Sankirtana Yatra held with great grandeur in Gangavathi

ಗಂಗಾವತಿಯಲ್ಲಿ ವಿಜೃಂಭಣೆಯಿಂದ ನಡೆದ ಸಂಕೀರ್ತನೆ ಯಾತ್ರೆ

ಧರ್ಮ ಮತ್ತು ದೇಶದ ಉಳಿವಿಗಾಗಿ ಹಿಂದೂಗಳೆಲ್ಲರೂ ಒಗ್ಗಟ್ಟಾಗಬೇಕು: ಸೋಮನಾಥಯ್ಯ ಸ್ವಾಮಿ ಕುಲಕರ್ಣಿ
ಗಂಗಾವತಿ, ಸೆ.3: ಗಂಗಾವತಿ ನಗರದಲ್ಲಿ ಸೆ.3ರಂದು ಸಂಕೀರ್ತನೆ ಯಾತ್ರೆ ಹಾಗೂ ಶೋಭಾಯಾತ್ರೆ ವಿಜೃಂಭಣೆಯಿಂದ ಜರುಗಿತು. ನಗರದ ವಿವಿಧ ಭಾಗಗಳಿಂದ ಆಗಮಿಸಿದ ನೂರಾರು ಸಂಖ್ಯೆಯ ಸರ್ವ ಸಮಾಜದ ಹಿಂದೂ ಬಾಂಧವರು, ಸತ್ಯನಾರಾಯಣ ದೇವಸ್ಥಾನ ಸಂಸ್ಕೃತ ಪಾಠಶಾಲೆಯ ವಿದ್ಯಾರ್ಥಿಗಳು, ಶ್ರೀ ಜ್ಞಾನೇಶ್ವರಿ ಭಜನಾ ಮಂಡಳಿ ಸದಸ್ಯರು ಸೇರಿದಂತೆ ವಿವಿಧ ಸಮಾಜಗಳ ಮಾತೆಯರು, ಹಿರಿಯರು ಹಾಗೂ ಭಕ್ತರು ಯಾತ್ರೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರುಗು ತಂದರು.
ಸಂಕೀರ್ತನೆ ಯಾತ್ರೆಯ ಸಂದರ್ಭದಲ್ಲಿ ಭಜನೆ, ಸಂಕೀರ್ತನೆ ಹಾಗೂ ಧಾರ್ಮಿಕ ಘೋಷಣೆಗಳೊಂದಿಗೆ ಶೋಭಾಯಾತ್ರೆ ನಡೆಯಿತು. ವಿವಿಧ ಸಮಾಜಗಳ ಜನರು ಒಗ್ಗಟ್ಟಿನಿಂದ ಭಾಗವಹಿಸುವ ಮೂಲಕ ಧಾರ್ಮಿಕ ಸಾಮರಸ್ಯ ಹಾಗೂ ಹಿಂದೂ ಸಮಾಜದ ಏಕತೆಯ ಸಂದೇಶ ಸಾರಿದರು.
ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸೋಮನಾಥಯ್ಯ ಸ್ವಾಮಿ ಕುಲಕರ್ಣಿ ಅವರು, ಧರ್ಮ ಮತ್ತು ದೇಶದ ಉಳಿವಿಗಾಗಿ ಹಿಂದೂಗಳೆಲ್ಲರೂ ಒಗ್ಗಟ್ಟಿನಿಂದ ಸಾಗಬೇಕು ಎಂದು ಕರೆ ನೀಡಿದರು. ಧಾರ್ಮಿಕ ಆಚರಣೆಗಳು ಹಾಗೂ ಸಂಸ್ಕೃತಿಯ ಸಂರಕ್ಷಣೆಯೊಂದಿಗೆ ಸಮಾಜದಲ್ಲಿ ಒಗ್ಗಟ್ಟು, ಶಾಂತಿ ಮತ್ತು ಸಹೋದರತ್ವ ಬೆಳೆಸುವ ಅಗತ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದೈವಜ್ಞ ಬ್ರಾಹ್ಮಣ ಸಮಾಜದ ಹಿರಿಯರಾದ ಸುಬ್ರಹ್ಮಣ್ಯಂ ರಾಯ್ಕರ್, ಸುಬ್ರಹ್ಮಣ್ಯ ದರೋಜಿ, ಟೈಗರ್ ಅಶೋಕ್, ವಿಶ್ವ ಹಿಂದೂ ಪರಿಷತ್ತಿನ ಉಗಮರಾಜ ಜೈನ್ ವಿಠಲನಾವ್ಡೇ, ಗಾಯಕರಾದ ಸದಾನಂದ ಶೇಟ್, ಗೋಪಾಲನಾಥ ಸ್ವಾಮಿ, ಡಾ. ಎಸ್.ಬಿ. ಹಂದ್ರಾಳ್, ಯೋಗ ಶಿಕ್ಷಕರಾದ ಸತ್ಯಂ ಸರ್, ರಘುನಾಥ್ ಪವಾರ್, ನೂಲ್ವಿ ಮಲ್ಲಿಕಾರ್ಜುನ ಸೇರಿದಂತೆ ಶ್ರೀ ಜ್ಞಾನೇಶ್ವರಿ ಮಹಿಳಾ ಮಂಡಳಿಯ ಸದಸ್ಯರು ಹಾಗೂ ವಿವಿಧ ಸಮಾಜಗಳ ಮಾತೆಯರು, ಹಿರಿಯರು ಮತ್ತು ಭಕ್ತರು ಉಪಸ್ಥಿತರಿದ್ದರು.
ಸಂಕೀರ್ತನೆ ಯಾತ್ರೆಯಲ್ಲಿ ನೂರಾರು ಜನರು ಭಾಗವಹಿಸಿದ್ದು, ಇಡೀ ನಗರದಲ್ಲಿ ಧಾರ್ಮಿಕ ವಾತಾವರಣ ನಿರ್ಮಾಣವಾಗಿತ್ತು.

