕ ಉಪಕ್ರಮಗಳ ವಿಚಾರವಾಗಲೀ ಅಥವಾ ವಿದೇಶೀ ವಿನಿಮಯ ನೀತಿಗಳ ವಿಷಯವೇ ಆಗಿ, ಭಾರತ ಈಗಾಗಲೇ ಉತ್ತುಂಗ ಸ್ಥಿತಿ ತಲುಪಿದೆ ಎಂದು ಉತ್ತರ ನೀಡಿದರು.
ಐಸಿಎಸ್ಐ ನ ಅಧ್ಯಕ್ಷ ಬಿ.ನರಸಿಂಹನ್, ಐಸಿಎಂಎಐನ ಅಧ್ಯಕ್ಷ ಅಶೋಕ್ ಜಿ.ದಲವಾಡಿ, ತಮ್ಮ ತಮ್ಮ ಅಧ್ಯಕ್ಷೀಯ ಭಾಷಣ ಮಾಡಿದರು. ಪ್ರದೀಪ್ ಕುಮಾರ್ ಆರಂಭಿಕ ನುಡಿಗಳನ್ನು ನುಡಿದಿದ್ದು, ವೆಂಕಟ ಸುಬ್ಬರಾವ್ ನೆರೆದಿದ್ದವರನ್ನು ಸ್ವಾಗತಿಸಿದರು.

About Mallikarjun

Check Also

BJP ಸೋಲಿಸಿ ಭಾರತ ಉಳಿಸಿ-ಎಸ್.ಎಫ್.ಐ

ಹೊಸಪೇಟೆ: ಇಂದು ಭಾರತದಲ್ಲಿ ಪ್ರಜಾಪ್ರಭುತ್ವ ರಕ್ಷಣೆ ಮಾಡುವ ಸಂದರ್ಭದಲ್ಲಿ ನಾವಿದ್ದೇವೆ. ಇದಕ್ಕೆ ಬಹುಮುಖ್ಯ ಕಾರಣವೇ ಸಾರ್ವತ್ರಿಕ ಲೋಕಸಭಾ ಚುನಾವಣೆ ಆದ್ದರಿಂದ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.