Breaking News

ಕೊರೊನಾ ತಡೆಗೆ ಸನ್ನದ್ಧರಾಗಲುಅಧಿಕಾರಿಗಳಿಗೆ ಸಚಿವರ ಸೂಚನೆ

Minister’s instruction to officials to prepare for Corona

ಜಾಹೀರಾತು

ಕೊಪ್ಪಳ ಡಿಸೆಂಬರ್ 23 (ಕರ್ನಾಟಕ ವಾರ್ತೆ): ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಡಿಸೆಂಬರ್ 23ರಂದು ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯು ತೆಗೆದುಕೊಂಡ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಒಂದು ಗಂಟೆಗು ಹೆಚ್ಚು ಕಾಲ ಅಧಿಕಾರಿಗಳೊಂದಿಗೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದ ಸಚಿವರು, ಕೋವಿಡ್-19ನೆ ತಳಿಯಾದ ಒಮಿಕ್ರಾನ್ ಸಬ್‌ವೇರಿಯಂಟ್ ಜೆಎನ್-1 ಎನ್ನುವ ವೈರಾಣು ಈಗಾಗಲೇ ಸಿಂಗಪುರ, ಇಂಡೋನೇಶಿಯಾ, ಮಲೇಶಿಯಾ ಮತ್ತು ಚೈನಾ ದೇಶಗಳಲ್ಲಿ ಕಾಣಿಸಿಕೊಂಡಿದೆ. ಈಗಾಗಲೇ ಗೋವಾ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಪ್ರಕರಣಗಳು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಕೊರೊನಾ ವೈರಾಣು ಸಮುದಾಯದಲ್ಲಿ ಹರಡುವ ಸಾಧ್ಯತೆ ಇದ್ದು, ಇದನ್ನು ತಡೆಗಟ್ಟಲು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯು ಸನ್ನದ್ಧವಾಗಬೇಕು ಎಂದು ನಿರ್ದೇಶನ ನೀಡಿದರು. ಕೊರೊನಾ ಬಗ್ಗೆ ಯಾರು ಕೂಡ ನಿರ್ಲಕ್ಷö್ಯ ಮಾಡಬಾರದು. ಸಂಶಯಾಸ್ಪದ ಪ್ರಕರಣಗಳು ಕಂಡುಬಂದಲ್ಲಿ ವಿಳಂಬ ಮಾಡದೇ ಪರೀಕ್ಷೆಗೊಳಪಡಿಸುವ ಕಾರ್ಯವನ್ನು ನಿಯಮಿತವಾಗಿ ನಡೆಸಬೇಕು ಎಂದರು.
ಆಸ್ಪತ್ರೆಗಳಲ್ಲಿ ಔಷಧಿ ಸೇರಿದಂತೆ ಪಿಪಿಇ ಕಿಟ್ಸ್, ಎನ್95 ಮಾಸ್ಕಗಳ ಕೊರತೆಯಾಗಬಾರದು. ಈ ನಿಟ್ಟಿನಲ್ಲಿ ಪತ್ರ ಬರೆದು ಅಗತ್ಯ ಪ್ರಮಾಣದಲ್ಲಿ ಔಷಧಿ, ಪಿಪಿಇ ಕಿಟ್, ಮಾಸ್ಕ್, ಹ್ಯಾಂಡ್ ಗ್ಲೌಸ್ ಸೇರಿದಂತೆ ಎಲ್ಲ ಬಗೆಯ ವೈದ್ಯಕೀಯ ಪರಿಕರಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯತೆ ಇರುವಂತೆ ನೋಡಿಕೊಳ್ಳಬೇಕು ಎಂದು ಸಚಿವರು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಹಿರಿಯರಿಗೆ ಸಂದೇಶ ರವಾನಿಸಿ: ಜಿಲ್ಲೆಯ ಹಿರಿಯ ನಾಗರಿಕರಿಗೆ ಈ ವೇಳೆ ಮಹತ್ವದ ಸಂದೇಶ ಕೂಡಲೇ ರವಾನೆಯಾಗಬೇಕು. 60 ವರ್ಷ ಮೇಲ್ಪಟ್ಟವರು, ಎದೆಹಾಲುಣಿಸುವ ತಾಯಂದಿರು, ಗರ್ಭಿಣಿಯರು ಮತ್ತು ಕಿಡ್ನಿ, ಹೃದಯ, ಲೀವರ್, ಕ್ಯಾನ್ಸರ್ ಸೇರಿದಂತೆ ನಾನಾ ಗಂಭೀರ ಕಾಯಿಲೆಗಳಿಂದ ಬಳಲುವವರು ಹೊರಾಂಗಣ ಪ್ರದೇಶಗಳಿಗೆ ತೆರಳಿದಾಗ ಕಡ್ಡಾಯ ಮಾಸ್ಕ ಧರಿಸಬೇಕು. ಅಗತ್ಯ ಗಾಳಿ ಬೆಳಕು ಇಲ್ಲದ ಮತ್ತು ಹೆಚ್ಚು ಜನ ಸಂದಣಿ ಇರುವ ಪ್ರದೇಶಗಳಿಗೆ ತೆರಳಕೂಡದು ಎನ್ನುವ ಸಂದೇಶವು ಆರೋಗ್ಯ ಇಲಾಖೆಯಿಂದ ಹೋಗಬೇಕು ಎಂದು ಸಚಿವರು ಇದೆ ವೇಳೆ ಸಲಹೆ ಮಾಡಿದರು.
ಶಾಸಕರಾದ ರಾಘವೇಂದ್ರ ಹಿಟ್ನಾಳ ಅವರು ಮಾತನಾಡಿ, ಜ್ವರ ಕೆಮ್ಮ ನೆಗಡಿ ಇತ್ಯಾದಿ ಉಸಿರಾಟದ ತೊಂದರೆ ಸೋಂಕಿನ ಲಕ್ಷಣಗಳನ್ನು ಹೊಂದಿದವರು ತಕ್ಷಣವೇ ಅಗತ್ಯ ವೈದ್ಯಕೀಯ ಸಲಹೆ ಪಡೆಯಬೇಕು. ಮೂಗು ಬಾಯಿ ಮುಚ್ಚುವಂತೆ ಮಾಸ್ಕ ಧರಿಸಬೇಕು. ವೈಯಕ್ತಿಕ ಶುಚಿತ್ವ, ಆಗಾಗ್ಗೆ ಕೈ ತೊಳೆಯುವುದು ಇತ್ಯಾದಿಗಳನ್ನು ಸಾರ್ವಜನಿಕರು ಈ ಸಂದರ್ಭದಲ್ಲಿ ಪಾಲನೆ ಮಾಡಬೇಕು ಎನ್ನುವಂತಹ ಅಂಶಗಳ ಬಗ್ಗೆ ಆರೋಗ್ಯ ಇಲಾಖೆಯಿಂದ ಜನಜಾಗೃತಿ ಮೂಡಿಸುವ ಕಾರ್ಯ ಅತೀ ತುರ್ತಾಗಿ ನಡೆಯುವಂತಾಗಬೇಕು ಎಂದು ಸಲಹೆ ಮಾಡಿದರು.
ಕೋವಿಡ್ ಹೊಸ ತಳಿಯಿಂದಾಗಿ ಜಿಲ್ಲೆಯಲ್ಲಿ ಯಾವುದೇ ರೀತಿಯ ಸಾವಿನ ಪ್ರಕರಣಗಳು ವರದಿಯಾಗಿಲ್ಲ. ಪಕ್ಕದ ರಾಜ್ಯದಲ್ಲಿ ಕೇಸ್‌ಗಳು ಕಂಡು ಬಂದಿದ್ದರಿಂದ ಮುಂಜಾಗ್ರತೆ ವಹಿಸಲು ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ. ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಅಂತವರನ್ನು ಕಡ್ಡಾಯ ಪರೀಕ್ಷೆಗೊಳಪಡಿಸಿ ಅವಶ್ಯಕತೆ ಇದ್ದಲ್ಲಿ ಹೋಮ್ ಐಸೋಲೇಶನ್‌ಗೆ ಕಳುಹಿಸಲು ಕ್ರಮ ವಹಿಸಬೇಕು. ರಾಜ್ಯ ಸರ್ಕಾರವು ಕಾಲಕಾಲಕ್ಕೆ ಹೊರಡಿಸುವ ಮಾರ್ಗಸೂಚಿಯನುಸಾರ ಕಾರ್ಯ ಪ್ರವೃತ್ತರಾಗಬೇಕು ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ತಿಳಿಸಿದರು.
ಕೊಪ್ಪಳ ಜಿಲ್ಲೆಗೆ ಪ್ರತಿನಿತ್ಯ 70 ಪರೀಕ್ಷೆ ನಡೆಸುವ ಗುರಿ ನಿಗದಿಪಡಿಸಿದ್ದಾರೆ. 10 ದಿನಗಳಿಗೆ ಆಗುವಷ್ಟು ಪರಿಕರಗಳನ್ನು ನೀಡಿದ್ದಾರೆ. ಕಳೆದ 10 ದಿನಗಳಲ್ಲಿ 58 ರ‍್ಯಾಟ್ ಮತ್ತು 64 ಆರ್‌ಟಿಪಿಸಿಆರ್ ಸೇರಿ ಒಟ್ಟು 112 ಸ್ಯಾಂಪಲ್ ಕಲೆಕ್ಷನ್ ಮಾಡಲಾಗಿದೆ. ಟ್ರಿಪಲ್ ಲೇರ್ ಮಾಸ್ಕ, ಎನ್-95 ಮಾಸ್ಕ, ಪಿಪಿಇ ಕಿಟ್ಸ್, ಎನ್‌ಐವಿ ಮಾಸ್ಕ, ಹ್ಯಾಂಡ್ ಸ್ಯಾನಿಟೈಜರ್, ಆಕ್ಸಿಮೀಟರ್, ಹ್ಯಾಂಡ್ ಗ್ಲೌಸ್ ಸೇರಿದಂತೆ ಅವಶ್ಯಕ ವೈದ್ಯಕೀಯ ಪರಿಕರಗಳ ಲಭ್ಯತೆಗೆ ಒತ್ತು ನೀಡಲಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ವರದಿ ಮಾಡಿರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.
ಕೊಪ್ಪಳ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳಿಗೆ 80 ಹಾಸಿಗೆಗಳ ವ್ಯವಸ್ಥೆ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಒಟ್ಟು 360 ಹಾಸಿಗೆಗಳು ಸೇರಿ ಒಟ್ಟು 440 ಹಾಸಿಗೆಗಳು ಆಕ್ಸಿಜನ್ ಸಹಿತ ಲಭ್ಯ ವಿರುತ್ತವೆ. ಆಕ್ಸಿಜನ್ ನಿರ್ವಹಣೆಗೆ 4 ಪಿಎಸ್‌ಎ ಪ್ಲಾಂಟಗಳು, 513 ಜಂಬೋ ಆಕ್ಸಿಜನ್ ಸಿಲಿಂಡರಗಳು, 204 ಬಿಟೈಪ್ ಸಿಲಿಂಡರ್, 11 ಡುರಾ ಆಕ್ಸಿಜನ್ ಸಿಲಿಂಡರಗಳ ವ್ಯವಸ್ಥೆ ಇರುತ್ತದೆ. ಜಿಲ್ಲಾಸ್ಪತ್ರೆ ತಾಲೂಕು ಆಸ್ಪತ್ರೆಗಳು ಸೇರಿ ವಿವಿಧ 139 ವೆಂಟಿಲೇಟರ್ ವ್ಯವಸ್ಥೆ ಇದೆ. ಜಿಲ್ಲೆಯಲ್ಲಿ ಔಷಧಿಗಳ ಕೊರೆತಯಾಗದಂತೆ ಕೋವಿಡ್ ನಿರ್ವಹಣೆಗೆ ಬೇಕಿರುವ ಔಷಧಿಗಳನ್ನು ಕಾಯ್ದಿರಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾಡಿ ಡಾ.ಲಿಂಗರಾಜ ಅವರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ, ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ ಕಡಿ, ಉಪ ವಿಭಾಗಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯ ನಿರ್ದೇಶಕರಾದ ಡಾ.ಇಟಗಿ, ತಹಸೀಲ್ದಾರ ವಿಠ್ಠಲ್ ಚೌಗಲಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮತ್ತು ಇನ್ನಿತರರು ಇದ್ದರು.

About Mallikarjun

Check Also

ಕಮಲ್ ಹಾಸನ್ ಕ್ಷಮೆ ಕೇಳುವವರೆಗೂಅವರ ಚಿತ್ರಗಳನ್ನು ರಾಜ್ಯದಲ್ಲಿ ಬ್ಯಾನ್ ಮಾಡಬೇಕು: ಬಳ್ಳಾರಿ ರಾಮಣ್ಣ ನಾಯಕ

Kamal Haasan’s films should be banned in the state until he apologizes: Ballari Ramanna Nayak …

Leave a Reply

Your email address will not be published. Required fields are marked *