Demand for the government to provide compensation and facilities to Dalits in cases of atrocities against Dalits,

ವರದಿ : ಪಂಚಯ್ಯ ಹಿರೇಮಠ.
ಕಲ್ಯಾಣಸಿರಿ ವಾರ್ತೆ ಕೊಪ್ಪಳ.
ಗಂಗಾವತಿ : ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ಎಂದು ಹೇಳಿದ ಡಾ. ಬಾಬಾಸಾಹೇಬ ಅಂಬೇಡ್ಕರ್ರವರ ಮಾತು ಈಗ ಸರಿಯಾಗಿ ಜಾರಿಯಾಗುತ್ತಿಲ್ಲ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲುಕಿನ ಮರಕುಂಬಿ ಗ್ರಾಮದಲ್ಲಿ 2000ನೇ ಇಸ್ವಿಯಿಂದ ದಲಿತರ ಬದುಕು ನರಕವಾಗಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ದ ಜಿಲ್ಲಾ ಕಾರ್ಯದರ್ಶಿ ನಿರುಪಾದಿ ಬೆಣಕಲ್ ಪ್ರಕಟಣೆಯಲ್ಲಿ ಬೇಸರ ವ್ಯಕ್ತಪಡಿಸಿದರು.
ಅವರು ಮಾ.14 ಶುಕ್ರವಾರ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳಲ್ಲಿ ದಲಿತರಿಗೆ ಪರಿಹಾರ ಹಾಗೂ ಇತರ ಬೇಡಿಕಗಳಿಗೆ ಒತ್ತಾಯಿಸಿ ಗಂಗಾವತಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಈ ಹಿಂದೆ 2002 ರಲ್ಲಿ ದಲಿತರನ್ನು ಕಂಬಕ್ಕೆ ಕಟ್ಟಿ ಹಾಕಿ ರಾತ್ರಿ ಥಳಿಸಲಾಗಿತ್ತು. ಆಗ ಐದು ಜನರಿಗೆ ಅಲ್ಪ-ಸ್ವಲ್ಪ ಹಣ ಪರಿಹಾರವಾಗಿ ಬಂದಿತ್ತು. ದಲಿತರ ಮೂಲಭೂತ ಸಮಸ್ಯೆಯಾದ ಮನೆ. ನಿವೇಶನ ಯೋಜನೆ, ಭೂ ಒಡೆತನ ಯೋಜನೆ ಅಡಿಯಲ್ಲಿ ಸಾಗುವಳಿ ಮಾಡಲು ಭುಮಿ, ಉದ್ಯೋಗ ಇವು ಯಾವುದೂ ಸಿಗಲಿಲ್ಲ, ಹಲವಾರು ಸಲ ಹೋರಾಟ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಪುನಃ 2014ರಲ್ಲಿ ದಲಿತರ ಮೇಲೆ ಹಲ್ಲೆ, ದೌರ್ಜನ್ಯ, ದಬ್ಬಾಳಿಕೆ ನಡೆದು ಕೆಲವು ಮನೆಗಳನ್ನೇ ಬೆಂಕಿ ಹಚ್ಚಿ ಸುಟ್ಟರು. ದಲಿತರನ್ನು ಜೀವಂತ ಸುಡಬೇಕೆಂಬ ಹುನ್ನಾರ ನಡೆಸಿದ್ದರು. ಅದೃಷ್ಟವಶಾತ್ ಪ್ರಾಣ ಹಾನಿಯಾಗಲಿಲ್ಲ. ಯಾಕೆ ದಲಿತರ ಮೇಲೆ ಈ ರೀತಿ ದಬ್ಬಾಳಿಕೆ ಎಂದು ಕೇಳುವಂತಿಲ್ಲ. ದಲಿತರು ಕ್ಷೌರದ ಅಂಗಡಿ ಮತ್ತು ಹೋಟೆಲ್ ಪ್ರವೇಶವನ್ನು ಬಯಸಿದ್ದೇ ದೊಡ್ಡ ತಪ್ಪಾಗಿದೆ ಎನ್ನುವ ಹಾಗಾಗಿದೆ. ಈ ಹಿಂದೆ ಸವರ್ಣಿಯರು ದಲಿತರೊಂದಿಗೆ ಸೌಹಾರ್ದವಾಗಿ ಇರುವಂತೆ ನಾಟಕ ಮಾಡಿದ್ದರು.
ಆದರೆ ಅವರ ಮನಸ್ಸಿನಲ್ಲಿ ದ್ವೇಷ ಕಡಿಮೆಯಾಗಿಲ್ಲ. ಎಲ್ಲರೊಂದಿಗೆ ಹೊಂದಾಣಿಕೆಯಾಗಿ ಬಾಳಬೇಕೆಂಬ ಸಂಘಟನೆಯ ಮತ್ತು ದಲಿತರ ಕನಸು ನನಸಾಗಿಲ್ಲ. ಈ ಕುರಿತು ಸಮಾಜ ಕಲ್ಯಾಣ ಇಲಾಖೆ ಗಮನಹರಿಸಿ ಮರಕುಂಬಿಯ ದಲಿತರಿಗೆ ಮನೆ ನಿವೇಶನ ಕೊಡಬೇಕು. ಅಂಬೇಡ್ಕರ ವಸತಿ ಯೋಜನೆಯಡಿಯಲ್ಲಿ ಗುಂಪು ನಿರ್ಮಾಣ ಮಾಡಿ ದೌರ್ಜನ್ಯಕ್ಕೊಳಗಾದ ಎಲ್ಲಾ ದಲಿತ ಕುಟುಂಬಗಳಿಗೆ ಪರಿಹಾರ ನೀಡಬೇಕು. ಭೂ ಒಡೆತನ ಯೋಜನೆ ಅಡಿಯಲ್ಲಿ ಎಲ್ಲಾ ದಲಿತರಿಗೆ ಸಾಗುವಳಿ ಮಾಡಲು ನೀರಾವರಿ ಭೂಮಿಯನ್ನು ಮಂಜೂರು ಮಾಡಬೇಕು. ದಲಿತ ನಿರುದ್ಯೋಗ ಯುವಕ- ಯುವತಿಯರಿಗೆ ಸರ್ಕಾರಿ ನೌಕರಿ ಕೊಡಬೇಕು. ದಲಿತರ ಜೀವನ ನಿರ್ವಹಣೆಗೆ ಬಡ್ಡ ರಹಿತ ನೇರ ಸಾಲ ನೀಡಬೇಕು.
ಮರಕುಂಬಿ ಗ್ರಾಮಕ್ಕೆ ಬಸ್ ಸೌಲಭ್ಯ ಒದಗಿಸಿ ಕೇಸರಹಟ್ಟಿ ಯಿಂದ ಮರಕುಂಬಿ ಗ್ರಾಮದವರೆಗೆ ರಸ್ತೆ ನಿರ್ಮಾಣ ಮಾಡಬೇಕು. ದೌರ್ಜನ್ಯಕ್ಕೊಳಗಾದ ದಲಿತ ಕುಟುಂಬಗಳ ಮಕ್ಕಳಿಗೆ ವಿದ್ಯಭ್ಯಾಸಕ್ಕಾಗಿ ಮುರಾರ್ಜಿ ವಸತಿ ಶಾಲೆಯಲ್ಲಿ ಮತ್ತು ಹಾಸ್ಟೇಲ್ ವ್ಯವಸ್ಥೆ ಮಾಡಬೇಕು. ದಲಿತರ ಕೇರಿಯಲ್ಲಿ ಅಂಬೇಡ್ಕರ ಸಮುದಾಯ ಭವನ ನಿರ್ಮಾಣ ಮಾಡಬೇಕು, ಹಲೈಗೊಳಗಾದ ದಲಿತ ಕುಟುಂಬದವರಿಗೆ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಹಾಸ್ಟೆಲ್ನಲ್ಲಿ ಅಡುಗೆ ಕೆಲಸ ನೀಡಬೇಕು.
ಮರಕುಂಬಿ ಪ್ರಕರಣದಲ್ಲಿ ಮನೆ ಕಳೆದುಕೊಂಡ ಫಲಾನುಭವಿಗಳಿಗೆ ಮನೆ ನಿರ್ಮಾಣ ಮಾಡಿಕೊಡಬೇಕು ಎಂಬುದು ನಮ್ಮ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಯ ಒತ್ತಾಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಸಮಿತಿಯ ಸದಸ್ಯರಾದ ಬಸವರಾಜ ಮರಕುಂಬಿ, ಗಂಗಾವತಿ ತಾಲೂಕ ಕಾರ್ಯದರ್ಶಿ ಹುಸೇನಪ್ಪ ಕೆ.. ಶಾಖಾ ಕಾರ್ಯದಶಿ ಹುಲುಗಪ್ಪ ಮರುಕುಂಬಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.