Mass marriages help curb wasteful expenditure – Paranna Munavalli
ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಸಾಮೂಹಿಕ ವಿವಾಹಗಳು ಪೂರಕ–ಪರಣ್ಣ ಮುನವಳ್ಳಿ

ಶ್ರೀ ಅಖಂಡೇಶ್ವರ ದೇವಸ್ಥಾನದ 21ನೇ ವಾರ್ಷಿಕೋತ್ಸವ ಹಾಗೂ ಜಾತ್ರಾ ಮಹೋತ್ಸವದಲ್ಲಿ 9 ಜೋಡಿಗಳ ಸಾಮೂಹಿಕ ವಿವಾಹ


ಗಂಗಾವತಿ: ಮಠ–ಮಂದಿರಗಳು ಹಾಗೂ ಗುರು ಪರಂಪರೆಯ ಸಾನಿಧ್ಯದಲ್ಲಿ ನಡೆಯುವ ಸಾಮೂಹಿಕ ವಿವಾಹಗಳು ಮದುವೆ ಸಂದರ್ಭದಲ್ಲಿ ಉಂಟಾಗುವ ದುಂದು ವೆಚ್ಚಕ್ಕೆ ಕಡಿವಾಣ ಹಾಕುವುದರ ಜೊತೆಗೆ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ನೆರವಾಗುತ್ತವೆ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ನಗರಸಭೆಯ 27ನೇ ಹಾಗೂ ಪ್ರಸ್ತುತ 31ನೇ ವಾರ್ಡ್ನಲ್ಲಿರುವ ಶ್ರೀ ಅಖಂಡೇಶ್ವರ ದೇವಸ್ಥಾನದ 21ನೇ ವಾರ್ಷಿಕೋತ್ಸವ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರಾವಣ ಮಾಸದ ಪ್ರಯುಕ್ತ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಾಮೂಹಿಕ ವಿವಾಹಗಳು ಸಮಾಜದಲ್ಲಿ ಸರಳ ವಿವಾಹ ಪದ್ಧತಿಯನ್ನು ಉತ್ತೇಜಿಸುವುದರ ಜೊತೆಗೆ ಮದುವೆ ಹೆಸರಿನಲ್ಲಿ ನಡೆಯುವ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಲು ಸಹಕಾರಿಯಾಗಿವೆ. ಧಾರ್ಮಿಕ ಕ್ಷೇತ್ರಗಳ ಸಾನಿಧ್ಯದಲ್ಲಿ ನಡೆಯುವ ಇಂತಹ ವಿವಾಹಗಳಿಂದ ನೂತನ ದಂಪತಿಗಳಿಗೆ ದೇವರ ಆಶೀರ್ವಾದ ದೊರೆಯುವುದರೊಂದಿಗೆ ಸಮಾಜದ ಸಹಕಾರವೂ ಲಭಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ 9 ಜೋಡಿಗಳು ಸಾಂಪ್ರದಾಯಿಕ ವಿಧಿ–ವಿಧಾನಗಳೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನೂತನ ದಂಪತಿಗಳು ಪರಸ್ಪರ ಪ್ರೀತಿ, ವಿಶ್ವಾಸ, ಗೌರವ ಹಾಗೂ ಹೊಂದಾಣಿಕೆಯಿಂದ ಜೀವನ ಸಾಗಿಸುವಂತಾಗಲಿ. ಭಗವಂತನು ಅವರಿಗೆ ಸುಖ, ಶಾಂತಿ, ಸಮೃದ್ಧಿ ಹಾಗೂ ಉತ್ತಮ ಆರೋಗ್ಯ ಕರುಣಿಸಲಿ ಎಂದು ಪರಣ್ಣ ಮುನವಳ್ಳಿ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಶ್ರೀ ಅಖಂಡೇಶ್ವರ ದೇವರಿಗೆ ವಿಶೇಷ ಪೂಜೆ, ಧಾರ್ಮಿಕ ವಿಧಿ–ವಿಧಾನಗಳು ಹಾಗೂ ವಿವಿಧ ಕಾರ್ಯಕ್ರಮಗಳು ನೆರವೇರಿದವು. ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಸಮಾರಂಭದಲ್ಲಿ ಮಾದಿಗ ಸಮಾಜದ ಮುಖಂಡರಾದ ಹುಲಿಗೇಶ ದೇವರಮನಿ, ಸಣ್ಣ ಹುಲಗಮ್ಮ, ದ್ಯಾಬಣ್ಣ ಮಾಸ್ಟರ್, ದೇವಪ್ಪ ದೇವರಮನಿ, ಭಗವಂತಪ್ಪ, ಅಯೋಗ್ಯ, ಪರಶುರಾಮ್ ಮೇಸ್ತ್ರಿ, ಸಂಜೀವಪ್ಪ, ಹುಲುಗಪ್ಪ, ಮಂಜುನಾಥ, ದುರ್ಗೇಶ ಸೇರಿದಂತೆ ಸಮಾಜದ ಮುಖಂಡರು ಹಾಗೂ ಸಮಾಜ ಬಾಂಧವರು ಭಾಗವಹಿಸಿದ್ದರು.

