
Labor Day: Legal awareness assistance in Huvinal village

ಕಾರ್ಮಿಕ ದಿನಾಚರಣೆ: ಹೂವಿನಾಳ ಗ್ರಾಮದಲ್ಲಿ ಕಾನೂನು ಅರಿವು ನೆರವು

ಕೊಪ್ಪಳ ಮೇ 05 (ಕರ್ನಾಟಕ ವಾರ್ತೆ): ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಅಂಗವಾಗಿ ಕೊಪ್ಪಳ ತಾಲೂಕಿನ ಹೂವಿನಾಳ ಗ್ರಾಮದ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಇತ್ತೀಚೆಗೆ ಕಾನೂನು ಅರಿವು ನೆರವು ಕಾರ್ಯಕ್ರಮ ನಡೆಯಿತು.
ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ ಎಸ್. ದರಗದ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿ, ಅಂತರಾಷ್ಟ್ರೀಯ ಕಾರ್ಮಿಕ ದಿನ ಎನ್ನುವ ಬದಲು ಶ್ರಮಯೋಗಿ ದಿನ ಎಂದು ಕರೆಯುವುದು ಹೆಚ್ಚು ಸೂಕ್ತ. ಹಿಂದೆ ಶರಣಾಧಿ ಪ್ರಮಥರು ವಾಣಿಗಳಂತೆ ಕಾಯಕದ ಮಹತ್ವವನ್ನು ಬಸವಣ್ಣನವರು ಕಾಯಕವೇ ಕೈಲಾಸ ಎಂದು ನುಡಿದು ಕಾಯಕದ ಮಹತ್ವವನ್ನು ಸಾರಿದ್ದಾರೆ. ಅದೇ ರೀತಿ `ನೀನು ಅಧ್ಯಕ್ಷನಾಗಿರು, ಚಮ್ಮಾರನಾಗಿರು, ಕಮ್ಮಾನಾಗಿರು, ಎನೇ ಆಗಿದ್ದರೂ ಮೊದಲು ಶ್ರಮಯೋಗಿ ಆಗಿ ಕೆಲಸಗಾರನಾಗು, ಕಾರ್ಮಿಕನಾಗಿರು ಎಂದು ಡಾ. ಬಿ.ಆರ್.ಅಂಬೇಡ್ಕರ್ ರವರು ಹೇಳಿದ್ದಾರೆ. ಹಾಗಾಗಿ ಶ್ರಮಿಕವರ್ಗ ದೇಶದ ಅಭಿವೃದ್ಧಿ, ಉನ್ನತಿಗೆ ಮುನ್ನುಡಿಯಾಗಿದ್ದಾರೆ ಎಂದರು.
ಕಲ್ಯಾಣ ಕರ್ನಾಟಕ ಜಿಲ್ಲೆಗಳ ನೋಂದಾಯಿತ ಕಾರ್ಮಿಕ ಸಂಘಗಳ ಒಕ್ಕೂಟ ಅಧ್ಯಕ್ಷರಾದ ರಮೇಶ ಘೋರ್ಪಡೆ ಅವರು ಮಾತನಾಡಿ, ಕಾರ್ಮಿಕ ಇಲಾಖೆಯಿಂದ ನಮ್ಮ ಕಾರ್ಮಿಕರಿಗೆ ಒಳ್ಳೆಯ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇದರಿಂದ ನಮ್ಮ ಕಾರ್ಮಿಕರು ಉತ್ತಮ ಜೀವನ ಕಟ್ಟಿಕೊಳ್ಳಲು ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಲು ಸಾಧ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾರ್ಮಿಕ ನಿರೀಕ್ಷಕರಾದ ಮಂಜುಳಾ ವಿಶ್ವನಾಥ ಅವರು ಮಾತನಾಡಿ, ಪಾಶ್ಚಿಮಾತ್ಯ ದೇಶಗಳಲ್ಲಿ ಕಾರ್ಮಿಕರ ದಂಗೆಗಳು 1883 ರಲ್ಲಿ ಪ್ರಾರಂಭವಾದವು. ಚಿಕ್ಕಾಗೋದಲ್ಲಿ ಕಾರ್ಮಿಕ ಸಂಘಟನೆಗಳು ಹೋರಾಟವನ್ನು ಕೆಲಸದ ಅವಧಿ ನಿರ್ಧರಿಸುವ ಸಲುವಾಗಿ ಮತ್ತು ಅನೇಕ ಶೋಷಣೆಗಳ ವಿರುದ್ಧ ಹೋರಾಟ ಪ್ರಾರಂಭಿಸಿದರು. 1886ರಲ್ಲಿ 8 ಗಂಟೆಗಳ ಕೆಲಸದ ಅವಧಿಯನ್ನು ನಿರ್ಣಯಿಸಲಾದ ಪ್ರಯುಕ್ತ ಮೇ 1ರ 1886 ರಿಂದ ಜಾಗತಿಕ ಮಟ್ಟದಲ್ಲಿ ಅಂತರಾಷ್ಟ್ರೀಯ ಕಾರ್ಮಿಕ ದಿನವನ್ನು ಆಚರಣೆ ಮಾಡುತ್ತಾ ಬರಲಾಯಿತು. ಭಾರತದಲ್ಲಿ 1937 ರಲ್ಲಿ ಚೆನ್ನೈನಲ್ಲಿ ಕಾರ್ಮಿಕ ಸಂಘಟನೆಗಳು ಹೋರಾಟದ ನೆನಪಿಗಾಗಿ ಭಾರತದಲ್ಲಿಯೂ ಕೂಡಾ ಕಾರ್ಮಿಕ ದಿನ ಆಚರಿಸುತ್ತಾ ಬರಲಾಯಿತು. ಈ ದಿನದಂದು ಕಾರ್ಮಿಕರ ಕುರಿತು ಕಾರ್ಯನಿರ್ವಹಿಸಿದ ಕಾರ್ಮಿಕ ಪ್ರತಿನಿಧಿ ಸಂಘಟನೆಗಳು, ಸಂಘ ಸಂಸ್ಥೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡಲು ಆಚರಿಸುತ್ತಾ ಬರುತ್ತಿದೆ ಎಂದು ಕಾರ್ಮಿಕ ದಿನ ಇತಿಹಾಸ ತಿಳಿಸುತ್ತಾ ಕಾರ್ಮಿಕ ಇಲಾಖೆಯಲ್ಲಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಅಡಿ ಕಟ್ಟಡಕ್ಕೆ ಸಂಬAಧಿಸಿದAತೆ ಕೆಲಸ ನಿರ್ವಹಿಸುತ್ತಿರುವವರು ನೋಂದಣಿಯಾಗಲು, ನೋಂದಣಿ ಪೂರ್ವದ 12 ತಿಂಗಳಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳಲ್ಲಿ ಕನಿಷ್ಠ 90 ದಿನಗಳು ಕೆಲಸ ನಿರ್ವಹಿಸಿರಬೇಕು. 18 ರಿಂದ 60 ವರ್ಷದೊಳಗಿರಬೇಕು. ಉದ್ಯೋಗ ದೃಢೀಕರಣ ಪತ್ರ ಅರ್ಜಿದಾರ ಹಾಗೂ ಅವಲಂಬಿತರ ಆಧಾರ ಕಾರ್ಡ್ ಪ್ರತಿ, ಅರ್ಜಿದಾರರ ಬ್ಯಾಂಕ್ ಪಾಸ್ಬುಕ್ ಪ್ರತಿ, ಅರ್ಜಿದಾರರ ಆಧಾರ್ ಕಾರ್ಡ್ಗೆ ಲಿಂಕ್ ಆಗಿರುವ ದೂರವಾಣಿ ಸಂಖ್ಯೆ, ಹೊಂದಿರಬೇಕೆಂದು ತಿಳಿಸಿದರು.
ಇದಲ್ಲದೇ ಮಂಡಳಿಯ ವತಿಯಿಂದ ನೋಂದಾಯಿತ ಫಲಾನುಭವಿಗಳಿಗೆ ನೀಡಲಾಗುವ ಸೌಲಭ್ಯಗಳಾದ, ಮದುವೆ ಧನಸಹಾಯ, ಹೆರಿಗೆ ಧನಸಹಾಯ, ಅಂತ್ಯಕ್ರಿಯೆ ವೆಚ್ಚ, ಶೈಕ್ಷಣಿಕ ಧನಸಹಾಯ, ವೈದ್ಯಕೀಯ ಸಹಾಯಧನ, ಅಪಘಾತ ಪರಿಹಾರ, ಪ್ರಮುಖ ವೈದ್ಯಕೀಯ ಸಹಾಯಧನ, ತಾಯಿ ಮಗು ಸಹಾಯ ಹಸ್ತ, ಪಿಂಚಣಿ ಸೌಲಭ್ಯಗಳನ್ನು ಪಡೆಯಬಹುದಾಗಿರುತ್ತದೆ. ಈ ಸೌಲಭ್ಯಗಳನ್ನು ಪಡೆಯಲು ಕಾಲಕ್ಕೆ ಗುರುತಿನ ಚೀಟಿಯ ನವೀಕರಣವನ್ನು ಮಾಡಿಸುವುದು ಕಡ್ಡಾಯವಾಗಿರುತ್ತದೆ ಎಂದು ತಿಳಿಸಿ, ಅಸಂಘಟಿತ ಸಾಮಾಜಿಕ ಭದ್ರತಾ ಮಂಡಳಿ ಅಡಿ ಸಿಗುವ ಸೌಲಭ್ಯಗಳ ಕುರಿತು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕರಾದ ಬಸವರಾಜ ಹಿರೇಗೌಡ್ರ, ಕಾರ್ಮಿಕ ಇಲಾಖೆಯ ಕ್ಷೇತ್ರ ನಿರ್ವಾಹಕ ಹೇಮಂತ್ ಸಿಂಗ್, ಬಹದ್ದೂರ ಬಂಡಿ ಕಾರ್ಮಿಕ ಸಂಘದ ಅಧ್ಯಕ್ಷರಾದ ಮಹಿಬೂಬ ಮಣ್ಣೂರ, ಹೂವಿನಾಳ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷರಾದ ಇಂದ್ರಾನಾಯಕ ಸೇರಿದಂತೆ ವಿವಿಧ ಸಂಘಟನೆಯ ಪದಾಧಿಕಾರಿಗಳು, ಕಾರ್ಮಿಕರು ಉಪಸ್ಥಿತರಿದ್ದರು.
