Atrocity against Dalit activist M. Nagesh from Hoskote | Inhumane act by police officers | Written complaint lodged with DCRe and the Human Rights Commission

ಹೊಸಕೋಟೆಯ ದಲಿತ ಹೋರಾಟಗಾರ ಎಂ. ನಾಗೇಶ್ ಮೇಲೆ ದೌರ್ಜನ್ಯ | ಪೊಲೀಸ್ ಅಧಿಕಾರಿಗಳ ಅಮಾನವೀಯ ಕೃತ್ಯ | ಡಿಸಿಆರ್ ಇ ಮತ್ತು ಮಾನವ ಹಕ್ಕುಗಳ ಆಯೋಗಕ್ಕೆ ಲಿಖಿತ ದೂರು

ಬೆಂಗಳೂರು, ಸೆ.13: ಹೊಸಕೋಟೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಬಿ.ಟಿ. ಗೋವಿಂದ ಹಾಗೂ ಸಿಬ್ಬಂದಿಗಳಾದ ರಮೇಶ್, ಗೋಪಾಲ್ ಇವರುಗಳ ವಿರುದ್ಧ ದಲಿತ ಹೋರಾಟಗಾರನಿಗೆ ಮಾನಸಿಕ ಹಿಂಸೆ ನೀಡಿ, ಅಮಾನವೀಯವಾಗಿ ಮೂತ್ರ ಕುಡಿಸಲು ಯತ್ನಿಸಿದ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ದಲಿತ ಮುಖಂಡ ಮತ್ತು ಹೋರಾಟಗಾರರಾದ ಎಂ. ನಾಗೇಶ್ (44) ಅವರು ಇಂದು ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ (ಡಿಸಿಆರ್ ಇ), ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಅಧಿಕೃತವಾಗಿ ಇಂದು ಲಿಖಿತ ದೂರು ಸಲ್ಲಿಸಿದ್ದಾರೆ.

ಘಟನೆಯ ಹಿನ್ನೆಲೆ: ರಾಯಚೂರು ಜಿಲ್ಲೆಯ ಹೊಕ್ರಾಣಿ ಗ್ರಾಮದ ವಿದ್ಯಾರ್ಥಿನಿ ಅಶ್ವಿನಿ ಅವರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ 2026ರ ಸೆಪ್ಟೆಂಬರ್ 3ರಂದು ಹೊಸಕೋಟೆಯಲ್ಲಿ ದಲಿತ ಸಂಘಟನೆಗಳ ವತಿಯಿಂದ ಮೇಣದಬತ್ತಿ ಮೂಲಕ ಹೋರಾಟವನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ, ಈ ಹೋರಾಟದ ಹಿನ್ನೆಲೆಯಲ್ಲಿ ಎಂ. ನಾಗೇಶ್ ರವರಿಗೆ ಅಮಾನವೀಯ ಕೃತ್ಯ ನಡೆದಿದೆ ಎಂದು ದೂರಿನಲ್ಲಿ ಸಮಗ್ರವಾಗಿ ವಿವರಿಸಲಾಗಿದೆ.
ದೂರಿನಲ್ಲಿರುವ ಪ್ರಮುಖ ಆರೋಪಗಳು (ದೂರಿನ ಪ್ರಕಾರ):
ಜಾತಿ ನಿಂದನೆ: ಹೊಸಕೋಟೆ ನಿವಾಸಿ ಶಶಿಕುಮಾರ್ ಎಂಬುವವರಿಗೆ ಸಹಾಯ ಮಾಡಲು ತೆರಳಿದ್ದ ದೂರುದಾರ ಎಂ. ನಾಗೇಶ್ ಅವರನ್ನು ತಡೆದು, “ನೀನೇನು ಹೊಲೆಮಾದಿಗನಾದರೆ ನಿನಗೆ ಎರಡು ಕೊಂಬಿದೆಯಾ?” ಎಂದು ಜಾತಿ ಹೆಸರು ಬಳಸಿ ನಿಂದಿಸಿ, ಕುತ್ತಿಗೆ ಪಟ್ಟಿ ಹಿಡಿದು ಜೀಪ್ಗೆ ತಳ್ಳಲಾಗಿದೆ.
ಅಮಾನವೀಯ ಕೃತ್ಯ: ಕೋಲಾರ ಹೆದ್ದಾರಿಯ ಸ್ವಾತಿ ಹೋಟೆಲ್ ಹತ್ತಿರದ ನಿರ್ಜನ ಪ್ರದೇಶಕ್ಕೆ ಬಲವಂತವಾಗಿ ಕರೆದೊಯ್ದು, ನೀರಿನ ಬಾಟಲಿಯಲ್ಲಿ ಮೂತ್ರ ವಿಸರ್ಜಿಸಿ ಬಾಯಿಗೆ ಕುಡಿಸಲು ಯತ್ನಿಸಲಾಗಿದೆ. ಈ ವೇಳೆ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಸಂವಿಧಾನದ ಕುರಿತು ಕೆಟ್ಟದಾಗಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ.
ದಾಖಲೆ ನಾಶ ಮತ್ತು ಹಣ ವಶ: ದೂರುದಾರರ ಮೊಬೈಲ್ ಕಿತ್ತುಕೊಂಡು ವಿಡಿಯೋಗಳನ್ನು ಸಹ ಡಿಲೀಟ್ ಮಾಡಲಾಗಿದ್ದು, ಜೇಬಿನಲ್ಲಿದ್ದ 10,000 ರೂ. ನಗದನ್ನು ಬಲವಂತವಾಗಿ ಕಿತ್ತುಕೊಳ್ಳಲಾಗಿದೆ.
ಹೋರಾಟಗಾರರ ಆಗ್ರಹ ಮತ್ತು ಎಚ್ಚರಿಕೆ: ಈ ಕೃತ್ಯವು ಎಸ್ಸಿ / ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿ ಮತ್ತು ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ಗಂಭೀರ ಅಪರಾಧವಾಗಿದೆ. ಕೂಡಲೇ ಸಂಬಂಧಿತ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ ಸರ್ಕಾರ ಹಾಗೂ ಗೃಹ ಸಚಿವರು, ಹಿರಿಯ ಪೊಲೀಸ್ ಅಧಿಕಾರಿಗಳು ಕೂಡಲೇ ಇದರ ಬಗ್ಗೆ ದೊಡ್ಡ ಮಟ್ಟದ ತನಿಖೆ ನಡೆಸಿ ಸಂತ್ರಸ್ತ ದಲಿತ ಹೋರಾಟಗಾರ ಎಂ. ನಾಗೇಶ್ ಅವರಿಗೆ ನ್ಯಾಯ ಕೊಡಿಸಬೇಕು. ಮುಖ್ಯವಾಗಿ ದೌರ್ಜನ್ಯ, ಜಾತಿ ನಿಂದನೆ,
ಮೂತ್ರ ವಿಸರ್ಜಿಸಿ ಬಾಯಿಗೆ ಕುಡಿಸಲು ಯತ್ನಿಸಿದ ಇಂತಹ ಕೃತ್ಯ ಎಸಗಿದ ಹೊಸಕೋಟೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಬಿ.ಟಿ. ಗೋವಿಂದ ಹಾಗೂ ಸಿಬ್ಬಂದಿಗಳಾದ ರಮೇಶ್, ಗೋಪಾಲ್ ಇವರುಗಳ ವಿರುದ್ಧ ಶೀಘ್ರವಾಗಿ ಎಫ್ಐಆರ್ ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸಲಾಗಿದೆ. ತಪ್ಪಿದ್ದಲ್ಲಿ ದಲಿತಪರ ಹಾಗೂ ಪ್ರಗತಿಪರ, ಸಮಾನ ಮನಸ್ಸುಳ್ಳ ಸಂಘಟನೆಗಳ ಒಕ್ಕೂಟದ ವತಿಯಿಂದ ಇಡೀ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

